ಆ್ಯಪ್ನಗರ

ಬೆಳಗ್ಗೆ ಬಿಜೆಪಿ ಜತೆ ನಿಶ್ಚಿತಾರ್ಥ, ರಾತ್ರಿ ಕಾಂಗ್ರೆಸ್ ಕೈ ಹಿಡಿದ ಜೆಡಿಎಸ್‌

ಜಿಲ್ಲಾ ಪಂಚಾಯಿತಿಯಲ್ಲಿಯ ನಾಟಕೀಯ ಬೆಳವಣಿಗೆ; ಬೆಳಗ್ಗೆ ಬಿಜೆಪಿ ಜತೆ ನಿಶ್ಚಿತಾರ್ಥ, ರಾತ್ರಿ ಕೈ ಹಿಡಿದ ಜೆಡಿಎಸ್‌

Vijaya Karnataka 23 Feb 2019, 11:25 am
ಮೈಸೂರು: ರಾಜ್ಯದಲ್ಲಿ ಮೈತ್ರಿ ಸರಕಾರ ಅಸ್ತಿತ್ವದಲ್ಲಿದ್ದರೂ ಮೈಸೂರು ಜಿ.ಪಂನಲ್ಲಿ ಬಿಜೆಪಿ ಜತೆ ಅಧಿಕಾರ ಹಂಚಿಕೆ ಮುಂದುವರಿಸುವ ನಿರ್ಧಾರದಿಂದ ಜೆಡಿಎಸ್‌ ಕೊನೆಗೂ ಹಿಂದೆ ಸರಿದಿದೆ.
Vijaya Karnataka Web congress jds

ಕಾಂಗ್ರೆಸ್‌ನ ತೀವ್ರ ವಿರೋಧದ ಬಳಿಕ ಜೆಡಿಎಸ್‌ ವರಿಷ್ಠ ದೇವೇಗೌಡ ಹಾಗೂ ಸಚಿವ ಸಾ.ರಾ.ಮಹೇಶ್‌ ಮಧ್ಯಪ್ರವೇಶದಿಂದ ಮೈತ್ರಿಗೆ ಜೆಡಿಎಸ್‌ ಒಪ್ಪಿಕೊಂಡಿದ್ದು, ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ.
ಇದಕ್ಕೂ ಮುನ್ನ ಬಿಜೆಪಿ ಜತೆಗಿನ ಮೈತ್ರಿ ಮುಂದುವರಿಸಲು ಸ್ಥಳೀಯ ನಾಯಕರು ನಿರ್ಧಾರ ತೆಗೆದುಕೊಂಡಿದ್ದರು. ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಸಾ.ರಾ.ಮಹೇಶ್‌ ಮತ್ತು ಸಂಸದ ಪ್ರತಾಪ್‌ ಸಿಂಹ ಜಿ.ಪಂನಲ್ಲಿ ಮೈತ್ರಿ ಮುಂದುವರಿಸುವುದಾಗಿ ತಿಳಿಸಿದ್ದರು. ಆದರೆ ರಾತ್ರಿ 11ಕ್ಕೆ ತುರ್ತು ಪತ್ರಿಕಾಗೋಷ್ಠಿ ಕರೆದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಪಕ್ಷದ ವರಿಷ್ಠರ ಸೂಚನೆಯಂತೆ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಆದರೆ ಸ್ಥಳೀಯ ಜೆಡಿಎಸ್‌ ನಾಯಕರು ಮತ್ತು ಕಾರ್ಯಕರ್ತರು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಹಾಸನ, ಮಂಡ್ಯದಲ್ಲಿ ಈ ಕೂಗು ಬಲವಾಗಿದೆ. ಇನ್ನೊಂದೆಡೆ ಜೆಡಿಎಸ್‌ನ ಈ ನಡೆ ಬಗ್ಗೆ ಕಾಂಗ್ರೆಸ್‌ನಲ್ಲಿ ತೀವ್ರ ಅಸಮಾಧಾನ ಮೂಡಿದೆ. ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು. ಕಾಂಗ್ರೆಸ್‌ ನಾಯಕರ ತೀವ್ರ ವಿರೋಧದ ನಂತರವಷ್ಟೆ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸುವ ನಿರ್ಧಾರವನ್ನು ಜೆಡಿಎಸ್‌ ನಾಯಕರು ಕೈಬಿಟ್ಟಿದ್ದಾರೆ.

ಬಿಜೆಪಿಗೆ ಅಧಿಕಾರವಿಲ್ಲ!
ಕಳೆದ ಚುನಾವಣೆಯಲ್ಲಿ 49 ಸ್ಥಾನಗಳ ಪೈಕಿ ಜೆಡಿಎಸ್‌ 21, ಕಾಂಗ್ರೆಸ್‌ 30 ಮತ್ತು ಬಿಜೆಪಿ 8 ಸ್ಥಾನಗಳಲ್ಲಿ ಗೆದ್ದಿತ್ತು. ಜೆಡಿಎಸ್‌ ಮತ್ತು ಬಿಜೆಪಿ ಸೇರಿ 30 ತಿಂಗಳ ಸೂತ್ರದಡಿ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದವು. ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ ದಕ್ಕಿತ್ತು. ಮೂವತ್ತು ತಿಂಗಳ ಬಳಿಕ ಜೆಡಿಎಸ್‌ ಅಧಿಕಾರ ಹಸ್ತಾಂತರಕ್ಕೆ ಮುಂದಾದರೂ ಕಾಂಗ್ರೆಸ್‌ನ ಒತ್ತಡದಿಂದ ಈಗ ಬಿಜೆಪಿಗೆ ಕೈಕೊಟ್ಟಂತಾಗಿದೆ.

ಕಾಂಗ್ರೆಸ್‌ ಒತ್ತಡ
30 ತಿಂಗಳ ಅಧಿಕಾರ ಮುಗಿದು ಅಧ್ಯಕ್ಷ ಉಪಾಧ್ಯಕ್ಷರು ರಾಜೀನಾಮೆ ನೀಡುತ್ತಿದ್ದಂತೆಯೇ ಬಿಜೆಪಿಯೊಂದಿಗೆ ಮತ್ತೆ ಕೈಜೋಡಿಸದೆ ತನ್ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಕಾಂಗ್ರೆಸ್‌ ತೀವ್ರ ಒತ್ತಡ ಹಾಕಿತ್ತು. ಲೋಕಸಭಾ ಚುನಾವಣೆ ಸಂದರ್ಭ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂದು ಹೇಳಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಮುಂತಾದ ಪ್ರಮುಖರು ಕಾಂಗ್ರೆಸ್‌ನ ಒತ್ತಡವನ್ನು ತಳ್ಳಿಹಾಕಿದ್ದು, ಸ್ಥಳೀಯವಾಗಿ ಕಾಂಗ್ರೆಸ್‌ಗಿಂತ ಬಿಜೆಪಿಯೇ ವಾಸಿ ಎನ್ನುವುದನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡರಿಗೆ ಮನದಟ್ಟು ಮಾಡಿಕೊಟ್ಟಿದ್ದರು.

ರೆಸಾರ್ಟ್‌ನಲ್ಲಿ ಜತೆಯಾಗಿ ವಾಸ್ತವ್ಯ
ವಿಶೇಷವೆಂದರೆ, ಜೆಡಿಎಸ್‌ ಹಾಗೂ ಬಿಜೆಪಿ ಸದಸ್ಯರು ಗುರುವಾರ ರಾತ್ರಿ ನಗರದ ಹೊರವಲಯದ ಹೋಟೆಲ್‌ನಲ್ಲಿ ಸಭೆ ನಡೆಸಿದ ನಂತರ ಅಲ್ಲಿಯೇ ಉಳಿದುಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಬಿಜೆಪಿ ಸದಸ್ಯರೊಂದಿಗೆ ಕೊಡಗಿನ ಕುಶಾಲನಗರದ ರೆಸಾರ್ಟ್‌ಗೆ ತೆರಳಿದರು. ಶನಿವಾರ ಮುಂಜಾನೆ ಎರಡೂ ಪಕ್ಷಗಳ ಸದಸ್ಯರು ಮೈಸೂರಿಗೆ ಆಗಮಿಸಲಿದ್ದಾರೆ. ಆದರೆ, ಈ ನಡುವೆ ಸಮೀಕರಣಗಳೇ ಬದಲಾಗಿವೆ.

ಒಟ್ಟು ಸ್ಥಾನ 49
ಜೆಡಿಎಸ್‌ 21
ಕಾಂಗ್ರೆಸ್‌ 20
ಬಿಜೆಪಿ 8

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ