18 ಕಲಾಧಿವಿದರಿಗೆ 2017-18ನೇ ಸಾಲಿನ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪ್ರದಾನ
ಬೆಂಗಳೂರು: ಅನ್ಯ ರಾಜ್ಯಗಳ ಕಲಾವಿದರು ಕರ್ನಾಟಕಕ್ಕೆ ಬಂದು ಕಲೆ ಪ್ರಸ್ತುತಪಡಿಸುವ ರೀತಿ ಕರ್ನಾಟಕದ ಕಲಾವಿದರು ಹೊರ ರಾಜ್ಯಗಳಲ್ಲಿ ತಮ್ಮ ಕಲಾ ಪ್ರದರ್ಶನ ಮಾಡಬೇಕು ಎಂದು ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಪರಮೇಶ್ವರ ಹೆಗಡೆ ಅಭಿಪ್ರಾಯಪಟ್ಟರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ನೃತ್ಯ ಮತ್ತು ಸಂಗೀತ ಕ್ಷೇತ್ರದ 18 ಮಂದಿ ಕಲಾವಿದರಿಗೆ 2017-18ನೇ ಸಾಲಿನ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಭಾನುವಾರ ಅವರು ಮಾತನಾಡಿದರು.
''ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಹೊರ ರಾಜ್ಯ ಹಾಗೂ ರಾಷ್ಟ್ರಗಳಲ್ಲಿ ಹೆಚ್ಚು ಪಸರಿಸಬೇಕು. ಈ ಮೂಲಕ ನಮ್ಮ ನಾಡಿನ ಸಾಂಸ್ಕೃತಿಕ ವೈಭವ ಜಗಜ್ಜಾಹೀರಾಗಬೇಕುಧಿ'ಧಿ' ಎಂದು ಹೇಳಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಫಯಾಜ್ ಖಾನ್ ಮಾತನಾಡಿ, ''ಯಾವ ಕಲಾವಿದರೂ ಪ್ರಶಸ್ತಿಗಾಗಿ ಕಲೆಯನ್ನು ಕಲಿಯುವುದಿಲ್ಲ. ಹಾಗೆಯೇ ನಿಜವಾದ ಕಲಾವಿದರನ್ನು ಆ ಪ್ರಶಸ್ತಿಗಳೇ ಹುಡುಕಿ ಹೋಗುತ್ತವೆ. ಈ ಕೆಲಸವನ್ನು ಅಕಾಡೆಮಿ ಮಾಡುತ್ತಿದೆ'' ಎಂದರು.
ಅಕಾಡೆಮಿಯ ರಿಜಿಸ್ಟ್ರಾರ್ ಬನಶಂಕರಿ ವಿ. ಅಂಗಡಿ , ಲೆಕ್ಕಾಧಿಕಾರಿ ಬಲವಂತರಾವ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಕಲಾಶ್ರೀ ಪ್ರಶಸ್ತಿ ಪುರಸ್ಕೃತರು:
ಮೈಸೂರಿನ ಗಾಯಕಿ ಡಾ. ಸುಕನ್ಯಾ ಪ್ರಭಾಕರ್ ಹಾಗೂ ಮಂಗಳೂರಿನ ನೃತ್ಯ ಕಲಾವಿದೆ ಶಾರದಾಮಣಿ ಶೇಖರ್ ಅವರಿಗೆ ತಲಾ 50 ಸಾವಿರ ರೂ. ನಗದು ಒಳಗೊಂಡ 'ಕರ್ನಾಟಕ ಕಲಾಶ್ರೀ' ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೋಲಾರದ ಗಾಯಕ ಪಿ. ರಾಮಪ್ಪ ನಾಯ್ಡು, ಮೈಸೂರಿನ ವೀಣಾ ವಾದಕ ಡಾ. ಎಸ್. ವಿಜಯರಾಘವನ್, ಭದ್ರಾವತಿಯ ನಾಗಸ್ವರ ಕಲಾವಿದ ಕೆ.ಎನ್. ಮೋಹನ್ಕುಮಾರ್, ಹೊನ್ನಾವರದ ಬಾನ್ಸುರಿ ವಾದಕ ಕಡತೋಕಾ ಶಂಭು ಭಟ್ಟ, ಕುಂದಗೋಳದ ಹಿಂದೂಸ್ತಾನಿ ಗಾಯಕ ಬಿ. ಹುಸೇನ್ ಸಾಬ್ ನದಾಫ, ರಾಯಚೂರಿನ ಗಾಯಕ ರಾಮಾಚಾರ್ಯ ಕಾಖಂಡಕಿ, ಅಮರಾವತಿಯ ಶಹನಾಯಿ ವಾದಕ ಬಸಪ್ಪ ಹನಮಪ್ಪ ಭಜಂತ್ರಿ, ಬೆಂಗಳೂರಿನ ಭರತನಾಟ್ಯ ಕಲಾವಿದರಾದ ಡಾ. ಸುಪರ್ಣಾ ವೆಂಕಟೇಶ್ ಹಾಗೂ ಎನ್. ನಾಗಭೂಷಣ್, ಶಿವಮೊಗ್ಗದ ಭರತನಾಟ್ಯ ಕಲಾವಿದ ಎಸ್. ಕೇಶವಕುಮಾರ್, ಬೆಂಗಳೂರಿನ ಸುಗಮ ಸಂಗೀತ ಗಾಯಕಿ ಕೆ.ಎಂ. ಕುಸುಮಾ, ದಾವಣಗೆರೆಯ ಸುಗಮ ಸಂಗೀತ ಗಾಯಕ ಟಿ. ರಾಜಾರಾಮ್, ಗದಗದ ಕಥಾಕೀರ್ತನ ಕಲಾವಿದ ಎಂ. ಕಲ್ಲಿನಾಥ ಶಾಸ್ತ್ರಿ ಅಡ್ನೂರ, ತುರುವೇಕೆರೆಯ ಕಥಾಕೀರ್ತನ ಕಲಾವಿದ ಹುಲಿಕಲ್ ನಾಗರಾಜ, ಬೆಂಗಳೂರಿನ ಗಮಕ ಕಲಾವಿದೆ ಸತ್ಯವತಿ ರಾಮನಾಥ ಹಾಗೂ ಸಂಘ-ಸಂಸ್ಥೆ ವಿಭಾಗದಲ್ಲಿ ಧಾರವಾಡದ ಭಾರತೀಯ ಸಂಗೀತ ವಿದ್ಯಾಲಯಕ್ಕೆ 'ಕರ್ನಾಟಕ ಕಲಾಶ್ರೀ' ವಾರ್ಷಿಕ ಪ್ರಶಸ್ತಿಯಾಗಿ ತಲಾ 25 ಸಾವಿರ ರೂ. ನಗದು ಹಾಗೂ ಫಲಕ ನೀಡಿ ಗೌರವಿಸಲಾಯಿತು.