ಆ್ಯಪ್ನಗರ

ನಟರ ಬೇನಾಮಿ ಆಸ್ತಿ, ಕಪ್ಪು ಹಣ ವರ್ಗಾವಣೆಗೆ ಸಾಕ್ಷಿ ಲಭ್ಯ

ಸ್ಯಾಂಡಲ್‌ವುಡ್‌ನ ನಟರು ಮತ್ತು ನಿರ್ಮಾಪಕರ ಮನೆ, ಕಚೇರಿಗಳ ಮೇಲೆ ದಾಳಿ ವೇಳೆ 3 ಕೋಟಿ ರೂ...

Vijaya Karnataka 25 Jul 2019, 5:00 am
ಬೆಂಗಳೂರು: ಸ್ಯಾಂಡಲ್‌ವುಡ್‌ನ ನಟರು ಮತ್ತು ನಿರ್ಮಾಪಕರ ಮನೆ, ಕಚೇರಿಗಳ ಮೇಲೆ ದಾಳಿ ವೇಳೆ 3 ಕೋಟಿ ರೂ.ಗೂ ಹೆಚ್ಚು ಬೇನಾಮಿ ಹಾಗೂ ಕಪ್ಪು ಹಣ ಬಗ್ಗೆ ಸಾಕ್ಷಿ ಸಿಕ್ಕಿದೆ ಎಂದು ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್‌ ಬಾಲಕೃಷ್ಣನ್‌ ತಿಳಿಸಿದರು.
Vijaya Karnataka Web it building


ಐಟಿ ಕಚೇರಿಯಲ್ಲಿ ಬುಧವಾರ ನಡೆದ 159ನೇ ವರ್ಷದ ಆದಾಯ ತೆರಿಗೆ ದಿನಾಚರಣೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ''ತೆರಿಗೆ ವಂಚನೆ ಸಂಬಂಧ ಜನವರಿ ತಿಂಗಳ ಮೊದಲ ವಾರದಲ್ಲಿ ನಟರು ಮತ್ತು ನಿರ್ಮಾಪಕರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಬೇನಾಮಿ ಆಸ್ತಿ ಮತ್ತು ಕಪ್ಪು ಹಣ ವರ್ಗಾವಣೆಯ ಮಾಹಿತಿ ಮತ್ತು ಸಾಕ್ಷ್ಯಾಧಾರಗಳು ಲಭಿಸಿವೆ. ಈ ಬಗ್ಗೆ ತನಿಖೆ ಚುರುಕಿನಿಂದ ಸಾಗಿದೆ,'' ಎಂದರು.

''ಲೋಕಸಭಾ ಚುನಾವಣೆ ವೇಳೆ 33.33 ಕೋಟಿ ರೂ. ಜಪ್ತಿ ಮಾಡಲಾಗಿತ್ತು. ಇದು 2013ರ ಚುನಾವಣೆಗೆ ಹೋಲಿಸಿದರೆ ಆರು ಪಟ್ಟು ಹೆಚ್ಚು. ಇದರಲ್ಲಿ ಒಬ್ಬ ಪ್ರಭಾವಿ ಸಚಿವರ ಹಣವೂ ಸೇರಿದೆ. ಚುನಾವಣೆ ವೇಳೆ ಜಪ್ತಿ ಮಾಡಲಾದ ಹಣವು ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರಿಗೆ ಸೇರಿದೆ'' ಎಂದರು.

ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರ ವಿರುದ್ಧದ ಪ್ರಕರಣದ ಕುರಿತ ಪ್ರಶ್ನೆಗೆ, ''ಪ್ರಕರಣದ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಬರುವ ದಿನಗಳಲ್ಲಿ ಅಗತ್ಯ ಬಿದ್ದರೆ ಅವರನ್ನು ಕರೆಸಿ ವಿಚಾರಣೆ ನಡೆಸುತ್ತೇವೆ. ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪೈಕಿ ಒಂದು ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ'' ಎಂದು ಬಾಲಕೃಷ್ಣನ್‌ ತಿಳಿಸಿದರು.

ಕೋರಿದರೆ ಐಎಂಎ ಕಂಪನಿ ಕುರಿತು ತನಿಖೆ

''ಬಹುಕೋಟಿ ಐಎಂಎ ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಮತ್ತು ಎಸ್‌ಐಟಿ ತನಿಖೆ ನಡೆಸುತ್ತಿವೆ. ಆದರೆ, ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ದೂರು ನೀಡಿದರೆ ತನಿಖೆ ನಡೆಸಲಾಗುವುದು'' ಎಂದು ಬಾಲಕೃಷ್ಣನ್‌ ಹೇಳಿದರು.

ಮುಖ್ಯಮಂತ್ರಿಗಳ ಆರೋಪ ಸತ್ಯಕ್ಕೆ ದೂರ

ಐಟಿ ಇಲಾಖೆಯು ಕೇಂದ್ರ ಸರಕಾರದ ಕೈಗೊಂಬೆ ಎಂಬ ಹಂಗಾಮಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಆರೋಪ ಕುರಿತು ಪ್ರಶ್ನಿಸಿದಾಗ, ''ಅಂತಹ ಆರೋಪಗಳು ಸತ್ಯಕ್ಕೆ ದೂರ'' ಎಂದು ಬಾಲಕೃಷ್ಣನ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ