ಆ್ಯಪ್ನಗರ

ಗೌರಿ ಲಂಕೇಶ್ ಹತ್ಯೆ: ಚಾರ್ಜ್‌ ಶೀಟ್‌ನಲ್ಲಿ ಸನಾತನ ಸಂಸ್ಥೆ ಹೆಸರು

ಅಮೋಲ್‌ ಕಾಳೆಯೇ ಹತ್ಯೆಯ ಪ್ರಮುಖ ಕಿಂಗ್‌ಪಿನ್‌ ಎಂದು ಒತ್ತಿ ಹೇಳಲಾಗಿದೆ.

Vijaya Karnataka 24 Nov 2018, 7:21 am
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಪಟ್ಟಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಸಂಜೆ ಕೊಕಾ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. ಅಮೋಲ್‌ ಕಾಳೆಯೇ ಹತ್ಯೆಯ ಪ್ರಮುಖ ಕಿಂಗ್‌ಪಿನ್‌ ಎಂದು ಒತ್ತಿ ಹೇಳಲಾಗಿದೆ. 9235 ಪುಟಗಳ 15 ಬೃಹತ್‌ ಸಂಪುಟಗಳನ್ನು ದೊಡ್ಡ ಟ್ರಂಕ್‌ನಲ್ಲಿ ತುಂಬಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳಿಗೂ ಗೋವಾ ಮೂಲದ ಸನಾತನ ಸಂಸ್ಥೆ ಜತೆ ನಂಟಿತ್ತು ಎನ್ನುವುದನ್ನು ಎಸ್‌ಐಟಿ ದಾಖಲಿಸಿದೆ. ಆದರೆ, ಪ್ರಕರಣದ ಪ್ರಮುಖ ಸಾಕ್ಷ್ಯವಾದ ಪಿಸ್ತೂಲ್‌ ಬಗ್ಗೆ ಸ್ಪಷ್ಟ ವಿವರಣೆ ನೀಡಿಲ್ಲ.
Vijaya Karnataka Web 7A2CDB82-DAA4-4CD8-A495-E3A36DC6D398


2023ರ ವೇಳೆಗೆ ಭಾರತದಲ್ಲಿ ಸನಾತನ ಹಿಂದೂಗಳ ಹೊರತಾಗಿ ಬೇರೆ ಯಾರೂ ಇರಬಾರದು ಎನ್ನುವ ದೂರದ ಉದ್ದೇಶ ಇಟ್ಟುಕೊಂಡಿರುವ ಆರೋಪಿಗಳಿಗೆ ಸನಾತನ ಧರ್ಮದ ವಿರುದ್ಧ ಮಾತನಾಡುವ ಹಿಂದೂಗಳೇ ಪ್ರಮುಖ ಗುರಿ. ಮುಸ್ಲಿಮರು ನಮ್ಮ ಶತ್ರುಗಳಲ್ಲ, ಸನಾತನ ಧರ್ಮ ಟೀಕಿಸುವವರನ್ನು ಮಾತ್ರ ಉಳಿಸಬಾರದು ಎನ್ನುವ ನೇರ ಗುರಿ ಇಟ್ಟುಕೊಂಡು ಆರೋಪಿಗಳು ಸರಣಿ ಸಂಘಟಿತ ಕೃತ್ಯಗಳನ್ನು ನಡೆಸುತ್ತಿದ್ದರು. ಅದರ ಭಾಗವಾಗಿಯೇ ಗೌರಿ ಲಂಕೇಶ್‌ ಹತ್ಯೆ ನಡೆದಿದೆ. ಆರೋಪಿಗಳು ಸನಾತನ ಸಂಸ್ಥೆ ನಡೆಸಿದ ಧಾರ್ಮಿಕ ಸಭೆಗಳಲ್ಲಿ ಭಾಗಿ ಆಗಿ ಅವುಗಳಿಂದ ಪ್ರೇರಣೆ ಪಡೆದಿದ್ದರು ಎನ್ನುವ ಸಂಗತಿಗಳನ್ನು ಆರೋಪಪಟ್ಟಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಅಮೋಲ್‌ ಕಾಳೆಯೇ ಹತ್ಯೆಯ ಪ್ರಮುಖ ರೂವಾರಿ. ಹತ್ಯೆಗೆ ತಂಡ ಕಟ್ಟಿದ್ದು, ತಂಡದಲ್ಲಿ ಯಾರಾರ‍ಯರು ಇರಬೇಕು ಎನ್ನುವುದನ್ನು ನಿರ್ಧರಿಸಿದ್ದು, ಅವರಿಗೆ ಸೂಕ್ತ ತರಬೇತಿ ಒದಗಿಸಿದ್ದು ಮತ್ತು ಕೃತ್ಯ ಜಾರಿ ಮಾಡಿದ ಆರೋಪ ಈತನ ಮೇಲಿದೆ. ಸಾಕ್ಷಿ ನಾಶ ಹಾಗೂ ಕೃತ್ಯದಲ್ಲಿ ತೊಡಗಿಸಿಕೊಂಡವರೆಲ್ಲರಿಗೂ ಹೊರ ರಾಜ್ಯಗಳಲ್ಲಿ ಆಶ್ರಯ ಒದಗಿಸಿಕೊಟ್ಟಿದ್ದು ಈತನೇ ಎನ್ನುವುದನ್ನು ಆರೋಪಪಟ್ಟಿ ಹೇಳಿದೆ. ಉಳಿದಂತೆ ಯಾರಾರ‍ಯರ ಪಾತ್ರ ಏನೇನಾಗಿತ್ತು ಎನ್ನುವುದನ್ನು ಕಾಲಂ 7ರಲ್ಲಿ ವಿವರಿಸಲಾಗಿದೆ. ಬಂಧಿತ ಆರೋಪಿಗಳಿಗೆ ಧರ್ಮದ ಹೆಸರಿನಲ್ಲಿ ಕೊಲೆ ಮಾಡುವ ಮಟ್ಟಕ್ಕೂ ಬ್ರೈನ್‌ವಾಶ್‌ ಮಾಡಲಾಗಿತ್ತು ಎನ್ನುವುದನ್ನೂ ಆರೋಪ ಪಟ್ಟಿ ಹೇಳುತ್ತಿದೆ.

ಬಂಧನದ ಸರಣಿ

ಕೆ.ಟಿ.ನವೀನ್‌ಕುಮಾರ್‌ನಿಂದ ಪ್ರವೀಣ್‌ ಅಲಿಯಾಸ್‌ ಸುಜಿತ್‌, ಈತನಿಂದ ಅಮೋಲ್‌ ಕಾಳೆ, ಅಮಿತ್‌ ದೇಗ್ವೇಕರ್‌. ಈ ಮೂವರು ಕೊಟ್ಟ ಸುಳಿವಿನ ಮೇಲೆ ಹುಬ್ಬಳ್ಳಿಯ ಅಮಿತ್‌ ಬದ್ದಿ-ಗಣೇಶ್‌ ಮಿಸ್ಕಿನ್‌ ಬಂಧನ. ಇವರ ವಿಚಾರಣೆ ವೇಳೆ ಸಿಕ್ಕ ಹೆಚ್ಚಿನ ಮಾಹಿತಿ ಆಧರಿಸಿ ಮನೋಹರ್‌ ಯಡವೆ-ಪರಶುರಾಮ್‌ ವಾಗ್ಮೋರೆ, ಈತನಿಂದ ಮೋಹನ್‌ ನಾಯಕ್‌ ಬಂಧನ. ಇವರೆಲ್ಲರ ವಿಚಾರಣೆಯಿಂದ ಮಡಿಕೇರಿಯ ರಾಜೇಶ್‌ ಬಂಗೇರಾನ ಸುಳಿವು. ಬಂಗೇರಾನ ವಿಚಾರಣೆಯಲ್ಲಿ ಸಿಕ್ಕ ಸುಳಿವನ ಆಧಾರದಲ್ಲಿ ಭರತ್‌ ಕುರ್ಣೆಯನ್ನು ಬಂಧಿಸಿದ ಎಸ್‌ಐಟಿ, ಈ ವೇಳೆ ತಮಗೆ ಸಿಕ್ಕ ಸುಳಿವುಗಳನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ ಮತ್ತು ಸಿಬಿಐಗೆ ರವಾನಿಸಿತು. ಎಸ್‌ಐಟಿಯ ಸುಳಿವಿನ ಮೇಲೆ ಮಹಾರಾಷ್ಟ್ರದ ಎಸ್‌ಐಟಿ ತಂಡ ಉಳಿದ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾಗಿ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ನಾಲ್ಕು ಪ್ರಕಾರದ ಆರೋಪಿಗಳು

1. ಹತ್ಯೆಗೆ ಯೋಜನೆ ರೂಪಿಸಿದ್ದು, ಸಂಚು ಮಾಡಿದ್ದು .

2. ಕೃತ್ಯದಲ್ಲಿ ನೇರವಾಗಿ ಭಾಗಿ ಆದವರು.

3. ಕೃತ್ಯಕ್ಕೆ ಪ್ರತ್ಯಕ್ಷ ನೆರವು ನೀಡಿದವರು.

4. ಕೃತ್ಯಕ್ಕೆ ಪರೋಕ್ಷ ನೆರವು ಒದಗಿಸಿದವರು.

ಬಂಧಿತರು ಮತ್ತು ಅವರ ಪಾತ್ರ ಏನು?

ಹೆಸರು ಕೃತ್ಯದಲ್ಲಿ ಪಾತ್ರ

* ಅಮೋಲ್‌ ಕಾಳೆ ಹತ್ಯೆಯ ಸೂತ್ರದಾರ, ಹತ್ಯೆಗೆ ತಂಡವನ್ನು ಆರಿಸಿ-ಸಜ್ಜುಗೊಳಿಸಿದ್ದು, ಹತ್ಯೆ ನಂತರ ಆರೋಪಿಗಳಿಗೆ ಆಶ್ರಯ ಕಲ್ಪಿಸಿಕೊಟ್ಟಿದ್ದು.

* ಪರಶುರಾಮ್‌ ವಾಗ್ಮೋರೆ ಶೂಟರ್‌, ಹತ್ಯೆ ಸಂಬಂಧ ಸಭೆಗಳಲ್ಲಿ ಭಾಗಿ

* ಗಣೇಶ್‌ ಮಿಸ್ಕಿನ್‌ ವಾಗ್ಮೋರೆಗೆ ಬೈಕ್‌ ಚಾಲಕ, ಹತ್ಯೆ ಸಂಬಂಧದ ಸಭೆಗಳಲ್ಲಿ ಭಾಗಿ

* ಸುಜಿತ್‌ ಪ್ರವೀಣ್‌ ಹತ್ಯೆಗೆ ವಾಗ್ಮೋರೆ ಮತ್ತು ಮಿಸ್ಕಿನ್‌ ಅವರನ್ನು ಫಿಕ್ಸ್‌ ಮಾಡಿದ್ದು, ಸಂಚಿನಲ್ಲಿ ಸಕ್ರಿಯ, ಹತ್ಯೆಗೆ ಗನ್‌ ಒದಗಿಸಲು ಯತ್ನಿಸಿದ್ದು .

* ಅಮಿತ್‌ ದೇಗ್ವೇಕರ್‌ ಹತ್ಯೆ ಸಂಚಿನಲ್ಲಿ ಸಕ್ರಿಯ, ಹತ್ಯೆಯ ಆರಂಭಿಕ ಸಂಚುಕೋರರಲ್ಲಿ ಒಬ್ಬ

* ರಾಜೇಶ್‌ ಬಂಗೇರಾ ಹತ್ಯೆ ಶಂಕಿತರಿಗೆ ಮತ್ತು ಇವರ ಭೂಗತ ಸಂಘಟನೆಗೆ ಶಸ್ತ್ರ ತರಬೇತಿ

* ಕುಣಿಗಲ್‌ ಸುರೇಶ್‌ ಹತ್ಯೆ ಆರೋಪಿಗಳಿಗೆ ಸೀಗೇಹಳ್ಳಿಯಲ್ಲಿ ಮನೆ ಮಾಡಿ ಕೊಟ್ಟಿದ್ದು, ಹತ್ಯೆಗೂ ಮೊದಲು ಮತ್ತು ನಂತರ ಆರೋಪಿಗಳಿಗೆ ಆಶ್ರಯ ನೀಡಿದ್ದು, ಹತ್ಯೆಗೆ ಬಳಸಿದ ಗನ್ನನ್ನು ಬಚ್ಚಿಟ್ಟುಕೊಂಡು ಸುಧನ್ವ ಕೊಂಡಾಲೇಕರ್‌ಗೆ ತಲುಪಿಸಿದ್ದು, ಸಾಕ್ಷಿನಾಶ

* ಮೋಹನ್‌ ನಾಯಕ್‌ ಕುಂಬಳಗೋಡಿನಲ್ಲಿ ಆರೋಪಿಗಳಿಗೆ ಮೊದಲು ಮನೆ ಮಾಡಿ ಕೊಟ್ಟಿದ್ದು, ಸಂಚಿನಲ್ಲಿ ಸಕ್ರಿಯ

* ಅಮಿತ್‌ ಬದ್ದಿ ಹತ್ಯೆ ನಂತರ ವಾಗ್ಮೋರೆ, ಮಿಸ್ಕಿನ್‌ ಕೈಯಿಂದ ಗನ್‌, ಬಟ್ಟೆ, ಬ್ಯಾಗ್‌, ಇತ್ಯಾದಿ ಸಂಗ್ರಹಿಸಿ ಸುರೇಶ್‌ ಮನೆಗೆ ತಲುಪಿಸಿದ್ದು, ವಾಗ್ಮೋರೆ ಮತ್ತು ಆರೋಪಿಗಳನ್ನು ಸುರಕ್ಷಿತವಾಗಿ ಪಾರು ಮಾಡಿದ್ದು, ಸಂಚಿನಲ್ಲಿ ಸಕ್ರಿಯ

* ಮನೋಹರ್‌ ದುಂಡಪ್ಪ ಯಡವೆ ಸಂಚಿನಲ್ಲಿ ಸಕ್ರಿಯ, ಗೌರಿ ಮನೆಯ ರೇಖಿ ಮಾಡಿದ್ದು, ಸಿಸಿಟಿವಿಗಳು ಇರುವ ಬಗ್ಗೆ ಪರಿಶೀಲನೆ ನಡೆಸಿ ಅಮೋಲ್‌ ಕಾಳೆಗೆ ವರದಿ ನೀಡಿದ್ದು

* ಭರತ್‌ ಕುರ್ಣೆ ಶಸ್ತ್ರ ತರಬೇತಿಗೆ ತನ್ನ ರೆಸಾರ್ಟ್‌ ಬಿಟ್ಟು ಕೊಟ್ಟಿದ್ದು, ಅವರಿಗೆ ಓಡಾಡಲು ಮನೆ, ವಾಹನದ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಿಕೊಟ್ಟಿದ್ದು

* ಕೆ.ಟಿ.ನವೀನ್‌ಕುಮಾರ್‌ ಸಂಚಿನಲ್ಲಿ ಸಕ್ರಿಯ, ಹತ್ಯೆಗೆ ಗನ್‌ ಮತ್ತು ಬುಲೆಟ್‌ ಹೊಂದಿಸಲು ಓಡಾಡಿ ಎರಡು ಬುಲೆಟ್‌ ಕೊಟ್ಟಿದ್ದು

* ಸುಧನ್ವ ಗೊಂಡಾಲೇಕರ್‌ ಗೌರಿ ಹತ್ಯೆಯ ಗನ್‌ ಬೆಂಗಳೂರಿನಿಂದ ವಾಪಸ್‌ ಪುಣೆಗೆ ತೆಗೆದುಕೊಂಡು ಹೋಗಿದ್ದು, ಸಂಚಿನಲ್ಲಿ ಭಾಗಿ

* ವೈಭವ್‌ ರೌತ್‌ ಈತನ ಮನೆಯಲ್ಲಿ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ವಶಪಡಿಸಿಕೊಂಡ 12 ಗನ್‌, ಬಾಂಬ್‌ಗಳು, ಸ್ಫೋಟಕಗಳಲ್ಲಿ ಗೌರಿ ಹತ್ಯೆಗೆ ಬಳಸಲಾದ ಗನ್‌ ಕೂಡ ಸಿಕ್ಕಿದೆ, ಹತ್ಯೆ ಸಂಚು ಮತ್ತು ಸಿದ್ಧತೆಯಲ್ಲಿ ಸಕ್ರಿಯ

* ಸಚಿನ್‌ ಅಂದುರೆ ಅಮೋಲ್‌ ಕಾಳೆಯ ಸಹಚರ, ಗೌರಿ ಹತ್ಯೆ ಸಂಚು ಮತ್ತು ಆರೋಪಿಗಳಿಗೆ ಆಶ್ರಯ ಒದಗಿಸಿದ್ದು, ಹತ್ಯೆಗೆ ಬಳಸಿದ ಗನ್ನನ್ನು ಬಚ್ಚಿಟ್ಟಿದ್ದು

* ಶರದ್‌ ಕಲಾಸ್ಕರ್‌ ಅಮೋಲ್‌ ಕಾಳೆಯ ಸಹಚರ, ಗೌರಿ ಹತ್ಯೆ ಆರೋಪಿಗಳಿಗೆ ಆಶ್ರಯ ಸೇರಿ ನಾನಾ ನೆರವು ನೀಡಿದ್ದು

* ಶ್ರೀಕಾಂತ್‌ ಪಂಗಾರ್ಕರ್‌ ಉತ್ತರ ಪ್ರದೇಶದಿಂದ ಗನ್‌ಗಳನ್ನು ಖರೀದಿಸಿ ತಂದಿದ್ದು, ಆರೋಪಿಗಳಿಗೆ ನಾನಾ ರೀತಿಯ ನೆರವು ನೀಡಿದ್ದು

ಚಾರ್ಜ್‌ಶೀಟ್‌ ಪ್ರಕಾರ, ಬಂಧಿತ ಆರೋಪಿಗಳು ಗುರುತಿಸಿಕೊಂಡಿದ್ದ ಸಂಘಟನೆಗಳು

* ಸನಾತನ ಸಂಸ್ಥೆ * ಶ್ರೀರಾಮ ಸೇನೆ * ಹಿಂದೂ ಜನ ಜಾಗೃತಿ ಸಮಿತಿ * ಶಿವಸೇನಾ * ಶಿವ ಪ್ರತಿಷ್ಠಾನ * ಹಿಂದೂ ಯುವ ಸೇನಾ

ಹಿಟ್‌ ಲಿಸ್ಟ್‌ನಲ್ಲಿ 26 ಮಂದಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ