ಆ್ಯಪ್ನಗರ

ದೇಶಾದ್ಯಂತ ಸ್ಫೋಟಕ್ಕೆ ಸಂಚು ರೂಪಿಸಿದ್ದ ಜೆಎಂಬಿ

ಇಲ್ಲಿಯ ಚಿಕ್ಕಬಾಣಾವರದ ಬಾಡಿಗೆ ಮನೆಯಲ್ಲಿ ವಾಸವಿದ್ದ 'ಜೆಎಂಬಿ' ಹೆಸರಿನ ...

Vijaya Karnataka 10 Jul 2019, 5:00 am
ಬೆಂಗಳೂರು: ಇಲ್ಲಿಯ ಚಿಕ್ಕಬಾಣಾವರದ ಬಾಡಿಗೆ ಮನೆಯಲ್ಲಿ ವಾಸವಿದ್ದ 'ಜೆಎಂಬಿ' ಹೆಸರಿನ ಉಗ್ರ ಸಂಘಟನೆಯ ಐವರು ಉಗ್ರರು ಸ್ಫೋಟಕಗಳನ್ನು ತಯಾರಿಸಿಕೊಂಡು ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಸಜ್ಜಾಗುತ್ತಿದ್ದರು.
Vijaya Karnataka Web 0907-2-2-00000 (2)


ಈ ಆತಂಕಕಾರಿ ಸಂಗತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ 'ಎನ್‌ಐಎ' ಅಧಿಕಾರಿಗಳು ಖಚಿತಪಡಿಸಿದ್ದಾರೆ. ಶಂಕಿತ ಉಗ್ರರ ಪೈಕಿ ಹಬೀಬುರ್‌ ರೆಹಮಾನ್‌ ನೀಡಿದ ಮಾಹಿತಿ ಆಧರಿಸಿ ಚಿಕ್ಕಬಾಣಾವರದಲ್ಲಿ ಶೋಧ ನಡೆಸಿದಾಗ ಪತ್ತೆಯಾದ ಸ್ಫೋಟಕ ಸಾಮಗ್ರಿ ಮತ್ತು ಅಲ್ಲಿದ್ದವರ ಹೆಸರುಗಳನ್ನು ಮಂಗಳವಾರ ಎನ್‌ಐಎ ಅಧಿಕೃತವಾಗಿ ಪ್ರಕಟಿಸಿದೆ.

ಸಮೀವುಲ್ಲಾ ಎಂಬುವರ ಬಾಡಿಗೆ ಮನೆಯಲ್ಲಿ ಪತ್ತೆಯಾಗಿರುವ ಸ್ಫೋಟಕ ಸಾಧನಗಳ ಪೈಕಿ, ಟಿಫನ್‌ ಬಾಕ್ಸ್‌ ಬಳಸಿ ಐದು ಗ್ರೆನೇಡ್‌ ಸಿದ್ಧಪಡಿಸಲಾಗಿತ್ತು. ನಾನಾ ರೀತಿಯ ಸಾಧನಗಳನ್ನು ಬಳಸಿ ಸುಧಾರಿತ ಸ್ಫೋಟಕ ಮತ್ತು ಸ್ಫೋಟಕ ರಾಕೆಟ್‌ಗಳನ್ನು ತಯಾರಿಸಲು ಅಗತ್ಯವಾದ ಟೈಮರ್‌, ಮೂರು ಎಲೆಕ್ಟ್ರಿಕ್‌ ಸರ್ಕೂ್ಯಟ್‌ ಇತ್ಯಾದಿ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇವುಗಳನ್ನು ಕರ್ನಾಟಕ ಸೇರಿದಂತೆ ದೇಶದ ನಾನಾಕಡೆ ಭಯೋತ್ಪಾದಕ ಚಟುವಟಿಕೆ ನಡೆಸಲು ಸಿದ್ಧಪಡಿಸಲಾಗಿತ್ತು. ಈ ಮನೆಗೆ ಹಲವು ಶಂಕಿತ ಉಗ್ರರು ಭೇಟಿ ನೀಡಿದ್ದರು ಎನ್ನುವುದು ತನಿಖೆಯಿಂದ ಗೊತ್ತಾಗಿದೆ.

ಸಮೀವುಲ್ಲಾ ಮನೆಯಲ್ಲಿ ಜೆಎಂಬಿ ಉಗ್ರ ಸಂಘಟನೆಯ ಸಜ್ಜದ್‌ ಅಲಿ, ಖಾದರ್‌ ಖಾಜಿ, ನಜೀರ್‌ ಶೇಖ್‌ ಅಲಿಯಾಸ್‌ ಪತ್ಲಾ ಅನಾಸ್‌, ಅತಾವುರ್‌ ರೆಹಮಾನ್‌ ಅಲಿಯಾಸ್‌ ನಜ್ರುಲ್‌ ಇಸ್ಲಾಂ ಅಲಿಯಾಸ್‌ ಮೋಟಾ ಅನಾಸ್‌, ಆಸೀಫ್‌ ಇಕ್ಬಾಲ್‌ ಅಲಿಯಾಸ್‌ ನದೀಮ್‌, ಬಾಂಗ್ಲಾ ದೇಶದ ಆರೀಫ್‌ ಮತ್ತು ರಾಮನಗರದಲ್ಲಿ ಬಂಧಿತನಾಗಿದ್ದ ಜಹೀದುಲ್‌ ಇಸ್ಲಾಂ ಅಲಿಯಾಸ್‌ ಕೌಸರ್‌ ಉಳಿದುಕೊಂಡಿದ್ದರು ಎನ್ನುವುದು ಬಯಲಾಗಿದೆ.

ಸುಳ್ಳು ಹೆಸರಲ್ಲಿ ಬಾಡಿಗೆ ಮನೆ

''ಮನೆಯ ಕೆಳ ಮಹಡಿಯ ಕೊಠಡಿಯನ್ನು ಬಾಡಿಗೆಗೆ ಕೊಟ್ಟಿದ್ದೆ. ಐಜುಲ್‌ ಮೊಂಡಲ್‌ ಪಶ್ಚಿಮ ಬಂಗಾಳದ ಬಂಕಾಪುರದ ಕತುಲ್‌ಪುರ್‌ ವಿಳಾಸ ನೀಡಿದ್ದ. ಮತ್ತೊಬ್ಬನ ಹೆಸರನ್ನು ಪಶ್ಚಿಮ ಬಂಗಾಳದ ರಫಿಕುಲ್‌ ಮಿಯಾ ಎಂದು ತಿಳಿಸಲಾಗಿತ್ತು. ಮೊದಲು ನಾವಿಬ್ಬರೇ ಇರುತ್ತೇವೆ ಎಂದವರು, ನಂತರ ಮತ್ತಿಬ್ಬರು ಸೇರಿಸಿಕೊಳ್ಳಲು ಒಪ್ಪಿಗೆ ಪಡೆದರು. ಆ ನಂತರ ಈ ಮನೆಗೆ ಹಲವರು ಬಂದು ಹೋಗುತ್ತಿದ್ದರು,'' ಎಂದು ಮಾಲೀಕ ಸಮೀವುಲ್ಲಾ ತಿಳಿಸಿದ್ದಾನೆ.

ಎನ್‌ಐಎ ಅಧಿಕಾರಿಗಳು ಮನೆ ಮಾಲೀಕ ಸಮೀವುಲ್ಲಾನಿಗೆ ಹಲವು ಫೋಟೊಗಳನ್ನು ತೋರಿಸಿದ್ದು, ಈ ಪೈಕಿ ಮೂವರ ಗುರುತು ಪತ್ತೆ ಹಚ್ಚಲಾಗಿದೆ. 2018ರ ಮೇ ಮತ್ತು ಜೂನ್‌ನಲ್ಲಿ ಶಂಕಿತ ಉಗ್ರರು ಮನೆಯಲ್ಲಿ ಉಳಿದುಕೊಂಡಿದ್ದರು.

ವಸ್ತುಗಳನ್ನು ಮನೆಯಲ್ಲೇ ಬಿಟ್ಟು ಹೋದರು

''ಹೇಳದೆ ಕೇಳದೆ ಮನೆ ಖಾಲಿ ಮಾಡಿದವರು ಮನೆಯಲ್ಲಿ ಉಪಕರಣ, ಯಂತ್ರಗಳೂ ಸೇರಿದಂತೆ ಹಲವು ವಸ್ತುಗಳನ್ನು ಬಿಟ್ಟು ಹೋಗಿದ್ದರು. ಬೇರೆಯವರಿಗೆ ಮನೆ ಬಾಡಿಗೆ ನೀಡುವಾಗ ಅವುಗಳನ್ನು ಎತ್ತಿಕೊಂಡು ಬೇರೆಡೆ ಸಂಗ್ರಹಿಸಿಟ್ಟಿದ್ದೆ,'' ಎಂದು ಮನೆ ಮಾಲೀಕ ಸಮೀವುಲ್ಲಾ ಮಾಹಿತಿ ನೀಡಿದ್ದಾನೆ.

''ಆರೋಪಿಗಳು ಇರಿಸಿದ್ದ ಅಪಾಯಕಾರಿ ವಸ್ತುಗಳ ಪೈಕಿ ಸ್ಫೋಟಕ ಉತ್ಪಾದನೆಗೆ ಬಳಸುವ 9 ಎಂಎಂ ಗುಂಡು, ಸುಧಾರಿತ ಗ್ರೆನೇಡ್‌ ಶೆಲ್‌ ಸೇರಿವೆ. 2014ರ ಬದ್ರ್ವಾನ್‌ ಸ್ಫೋಟಕ್ಕೆ ಸಂಬಂಧಿಸಿ ಎನ್‌ಐಎ ನಡೆಸುತ್ತಿರುವ ತನಿಖೆಗೆ ಈ ಸ್ಫೋಟಕ ಸಾಧನಗಳು ನಂಟು ಹೊಂದಿವೆ. ಪತ್ತೆಯಾಗಿರುವ ಸ್ಫೋಟಕಗಳು ಅತ್ಯಂತ ಅಪಾಯಕಾರಿಯಾಗಿದ್ದವು,'' ಎಂದು ಎನ್‌ಐಎ ತಿಳಿಸಿದೆ.

ಸೆರೆ ಸಿಗುವ ಮುನ್ನ ಪರಾರಿ

2018ರ ಆಗಸ್ಟ್‌ ಮೊದಲ ವಾರ ರಾಮನಗರದಲ್ಲಿ ಶಂಕಿತ ಉಗ್ರ ಕೌಸರ್‌ ಅಲಿಯಾಸ್‌ ಮುನೀರ್‌ ಎನ್‌ಐಎ ಬಲೆಗೆ ಬಿದ್ದಿದ್ದ. ಆದರೆ, ಅದೇ ತಂಡದ ಉಳಿದವರು ಒಂದು ತಿಂಗಳು ಮೊದಲೇ ಚಿಕ್ಕಬಾಣಾವರದ ಮನೆಯನ್ನು ಖಾಲಿ ಮಾಡಿದ್ದರು.

ಸಂಚುಕೋರರು ಎಲ್ಲಿಯವರು?

ನಜೀರ್‌ ಶೇಖ್‌: ಕೋಲ್ಕೊತಾ, ಪಶ್ಚಿಮ ಬಂಗಾಳ

ನಜ್ರುಲ್‌ ಇಸ್ಲಾಂ: ಧುಬ್ರಿ, ಅಸ್ಸಾಂ

ಆಸೀಫ್‌ ಇಕ್ಬಾಲ್‌: ಕೋಲ್ಕೊತಾ, ಪಶ್ಚಿಮ ಬಂಗಾಳ

ಆರೀಫ್‌: ಬರ್ಪೇಟಾ, ಬಾಂಗ್ಲಾ ದೇಶ

ಜಹೀದುಲ್‌ ಇಸ್ಲಾಂ: ಬರ್ಪೇಟಾ, ಬಾಂಗ್ಲಾ ದೇಶ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ