ಆ್ಯಪ್ನಗರ

ಕಟೀಲ್‌ಗೆ ನಡ್ಡಾ ಕರೆ, ಶಾಸಕರು, ಮುಖಂಡರ ವಾಚಾಳಿತನಕ್ಕೆ ಬ್ರೇಕ್‌ ಹಾಕಲು ಸೂಚನೆ

ಸಂಪುಟ ವಿಸ್ತರಣೆ, ಪಕ್ಷದ ಸಂಘಟನೆ ವಿಚಾರದಲ್ಲಿ ಹಲವರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಪಕ್ಷಕ್ಕೆ ಮುಜುಗರ ತರುವ ನಡವಳಿಕೆಯನ್ನು ಪ್ರದರ್ಶಿಸುತ್ತಿದ್ದಾರೆ. ಇದು ಗಮನಕ್ಕೆ ಬಂದಿದ್ದು, ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದೆ ಎಂದು ಕಟೀಲ್‌ಗೆ ನಡ್ಡಾ ತಿಳಿಸಿದ್ದಾರೆ.

Vijaya Karnataka 3 Dec 2020, 12:02 am
ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಕರೆ ಮಾಡಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಶಾಸಕರು ಹಾಗೂ ಮುಖಂಡರ ವಾಚಾಳಿತನಕ್ಕೆ ಕಡಿವಾಣ ಹಾಕುವಂತೆ ಸೂಚಿಸಿದ್ದಾರೆ.
Vijaya Karnataka Web nalin kumar kateel


ಸಂಪುಟ ವಿಸ್ತರಣೆ ಹಾಗೂ ಪಕ್ಷದ ಸಂಘಟನೆ ವಿಚಾರದಲ್ಲಿ ಹಲವರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಪಕ್ಷಕ್ಕೆ ಮುಜುಗರ ತರುವ ನಡವಳಿಕೆಯನ್ನೂ ಪ್ರದರ್ಶಿಸುತ್ತಿದ್ದಾರೆ. ಇದು ಗಮನಕ್ಕೆ ಬಂದಿದ್ದು, ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದೆ. ಇಂತಹ ಸಂಗತಿಯನ್ನು ಪಕ್ಷದ ವೇದಿಕೆಯಲ್ಲಿ ಹಂಚಿಕೊಳ್ಳಬೇಕು. ಬದಲಾಗಿ ಮಾಧ್ಯಮದ ಮುಂದೆ ಹೋಗಬಾರದೆಂದು ತಾಕೀತು ಮಾಡುವಂತೆ ಕಟೀಲ್‌ ಅವರಿಗೆ ನಡ್ಡಾ ನಿರ್ದೇಶನ ನೀಡಿದ್ದಾರೆ ಎಂದು ಗೊತ್ತಾಗಿದೆ.

ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ವಿಷಯದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ನಿಗಮ ಮಂಡಳಿ ನೇಮಕ ಸಂಬಂಧದಲ್ಲೂ ಪರ, ವಿರೋಧ ಅಭಿಪ್ರಾಯವಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ಗುಂಪು ಸಭೆ ನಡೆಸುವುದರ ಜತೆಗೆ ಮೇಲಿಂದ ಮೇಲೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಮಿತ್ರಮಂಡಳಿ ಕೋಟಾದವರೂ ಸಭೆ ನಡೆಸುತ್ತಿದ್ದಾರೆ. ಯಾರಿಗೋ ಸಚಿವ ಸ್ಥಾನ ಕೊಡಿಸಲು ಇನ್ಯಾರೋ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಈ ಎಲ್ಲದಕ್ಕೂ ಬ್ರೇಕ್‌ ಬೀಳಬೇಕು ಎನ್ನುವುದು ಹೈಕಮಾಂಡ್‌ ಆಶಯ ಎನ್ನಲಾಗಿದೆ.

ನನ್ನ ಸೋಲಿಗೆ ಸಿಪಿ ಯೋಗೇಶ್ವರ್‌ ಕಾರಣ: ಎಚ್‌ ವಿಶ್ವನಾಥ್
ಕರ್ನಾಟಕದಲ್ಲೇ ಯಾಕೆ ಹೀಗೆ?

ಈ ಹಿಂದೆಯೂ 2008-2013ರ ಅವಧಿಯಲ್ಲೂ ಆಂತರಿಕ ಕಚ್ಚಾಟದಿಂದಲೇ ರಾಜ್ಯದಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿತ್ತು. ಕರ್ನಾಟಕ ಬಿಜೆಪಿಯಲ್ಲಿ ಮಾತ್ರ ಇಷ್ಟೊಂದು ಗೊಂದಲವಾಗುತ್ತಿದೆ. ಗುಜರಾತ್‌, ಮಧ್ಯ ಪ್ರದೇಶ, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ ಸೇರಿದಂತೆ ಪಕ್ಷ ಸಂಘಟಿತವಾಗಿರುವ ಇತರ ರಾಜ್ಯಗಳಲ್ಲಿ ಇಂತಹ ಸಮಸ್ಯೆಯಿಲ್ಲ. ಕರ್ನಾಟಕ ಬಿಜೆಪಿ ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನಡ್ಡಾ ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಕ್ರಮ ಕೈಗೊಳ್ಳುವರೇ?

ಹೈಕೋರ್ಟ್‌ ಆದೇಶದಂತೆ ತಮಗೆ ಸಚಿವ ಸ್ಥಾನ ಸಿಗುವುದಿಲ್ಲವೆಂದು ಖಾತರಿಯಾಗುತ್ತಿದ್ದಂತೆ ಮೇಲ್ಮನೆ ಸದಸ್ಯ ಎಚ್‌ ವಿಶ್ವನಾಥ್‌ ಬಿಡುಬೀಸಾಗಿ ಮಾತನಾಡುತ್ತಿದ್ದಾರೆ. ಅವರ ಹೇಳಿಕೆ ಪಕ್ಷಕ್ಕೆ ಇರಿಸುಮುರಿಸು ತರುವಂತಿದೆ. ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಸಿಪಿ ಯೋಗೀಶ್ವರ್‌ಗೆ ಸಚಿವ ಸ್ಥಾನ ನೀಡುವುದನ್ನು ವಿರೋಧಿಸುತ್ತಿರುವ ರೇಣುಕಾಚಾರ್ಯ ಮತ್ತಿತರರು ಕೂಡ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ನಡ್ಡಾ ಸೂಚನೆ ಹಿನ್ನೆಲೆಯಲ್ಲಿ ಇಂತಹ ಚಟುವಟಿಕೆ ನಿಯಂತ್ರಿಸಲು ಕಟೀಲ್‌ ಕಠಿಣ ಕ್ರಮ ಕೈಗೊಳ್ಳುವರೇ ಎಂಬ ಪ್ರಶ್ನೆ ಎದುರಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ