ಆ್ಯಪ್ನಗರ

ಬಿಜೆಪಿ ವಿರೋಧಿಗಳಿಗೆ ಬೆಂಬಲ: ಶರದ್‌ ಯಾದವ್‌ ಘೋಷಣೆ

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಗುರಿಗಾಗಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ನೊಂದಿಗೆ ಕೈಜೋಡಿಸಲು ಸಿದ್ಧವಿರುವುದಾಗಿ ಜೆಡಿಯು ...

Vijaya Karnataka 31 Mar 2018, 5:00 am
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಗುರಿಗಾಗಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ನೊಂದಿಗೆ ಕೈಜೋಡಿಸಲು ಸಿದ್ಧವಿರುವುದಾಗಿ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಶರದ್‌ ಯಾದವ್‌ ಘೋಷಿಸಿದ್ದಾರೆ.
Vijaya Karnataka Web shard yadav


ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ''ದೇಶ, ಸಂವಿಧಾನ ಉಳಿಯಬೇಕಾದರೆ ಬಿಜೆಪಿಯನ್ನು ಸೋಲಿಸಬೇಕು. ಕರ್ನಾಟಕದಲ್ಲಿ ನಡೆಯುತ್ತಿರುವ ಈ ಚುನಾವಣೆ ಬರೀ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೇ ಸಂದೇಶ ನೀಡಲಿದೆ.ಇಲ್ಲಿ ಬಿಜೆಪಿ ಸೋತರೆ ಇಡೀ ದೇಶದಲ್ಲೇ ಸೋತಂತೆ,'' ಎಂದು ಹೇಳಿದರು.

''ಹಿಂದೆ ರಾಜ್ಯದಲ್ಲಿ ನಮ್ಮ ಪಕ್ಷದ ರಾಮಕೃಷ್ಣ ಹೆಗಡೆ ಹಾಗೂ ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿಗಳಾಗಿದ್ದರು. ಅವರ ಮಾದರಿ ಆಡಳಿತವನ್ನು ರಾಜ್ಯದ ಜನ ಮರೆತಿಲ್ಲ. ಬಿಜೆಪಿ ವಿರುದ್ಧ ಜನಾದೇಶ ನೀಡಬೇಕೆಂಬ ಜೆಡಿಯು ಕರೆಗೆ ಖಂಡಿತ ರಾಜ್ಯದ ಜನ ಸ್ಪಂದಿಸಲಿದ್ದಾರೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

''ದೇಶದೆಲ್ಲೆಡೆ ನಾವೇ ಅಧಿಕಾರ ನಡೆಸಬೇಕು ಎಂಬ ಸರ್ವಾಧಿಕಾರಿ ಮನೋಭಾವ ನರೇಂದ್ರ ಮೋದಿ ಅವರದ್ದಾಗಿದೆ. ಕೇವಲ ಮಾತು, ತಂತ್ರಗಾರಿಕೆಯಿಂದ ದೇಶದ ಜನರನ್ನು ಮೂರ್ಖರಾಗಿ ಮಾಡಲು ಸಾಧ್ಯವಿಲ್ಲ. ಬಿಜೆಪಿ ವಿರುದ್ಧ ಈಗಾಗಲೇ ರಾಷ್ಟ್ರಮಟ್ಟದಲ್ಲಿ 'ಸಂವಿಧಾನ ರಕ್ಷಿಸಿ' ಹೋರಾಟ ಆರಂಭವಾಗಿದೆ,'' ಎಂದು ಹೇಳಿದರು.

ಹೊಸ ಪಕ್ಷ

''ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರು ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಆದರೆ, ಪಕ್ಷದ ಚಿನ್ಹೆ ನಿತೀಶ್‌ ಕುಮಾರ್‌ ಅವರಿಗೆ ಲಭ್ಯವಾಗಿದ್ದು, ಚಿನ್ಹೆ ವಿಚಾರದಲ್ಲಿ ಕೋರ್ಟ್‌ ತೀರ್ಮಾನ ಕಾಯುತ್ತಿದ್ದು, ಒಂದು ವೇಳೆ ಜೆಡಿಯು ಚಿನ್ಹೆ ನಮಗೆ ಸಿಗದಿದ್ದರೆ ಹೊಸ ಪಕ್ಷ ಕಟ್ಟಲಾಗುವುದು'' ಎಂದು ಶರದ್‌ ಯಾದವ್‌ ತಿಳಿಸಿದರು. ಪಕ್ಷದ ರಾಜ್ಯಾಧ್ಯಕ್ಷ ಡಾ.ಎಂ.ಪಿ. ನಾಡಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ