ಆ್ಯಪ್ನಗರ

ರಾಜಕೀಯ ಬಿಕ್ಕಟ್ಟು: ಕಾದು ನೋಡುವ ತಂತ್ರಕ್ಕೆ ಶರಣಾದ ಜೆಡಿಎಸ್‌

ಕಾನೂನು ತಜ್ಞರು ಹಾಗೂ ಹಿರಿಯ ನಾಯಕರೊಂದಿಗೆ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ದೇವೇಗೌಡರು ಚರ್ಚಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ದೇವೇಗೌಡ ಜತೆ ಮಾತುಕತೆ ನಡೆಸಿದರು.

Vijaya Karnataka 10 Jul 2019, 5:30 am
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರಕಾರ ಉಳಿಸಿಕೊಳ್ಳಲು ಎಐಸಿಸಿ ವರಿಷ್ಠರ ಸೂಚನೆ ಆಧರಿಸಿ ಸರ್ವಪ್ರಯತ್ನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾದು ನೋಡುವ ತೀರ್ಮಾನಕ್ಕೆ ಜೆಡಿಎಸ್‌ ಬಂದಿದೆ.
Vijaya Karnataka Web ದೇವೇಗೌಡ, ಕುಮಾರಸ್ವಾಮಿ
ದೇವೇಗೌಡ, ಕುಮಾರಸ್ವಾಮಿ


ಅಧಿವೇಶನಕ್ಕೆ ಮುನ್ನ ಮೈತ್ರಿ ಸರಕಾರ ಪತನದ ಸಾಧ್ಯತೆ ಇಲ್ಲ ಎಂದು ಜೆಡಿಎಸ್‌ ನಾಯಕರು ವಿಶ್ವಾಸದಲ್ಲಿದ್ದು, ಕಾಂಗ್ರೆಸ್‌ ಕಡೆಯಿಂದ ನಡೆಯುತ್ತಿರುವ ಪ್ರಯತ್ನಗಳ ಫಲಶೃತಿ ಏನೆಂಬುದನ್ನು ಕಾದು ನೋಡಲು ನಿರ್ಧರಿಸಿದ್ದಾರೆ. ಪಕ್ಷದ ಉಳಿದ ಶಾಸಕರು ಒಗ್ಗಟ್ಟು ಕಾಯ್ದುಕೊಳ್ಳುವಂತೆ ನಿಗಾವಹಿಸಲು ಜೆಡಿಎಸ್‌ ನಾಯಕತ್ವ ಒತ್ತು ನೀಡಿದೆ.

ದೋಸ್ತಿ ನಾಯಕರ ಪ್ರಯತ್ನ

ರಾಜಕೀಯ ಬಿಕ್ಕಟ್ಟಿನ ಎಲ್ಲ ಆಯಾಮಗಳ ಕುರಿತಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಸೋಮವಾರ ರಾತ್ರಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದು, ಸರಕಾರ ಇನ್ನಷ್ಟು ದಿನಗಳ ಕಾಲ ಮುಂದುವರಿಯಲು ಸಾಧ್ಯವಾದ ಎಲ್ಲ ಪ್ರಯತ್ನ ನಡೆಸಲು ಉಭಯ ನಾಯಕರು ನಿರ್ಧರಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ದೇವೇಗೌಡರ ನಿವಾಸಕ್ಕೆ ತೆರಳಿ ಈ ಎಲ್ಲ ವಿಚಾರಗಳ ಕುರಿತು ಚರ್ಚಿಸಿದರು. ಕಾಂಗ್ರೆಸ್‌ ಕಡೆಯಿಂದ ಗಂಭೀರ ಪ್ರಯತ್ನ ನಡೆದಿರುವ ಹಿನ್ನೆಲೆಯಲ್ಲಿ ಸಮಾಧಾನದಿಂದ ಇರುವಂತೆ ಸಿಎಂಗೆ ದೇವೇಗೌಡರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ತಜ್ಞರೊಂದಿಗೆ ಸಿಎಂ ಸಮಾಲೋಚನೆ

ಸಿಎಂ ಕುಮಾರಸ್ವಾಮಿ ಅವರೂ ಮಂಗಳವಾರ ಬಿಕ್ಕಟ್ಟು ಕುರಿತಂತೆ ಆಪ್ತರೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಹಿರಿಯ ನ್ಯಾಯವಾದಿ ದೊರೈರಾಜು ಸೇರಿದಂತೆ ಕೆಲವು ಕಾನೂನು ಮತ್ತು ಸಂವಿಧಾನ ಪರಿಣಿತರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದರು. ಸ್ಪೀಕರ್‌ ಕೈಗೊಳ್ಳಬಹುದಾದ ತೀರ್ಮಾನದ ಸಾಧ್ಯಾಸಾಧ್ಯತೆಗಳು, ಸಾಂವಿಧಾನಿಕ ಮುಖ್ಯಸ್ಥರು ಸದ್ಯದ ಬಿಕ್ಕಟ್ಟಿನಲ್ಲಿ ವಹಿಸಬಹುದಾದ ಪಾತ್ರ, ಅಧಿವೇಶನದಲ್ಲಿ ಸೃಷ್ಟಿಯಾಗಬಹುದಾದ ಇಕ್ಕಟ್ಟು ಈ ಎಲ್ಲ ವಿಚಾರಗಳ ಕುರಿತಂತೆ ತಜ್ಞರಿಂದ ಅಭಿಪ್ರಾಯ, ಸಲಹೆ ಮತ್ತು ಮಾರ್ಗದರ್ಶನ ಪಡೆದುಕೊಂಡರು ಎನ್ನಲಾಗಿದೆ.

ಇದಾದ ಬಳಿಕ ರೆಸಾರ್ಟ್‌ನಲ್ಲಿರುವ ಪಕ್ಷದ ಸಚಿವರು ಮತ್ತು ಶಾಸಕರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಇಷ್ಟೆಲ್ಲಾ ಅಸ್ಥಿರತೆ ನಡುವೆಯೂ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನಾನಾ ನೀರಾವರಿ ನಿಗಮಗಳ ಸಭೆ ನಡೆಸಿದರು. ಸಚಿವ ಡಿ.ಕೆ.ಶಿವಕುಮಾರ್‌, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಸಭೆಯಲ್ಲಿದ್ದರು. ಇದಾದ ಬಳಿಕ ಸಿಎಂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ