ಆ್ಯಪ್ನಗರ

ಅನರ್ಹತೆ ಶಿಫಾರಸಿಗೆ ಡೋಂಟ್‌ಕೇರ್‌: ಮುದಿಟ್ಟ ಹೆಜ್ಜೆ ಹಿಂದಿಡುವುದಿಲ್ಲ ಎಂದ ರೆಬೆಲ್‌ಗಳು

-ಸಿಎಂ, ಡಿಸಿಎಂ, ಸಿದ್ದು, ಡಿಕೆಶಿ, ದಿನೇಶ್‌ ವಿರುದ್ಧ ವಾಗ್ದಾಳಿ -ರಾಜ್ಯದ ಜನ ಈ ಸಮ್ಮಿಶ್ರ ಸರಕಾರ ಒಪ್ಪುತ್ತಿಲ್ಲ -ನಾವು ಯಾರ ಬಂಧನದಲ್ಲೂ ಇಲ್ಲ, ...

Vijaya Karnataka 10 Jul 2019, 5:00 am
ಬೆಂಗಳೂರು: ರಾಜೀನಾಮೆ ಸಲ್ಲಿಸಿರುವ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಕಾಂಗ್ರೆಸ್‌ ನೀಡಿರುವ ದೂರಿನ ಬಗ್ಗೆ ಹೆದರುವ ಪ್ರಶ್ನೆಯೇ ಇಲ್ಲವೆಂದು ಪಕ್ಷದ ಅತೃಪ್ತ ಶಾಸಕರು ಸ್ಪಷ್ಟಪಡಿಸಿದ್ದಾರೆ. ಜತೆಗೆ ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್‌ ಪಡೆಯುವುದಿಲ್ಲವೆಂದು ಪುನರುಚ್ಚರಿಸಿದ್ದಾರೆ. ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಕಾನೂನು ಹೋರಾಟಕ್ಕೆ ನಾವು ಸಿದ್ಧ ಎಂದು ಸವಾಲು ಹಾಕಿದ್ದಾರೆ.
Vijaya Karnataka Web 0607-2-2-320 (16)


ಅನರ್ಹತೆಗೊಳಿಸಲು ಬೆಂಗಳೂರಿನಲ್ಲಿ ಸ್ಪೀಕರ್‌ಗೆ ದೂರು ನೀಡುತ್ತಿದ್ದಂತೆ ಮುಂಬಯಿನಲ್ಲಿರುವ ಅತೃಪ್ತ ಶಾಸಕರು ಸಭೆ ನಡೆಸಿ ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲವೆಂದು ಒಮ್ಮತದ ತೀರ್ಮಾನ ಕೈಗೊಂಡರು. ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಎಸ್‌.ಟಿ.ಸೋಮಶೇಖರ್‌, ಬಿ.ಸಿ.ಪಾಟೀಲ್‌, ರಮೇಶ್‌ ಜಾರಕಿಹೊಳಿ ಹಾಗೂ ಪ್ರತಾಪಗೌಡ ಪಾಟೀಲ್‌ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

''ಕಳೆದ 14 ತಿಂಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ರಾಜ್ಯದ ಜನತೆಗೆ ಬೇಡವಾಗಿದೆ.ವಿಶೇಷವಾಗಿ ಶಾಸಕರಿಗಂತೂ ಈ ಸರಕಾರದ ಕಾರ್ಯವೈಖರಿ ಸಾಕಷ್ಟು ಅಸಮಾಧಾನ ತಂದಿದೆ, ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಹತ್ತಾರು ಸಲ ಶಾಸಕರು ತಮ್ಮ ಅಸಮಾಧಾನಗಳನ್ನು ನಾಯಕರ ಮುಂದೆ ಬಹಿರಂಗವಾಗಿಯೇ ಹೊರ ಹಾಕಿದರೂ ಅದನ್ನು ಸರಿಪಡಿಸುವ ಪ್ರಯತ್ನ ಮಾಡಲಿಲ್ಲ. ಬದಲಿಗೆ ನಮ್ಮನ್ನು ನಿರ್ಲಕ್ಷ್ಯ ಮಾಡಿದರು. ಆದ್ದರಿಂದ ನಾವು ಸಮಾನ ಮನಸ್ಕರು ಸೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆಯೇ ಹೊರತು ಕಾಂಗ್ರೆಸ್‌ ಪಕ್ಷಕ್ಕೆ ಅಲ್ಲ, ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿಲ್ಲ, ಪಕ್ಷ ವಿರೋಧಿಗಳು ಮಂತ್ರಿಗಳಾಗಿದ್ದಾರೆ,'' ಎಂದು ಸೋಮಶೇಖರ್‌ ಹೇಳಿದರು.

''ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರೊಂದಿಗೆ ನಾವು ಹತ್ತಾರು ಸಲ ನಮ್ಮ ನೋವು, ಕ್ಷೇತ್ರದ ಸಮಸ್ಯೆ ಹೇಳಿಕೊಂಡರೂ ಅವುಗಳಿಗೆ ಸ್ಪಂದಿಸಲಿಲ್ಲ. ನಮಗೆ ನೀಡಿದ್ದ ನಿಗಮ, ಮಂಡಳಿಗಳಲ್ಲೂ ಮುಕ್ತವಾಗಿ ಕೆಲಸ ಮಾಡಲು ಬಿಡಲಿಲ್ಲ. ಐಎಎಸ್‌ ಅಧಿಕಾರಿಗಳು ನಮ್ಮ ಮಾತು ಕೇಳದಂತೆ ಮಾಡಿದರು. ನಾವು ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿದಿದ್ದೇವೆ, ಪಕ್ಷ ಕಟ್ಟಿದ್ದೇವೆ. ಈ ಸಮ್ಮಿಶ್ರ ಸರಕಾರದಿಂದ ರಾಜ್ಯದ ಜನತೆಗೆ ಒಳಿತಾಗುವ ಯಾವುದೇ ಲಕ್ಷಣಗಳಿಲ್ಲದ ಕಾರಣ ಈ ತೀರ್ಮಾನಕ್ಕೆ ಬರಬೇಕಾಯಿತು,'' ಎಂದು ರಾಜೀನಾಮೆ ನಿರ್ಧಾರ ಸಮರ್ಥಿಸಿಕೊಂಡರು.


* ನಾನು ನಿಮ್ಮ ಮುಂದೆಯೇ ನಿಂತಿದ್ದೇನೆ, ನನ್ನ ರಾಜೀನಾಮೆ ನಿರ್ಧಾರ ಅಚಲ, ಇದರಿಂದ ಹಿಂದೆ ಸರಿಯಲ್ಲ, ಮಂತ್ರಿ ಸ್ಥಾನದ ಆಮಿಷಕ್ಕೆ ಒಳಗಾಗಿ ವಾಪಸ್‌ ಹೋಗಲ್ಲ, ನಮ್ಮ ನೋವಿಗೆ ಸ್ಪಂದಿಸದ ಕಾರಣ ಈ ತೀರ್ಮಾನ.
-ರಮೇಶ್‌ ಜಾರಕಿಹೊಳಿ

* ನಮ್ಮನ್ನು ಯಾರೂ ಗನ್‌ಪಾಯಿಂಟ್‌ನಲ್ಲಿ ಹಿಡಿದಿಟ್ಟಿಲ್ಲ, ನಾವು ಸ್ವತಂತ್ರವಾಗಿದ್ದೇವೆ, ಡಿ.ಕೆ.ಶಿವಕುಮಾರ್‌ ನಮ್ಮನ್ನು ಹೆದರಿಸುವುದು ಬೇಡ, ಟಾರ್ಗೆಟ್‌ ಮಾಡುವುದೂ ಬೇಡ, ಐಟಿ, ಇಡಿ ಟಾರ್ಗೆಟ್‌ನಿಂದ ಡಿಕೆಶಿ ಹೊರಬರಲಿ.
-ಎಸ್‌.ಟಿ.ಸೋಮಶೇಖರ್‌

* ಸ್ಪೀಕರ್‌ ಅವರು ನ್ಯಾಯಾಧೀಶರು ಇದ್ದಂತೆ, ಅವರ ಬಗ್ಗೆ ಗೌರವವಿದೆ, ಬುದ್ಧಿವಂತರು. ಅವರಿಂದ ನ್ಯಾಯ ಸಿಗುವ ವಿಶ್ವಾಸವಿದೆ. ಅನರ್ಹಗೊಳ್ಳಲು ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ.
-ಬಿ.ಸಿ.ಪಾಟೀಲ್‌

* ನಾವು ಯಾರ ಆಶ್ರಯದಲ್ಲೂ ಇಲ್ಲ, ಸ್ವಂತ ಖರ್ಚಿನಲ್ಲಿ ಬಂದಿದ್ದೇವೆ. ಯಾವ ಕುದುರೆ ವ್ಯಾಪಾರವೂ ಇಲ್ಲ, ಪಕ್ಷ ಕಟ್ಟಿ ಬೆಳೆಸಿದ್ದೇವೆ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರುವ ಮುನ್ನವೇ 30 ವರ್ಷದಿಂದ ಪಕ್ಷದಲ್ಲಿ ಇದ್ದೇನೆ.
-ಬೈರತಿ ಬಸವರಾಜು

* ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ವೈಯಕ್ತಿಕವಾಗಿ ಅನುಭವಿಸಿದ ನೋವಿನಿಂದ ರಾಜೀನಾಮೆ ಕೊಟ್ಟಿದ್ದೇವೆ. ಶಾಸಕ ಸ್ಥಾನಕ್ಕಷ್ಟೇ ರಾಜೀನಾಮೆ ಪಕ್ಷಕ್ಕಲ್ಲ.
-ಪ್ರತಾಪಗೌಡ ಪಾಟೀಲ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ