ಆ್ಯಪ್ನಗರ

ಮೈಸೂರಿನಲ್ಲಿಯೇ ಕನ್ನಡ ಶಾಸ್ತ್ರೀಯ ಭಾಷೆ ಕೇಂದ್ರ, ಮೂರು ಎಕರೆ ಜಾಗ ನಿಗದಿ - ಸಿ.ಟಿ. ರವಿ

"ಶಾಸ್ತ್ರೀಯ ಭಾಷಾ ಕೇಂದ್ರ ಸ್ಥಾಪನೆಗೆ ಸಂಬಂಧಪಟ್ಟ ವಿವಾದಗಳೆಲ್ಲವೂ ಪರಿಹಾರಗೊಂಡಿದೆ. ಯೋಜನೆಗೆ ಅಗತ್ಯವಾದ ವಿಸ್ತೃತ ವರದಿ ತಯಾರಿಸುವುದಕ್ಕೆ ಸೂಚನೆ ನೀಡಲಾಗಿದೆ," ಎಂದು ಸಿಟಿ ರವಿ ಹೇಳಿದರು.

Vijaya Karnataka 4 Feb 2020, 8:38 pm
ಬೆಂಗಳೂರು: ಕನ್ನಡ ಶಾಸ್ತ್ರೀಯ ಭಾಷೆ ಕೇಂದ್ರ ಸ್ಥಾಪನೆಯ ಮೇಲೆ ಆವರಿಸಿದ್ದ 'ಬಾಲಗ್ರಹ' ಪೀಡೆ ಕೊನೆಗೂ ಬಿಡುಗಡೆಯಾಗಿದ್ದು ಅಂತಿಮವಾಗಿ ಮೈಸೂರಿನಲ್ಲಿಈ ಕೇಂದ್ರ ಸ್ಥಾಪನೆ ಮಾಡುವುದಕ್ಕೆ ರಾಜ್ಯ ಸರಕಾರ ನಿರ್ಧರಿಸಿದೆ.
Vijaya Karnataka Web CT Ravi


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್‌ ನಾಗಾಭರಣ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ,"ಮೈಸೂರಿನ ವಿಜಯಶ್ರೀ ಬಡಾವಣೆಯಲ್ಲಿ 3 ಎಕರೆ ಜಾಗ ಗುರುತಿಸಲಾಗಿದೆ," ಎಂದು ಹೇಳಿದರು.

"ಶಾಸ್ತ್ರೀಯ ಭಾಷಾ ಕೇಂದ್ರ ಸ್ಥಾಪನೆಗೆ ಸಂಬಂಧಪಟ್ಟ ವಿವಾದಗಳೆಲ್ಲವೂ ಪರಿಹಾರಗೊಂಡಿದೆ. ಯೋಜನೆಗೆ ಅಗತ್ಯವಾದ ವಿಸ್ತೃತ ವರದಿ ತಯಾರಿಸುವುದಕ್ಕೆ ಸೂಚನೆ ನೀಡಲಾಗಿದೆ," ಎಂದು ಹೇಳಿದರು.

15ಕ್ಕೆ ಹಸ್ತಾಂತರ ?

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಗಳ ಪ್ರಕಾರ, ವಿಜಯಶ್ರೀ ಬಡಾವಣೆಯಲ್ಲಿರುವ ಕಟ್ಟಡ ಸಮೇತ ಇದೇ ತಿಂಗಳು 15 ಅಥವಾ 16ರಂದು ಜಮೀನನ್ನು ಭಾಷಾ ಸಂಸ್ಥಾನಕ್ಕೆ ಹಸ್ತಾಂತರಿಸಲಾಗುತ್ತದೆ. ಆ ಬಳಿಕ ಕೇಂದ್ರಕ್ಕೆ ತನ್ನದೇ ಆದ ಜಾಗ ಸಿಕ್ಕಿದೆ ಎಂಬ ವರದಿಯನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ. ಇದಾದ ಬಳಿಕ ಶಾಸ್ತ್ರೀಯ ಭಾಷಾ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಆಡಳಿತ ಸಮಿತಿ (ಗೌರ್ನಿಂಗ್‌ ಕೌನ್ಸಿಲ್‌ )ನ್ನು ಆರಂಭಿಸಬೇಕಾಗುತ್ತದೆ. ಇದಾದ 2-3 ತಿಂಗಳು ಕಳೆದ ಬಳಿಕವಷ್ಟೇ ಅಧಿಕೃತವಾಗಿ ಅಧ್ಯಯನ, ಸಂಶೋಧನೆ, ಸಾಹಿತ್ಯ ಪ್ರಕಟಣೆ ಸೇರಿದಂತೆ ಇನ್ನಿತರ ಚಟುವಟಿಕೆಗಳು ಆರಂಭಗೊಳ್ಳಲಿವೆ.

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಈ ಕೇಂದ್ರವನ್ನು ಎಲ್ಲಿ ಸ್ಥಾಪಿಸಬೇಕೆಂಬ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು. ಮೈಸೂರಿನಲ್ಲಿ ಹಂಗಾಮಿಯಾಗಿ ಸ್ಥಾಪಿಸಲಾಗಿದ್ದ ಕೇಂದ್ರವನ್ನು ಜ್ಞಾನಭಾರತಿಯ ಕಲಾಗ್ರಾಮದ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಪೂರ್ಣಪ್ರಮಾಣದಲ್ಲಿ ಜಾಗ ಇಲ್ಲದ ಕಾರಣ ಕೇಂದ್ರದಿಂದ ನಿರೀಕ್ಷಿತ ನೆರವು ಲಭ್ಯವಾಗಿರಲಿಲ್ಲ.

ಶಾಸ್ತ್ರೀಯ ಭಾಷಾ ಕೇಂದ್ರ ಸ್ಥಾಪನೆಗೆ ಸಂಬಂಧಪಟ್ಟಂತೆ ಮುಂದಿನ 2-3 ತಿಂಗಳಲ್ಲಿ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತವೆ, ಹಿಂದಿನಂತೆ ವಿಳಂಬವಾಗುವುದಿಲ್ಲ.
- ಟಿಎಸ್‌ ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಕನ್ನಡದ ರೀತಿ ತಮಿಳು ಹಾಗೂ ತೆಲುಗು ಭಾಷೆಗೂ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಲಾಗಿದೆ. ಆದರೆ ತಮಿಳುನಾಡಿನಲ್ಲಿ ಮಾತ್ರ ಈ ವಿಚಾರದಲ್ಲಿ ಚುರುಕಿನ ಕೆಲಸ ನಡೆದಿದೆ. ಆಂಧ್ರ ಹಾಗೂ ತೆಲಂಗಾಣದಲ್ಲೂ ಶಾಸ್ತ್ರೀಯ ಭಾಷಾ ಅಧ್ಯಯನದ ಆಡಳಿತ ಸಮಿತಿ ರಚನೆಯಾಗಿಲ್ಲ ಎಂದು ತಿಳಿದು ಬಂದಿದೆ.

'ಅನುದಾನ ಒಂದು ದಿನದ ಬಿಲ್ಲಿಗಿಂತ ಕಡಿಮೆ'

''2018-19ನೇ ವರ್ಷದಲ್ಲಿ ಸಂಘ-ಸಂಸ್ಥೆ ಮತ್ತೆ ಟ್ರಸ್ಟ್‌ಗಳಿಗೆ ನೀಡುತ್ತಿದ್ದ ಅನುದಾನ ಮತ್ತು ಪ್ರಾಯೋಜಕತ್ವವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಲಭಿಸುತ್ತಿರುವ ಅನುದಾನದಲ್ಲಿ ಕಸ ಹೊಡೆಯುವುದಕ್ಕೂ ಸಾಧ್ಯವಿಲ್ಲ ಎಂದು ಸಂಘ-ಸಂಸ್ಥೆಗಳ ಮುಖಂಡರು ಅಲವತ್ತುಕೊಂಡಿದ್ದಾರೆ. ಹೀಗಾಗಿ ಅನುದಾನ ಪರಿಷ್ಕರಣೆ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗುವುದು. ನಮ್ಮ ಇಲಾಖೆ ವಾರ್ಷಿಕ ಅನುದಾನ ಲೋಕೋಪಯೋಗಿ ಇಲಾಖೆಯ ಒಂದು ದಿನದ ಬಿಲ್‌ಗಿಂತಲೂ ಕಡಿಮೆ,'' ಎಂದು ಸಿಟಿ ರವಿ ಬೇಸರ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ