ಆ್ಯಪ್ನಗರ

ಉಸಿರು ನಿಂತರೆ ಸತ್ತು ಹೋಗುತ್ತೇವೆ: ಸ್ಪೀಕರ್‌

'ಉಸಿರು ನಿಂತರೆ ಸತ್ತು ಹೋಗುತ್ತೇವೆ, ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ಸಿಗದಿದ್ದರೆ ಸರಕಾರ ಬಿದ್ದು ಹೋಗುತ್ತದೆ ' - ಈ ರೀತಿಯ ಹೇಳಿಕೆ ನೀಡುವ ಮೂಲಕ ...

Vijaya Karnataka 11 Jul 2019, 5:00 am
ಬೆಂಗಳೂರು: 'ಉಸಿರು ನಿಂತರೆ ಸತ್ತು ಹೋಗುತ್ತೇವೆ, ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ಸಿಗದಿದ್ದರೆ ಸರಕಾರ ಬಿದ್ದು ಹೋಗುತ್ತದೆ ' - ಈ ರೀತಿಯ ಹೇಳಿಕೆ ನೀಡುವ ಮೂಲಕ ಸ್ಪೀಕರ್‌ ರಮೇಶ್‌ ಕುಮಾರ್‌ ಮತ್ತೊಮ್ಮೆ ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ನಿಯೋಗದ ಜತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಅತ್ಯಂತ ನಿರಾಳ ಭಾವದಲ್ಲಿ ಈ ಹೇಳಿಕೆ ನೀಡಿದ್ದಾರೆ. ಜತೆಗೆ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂಬ ತಮ್ಮ ನಿಲುವನ್ನು ಪ್ರಶ್ನಿಸಿ 10 ಶಾಸಕರು ಸುಪ್ರೀಂ ಕೋರ್ಟ್‌ ಮೊರೆ ಹೋಗಿರುವ ವಿಚಾರವೂ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
Vijaya Karnataka Web 0907-2-2-214


ಪ್ರತಿಪಕ್ಷ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರು ಬಂದು ನನ್ನನ್ನು ಭೇಟಿಯಾಗಿದ್ದಾರೆ. ಶಾಸಕರ ರಾಜೀನಾಮೆ ವಿಚಾರವನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿದರು. ಸಂವಿಧಾನ ಹಾಗೂ ನಿಯಮಕ್ಕೆ ಅನುಸಾರವಾಗಿ ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದೇನೆ. ಅದೇ ರೀತಿ ಸುಧಾಕರ್‌ ಹಾಗೂ ಎಂ.ಟಿ.ಬಿ.ನಾಗರಾಜ್‌ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆ ಕ್ರಮಬದ್ಧವಾಗಿದೆ. ಅವರಿಗೆ ಜುಲೈ 12ರಂದು ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ವಿಡಿಯೋ ರೆಕಾರ್ಡಿಂಗ್‌
ಬಿಜೆಪಿ ನಾಯಕರು ತಮ್ಮ ಕೊಠಡಿಗೆ ಬಂದು ನಡೆಸಿದ ಮಾತುಕತೆಯನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣಗೊಳಿಸಿದ್ದಾರೆ.
ಹತ್ತು ಶಾಸಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಕಾನೂನು ಸಮಸ್ಯೆ ಉಂಟಾಗಬಾರದೆಂಬ ಕಾರಣಕ್ಕೆ ಸ್ಪೀಕರ್‌ ಈ ರೀತಿಯ ಜಾಣ ನಡೆ ಅನುಸರಿಸಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಈ ಸಂದರ್ಭದಲ್ಲಿ ಎಚ್ಚರಿಕೆಯ ಮಾತುಗಳನ್ನಷ್ಟೇ ಆಡಿದ್ದಾರೆ.

ಬರುವವರೆಗೂ ಕಾದ ಬಿಜೆಪಿ

ಸಚಿವ ಎಂ.ಟಿ.ಬಿ.ನಾಗರಾಜ್‌ ಹಾಗೂ ಶಾಸಕ ಡಾ.ಕೆ.ಸುಧಾಕರ್‌ ರಾಜೀನಾಮೆ ಸಲ್ಲಿಸಲು ಬರುವ ಹಿನ್ನೆಲೆಯಲ್ಲಿ ಸ್ಪೀಕರ್‌ ತಮ್ಮ ಕಚೇರಿಯಿಂದ ಹೊರ ಹೋಗದಂತೆ ತಡೆಯಲು ಬಿಜೆಪಿ ನಿಯೋಗ ಮಾತುಕತೆ ಬಳಿಕವೂ ಲೋಕಾಭಿರಾಮ ಚರ್ಚೆ ನಡೆಸುವ ಮೂಲಕ ಸ್ಪೀಕರ್‌ನ್ನು ತಬ್ಬಿಬ್ಬುಗೊಳಿಸಿದರು.

ಇವರಿಬ್ಬರು ರಾಜೀನಾಮೆ ನೀಡಲು ಬರುತ್ತಿದ್ದಂತೆ ಸ್ಪೀಕರ್‌ ಕಚೇರಿಯಿಂದ ಬಿಜೆಪಿ ನಿಯೋಗ ಎದ್ದು ಹೊರಕ್ಕೆ ಬಂತು. ನಾಗರಾಜ್‌ ಹಾಗೂ ಸುಧಾಕರ್‌ ರಾಜೀನಾಮೆ ಸಲ್ಲಿಕೆ ಪ್ರಕ್ರಿಯೆ ಕೇವಲ ಹತ್ತೇ ನಿಮಿಷದಲ್ಲಿ ಮುಕ್ತಾಯಗೊಂಡಿದ್ದು, ಜುಲೈ 17ಕ್ಕೆ ವಿಚಾರಣೆಗೆ ಆಗಮಿಸಲು ಸ್ಪೀಕರ್‌ ಸಮಯ ನೀಡಿದ್ದಾರೆ.

ವಿಧೇಯಕ ಬಿದ್ದರೆ ಬಿಜೆಪಿ ಹೊಣೆಯಲ್ಲ : ಮಾಧುಸ್ವಾಮಿ

ಅಲ್ಪಮತಕ್ಕೆ ಕುಸಿದಿರುವ ಸರಕಾರ ಮಂಡಿಸುವ ಹಣಕಾಸು ವಿಧೇಯಕ ಬಿದ್ದರೆ ಅದಕ್ಕೆ ಬಿಜೆಪಿಯನ್ನು ಹೊಣೆಯಾಗಿಸಬೇಡಿ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಸ್ಪೀಕರ್‌ ರಮೇಶ್‌ ಕುಮಾರ್‌ಗೆ ಮನವಿ ಸಲ್ಲಿಸಿದ್ದಾರೆ.

ಈ ಸರಕಾರಕ್ಕೆ ವಿಶ್ವಾಸಮತವಿಲ್ಲ. ಹೀಗಾಗಿ ಸಿಎಂ ಕುಮಾರಸ್ವಾಮಿ ತಕ್ಷಣ ರಾಜೀನಾಮೆ ನೀಡಬೇಕು. ಅದನ್ನು ಬಿಟ್ಟು ವಿಧಾನಸಭೆ ಅಧಿವೇಶನ ನಡೆಸಲು ಮುಂದಾದರೆ ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ. ಇದಕ್ಕೆ ಸ್ಪೀಕರ್‌ ಅವಕಾಶ ಮಾಡಿಕೊಡಬಾರದು. ಹೀಗಾಗಿ ಶಾಸಕರ ರಾಜೀನಾಮೆಯನ್ನು ನೀವು ತಕ್ಷಣ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ