ಆ್ಯಪ್ನಗರ

ಕೊರೊನಾ ನಡುವೆಯೂ ಸೋಮವಾರದಿಂದ ಅಧಿವೇಶನ..! ಮೂರೇ ದಿನ ಕಲಾಪ ಸಾಧ್ಯತೆ

ಕೊರೊನಾ ಆತಂಕದ ನಡುವೆಯೂ ಸೋಮವಾರದಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದ್ದು, ಕೊರೊನಾ ನಿರ್ವಹಣೆ, ಡಿಜೆ ಹಳ್ಳಿ ಗಲಭೆ, ಡ್ರಗ್ಸ್‌ ಪ್ರಕರಣ ಮುಂದಿಟ್ಟು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.

Vijaya Karnataka Web 20 Sep 2020, 10:32 pm
ಬೆಂಗಳೂರು: ಸೋಮವಾರದಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದೆ. ಕೊರೊನಾ ನಿರ್ವಹಣೆ, ಡಿಜೆ ಹಳ್ಳಿ ಗಲಭೆ, ಡ್ರಗ್ಸ್‌ ಪ್ರಕರಣ ಮುಂದಿಟ್ಟು ಸರಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಮತ್ತೊಂದೆಡೆ ಸರಕಾರವೂ ತನ್ನ ಕಾರ್ಯವೈಖರಿಯ ಸಮರ್ಥನೆಗೆ ಸನ್ನದ್ಧವಾಗಿದೆ. ಆದರೆ, ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮೂರು ದಿನಕ್ಕೆ ಮೊಟಕುಗೊಳಿಸುವ ಬಗ್ಗೆಯೂ ಚರ್ಚೆ ಶುರುವಾಗಿದೆ.
Vijaya Karnataka Web karnataka assembly monsoon session may to be curtailed to 3 days
ಕೊರೊನಾ ನಡುವೆಯೂ ಸೋಮವಾರದಿಂದ ಅಧಿವೇಶನ..! ಮೂರೇ ದಿನ ಕಲಾಪ ಸಾಧ್ಯತೆ


ಸೆ.21 ರಿಂದ 30ರವರೆಗೆ ಅಧಿವೇಶನ ನಡೆಸಲು ಸಿದ್ಧತೆಯಾಗಿದೆ. ಈ ಅವಧಿಯಲ್ಲಿ ರಜಾ ದಿನ ಹೊರತುಪಡಿಸಿ 8 ದಿನಗಳ ಕಾಲ ಉಭಯ ಸದನಗಳ ಕಲಾಪ ನಡೆಯಬೇಕಿದೆ. ಕೊರೊನಾ ಭಯ ಇರುವುದರಿಂದ 3 ದಿನದಲ್ಲಿ ಅಧಿವೇಶನ ಅಂತ್ಯಗೊಳಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ವಿಚಾರದಲ್ಲಿ ಸರಕಾರ ಮುಕ್ತ ಮನಸ್ಸು ಹೊಂದಿದ್ದು, ಪ್ರತಿಪಕ್ಷದ ಕಡೆಯಿಂದಲೂ ಒಲವು ವ್ಯಕ್ತವಾಗಿದೆ ಎನ್ನಲಾಗಿದೆ.

​ಬಿಎಸಿ ಸಭೆ ಬಳಿಕ ತೀರ್ಮಾನ

ಅಧಿವೇಶನವನ್ನು 3 ದಿನಕ್ಕೆ ಸೀಮಿತಗೊಳಿಸುವ ಸಂಬಂಧ ಸಿಎಂ ಯಡಿಯೂರಪ್ಪ ಅವರೇ ಪ್ರತಿಪಕ್ಷದ ನಾಯಕರಿಗೆ ಕರೆ ಮಾಡಿ ಸಹಕಾರ ಕೋರಿದ್ದಾರೆ. ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಚರ್ಚಿಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎನ್ನುವುದು ಪ್ರತಿಪಕ್ಷಗಳ ನಿಲುವಾಗಿದೆ. ಅಧಿವೇಶನವನ್ನು ಬೇಗ ಬರಖಾಸ್ತುಗೊಳಿಸುವುದಾದರೆ ಯಾವುದೇ ಪ್ರಮುಖ ವಿಧೇಯಕ ಮಂಡಿಸಬಾರದು. ವಿಧೇಯಗಳ ಮೇಲೆ ವಿಸ್ತೃತ ಚರ್ಚೆಗೆ ಮುಂದಿನ ಬಾರಿ ಅವಕಾಶ ನೀಡುವ ವಾಗ್ದಾನ ಮಾಡುವಂತೆ ಷರತ್ತು ವಿಧಿಸಲು ಪ್ರತಿಪಕ್ಷಗಳು ಮನ ಮಾಡಿವೆ ಎಂದು ಗೊತ್ತಾಗಿದೆ.

ಡಿಕೆ ಶಿವಕುಮಾರ್‌ ವಿರೋಧ

ಆದರೆ, ಈ ವಿಚಾರದಲ್ಲಿ ಪಕ್ಷದ ಕಚೇರಿಯಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ''ಅಧಿವೇಶನವನ್ನು 3 ದಿನಕ್ಕೆ ಮೊಟಕುಗೊಳಿಸುವ ಬಗ್ಗೆ ಸಿಎಂ ಸಹಕಾರ ಕೋರಿದ್ದಾರೆ. ಆದರೆ, ನಾವು ಸರಕಾರದ ವೈಫಲ್ಯದ ಬಗ್ಗೆ ಚರ್ಚಿಸುತ್ತೇವೆ. ರಾಜ್ಯದಲ್ಲಿ ಪ್ರವಾಹ ಬಂದಿದೆ. ಇನ್ನೂ ಹಲವು ಸಮಸ್ಯೆಯಿದೆ. ಹಾಗಾಗಿ ಇನ್ನಷ್ಟು ದಿನ ಕಲಾಪ ನಡೆಸಲು ಒತ್ತಾಯಿಸುತ್ತೇವೆ,'' ಎಂದಿದ್ದಾರೆ.

​ಭರ್ಜರಿ ತಾಲೀಮು

ಅಧಿವೇಶನದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಕಾಂಗ್ರೆಸ್‌ ಸಾಕಷ್ಟು ಮುಂಚೆಯೇ ತಾಲೀಮು ನಡೆಸಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆಸಿ ಈ ಸಂಬಂಧ ಶಾಸಕರಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಜತೆಗೆ ಪಕ್ಷದ ಹಿರಿಯ ನಾಯಕರೊಂದಿಗೂ ಪ್ರತ್ಯೇಕ ಸಭೆ ನಡೆಸಿ ಸಮಾಲೋಚಿಸಿದ್ದಾರೆ. ಸಿಎಂ ಬಿಎಸ್‌ವೈ ಕೂಡ ಸಚಿವರ ಸಭೆ ನಡೆಸಿ ಪ್ರತಿಪಕ್ಷಗಳ ದಾಳಿಗೆ ಸಮರ್ಥ ಉತ್ತರ ನೀಡುವಂತೆ ಸೂಚಿಸಿದ್ದಾರೆ. ಜೆಡಿಎಸ್‌ನಿಂದಲೂ ಜನಪರ ವಿಚಾರದ ಬಗ್ಗೆ ದನಿಯೆತ್ತಲು ತಯಾರಿಯಾಗಿದೆ. ಈ ನಿಟ್ಟಿನಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಕೊರೊನಾ ಪ್ರತಿಧ್ವನಿ ನಿರೀಕ್ಷೆ

ಕೋವಿಡ್‌ ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿರುವುದಾಗಿ ಕಾಂಗ್ರೆಸ್‌ ಗಂಭೀರ ಆರೋಪ ಮಾಡಿತ್ತು. ಈ ವಿಚಾರ ಸದನದಲ್ಲಿಪ್ರತಿಧ್ವನಿಸಲಿದೆ. ಹಾಗೆಯೇ ಭೂಸುಧಾರಣೆ, ಎಪಿಎಂಸಿ ಇನ್ನಿತರ ಕಾಯಿದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದ್ದನ್ನು ಪ್ರತಿಪಕ್ಷಗಳು ವಿರೋಧಿಸಲಿವೆ. ಜಿಎಸ್‌ಟಿ ಪರಿಹಾರ ಬಾಕಿ, ಹೆಚ್ಚುವರಿ 33 ಸಾವಿರ ಕೋಟಿ ರೂ. ಸಾಲಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿರುವುದು ಹಾಗೂ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದಿಂದ ಸಕಾಲಕ್ಕೆ ಸ್ಪಂದನೆ ಬಾರದಿರುವುದು ಪ್ರತಿಪಕ್ಷಗಳಿಗೆ ಅಸ್ತ್ರವಾಗಲಿದೆ. ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಿ ಭರವಸೆ ಪಡೆದು ಬಂದದ್ದನ್ನು ಇದಕ್ಕೆ ಉತ್ತರವಾಗಿ ನೀಡಲು ಸಿಎಂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಡಿಜೆಹಳ್ಳಿ ಗಲಭೆ, ಡ್ರಗ್ಸ್‌ ದಂಧೆ ವಿಚಾರವೂ ಸದನದಲ್ಲಿಕಾವೇರಿಸುವ ನಿರೀಕ್ಷೆಯಿದೆ.

​ಮಂಡನೆಯಾಗಲಿರುವ ಪ್ರಮುಖ ವಿಧೇಯಕಗಳು

* ವಿತ್ತೀಯ ಹೊಣೆಗಾರಿಕೆ ಅಧಿನಿಯಮ

* ಭೂಸುಧಾರಣೆ ತಿದ್ದುಪಡಿ

* ಎಪಿಎಂಸಿ ತಿದ್ದುಪಡಿ

* ಕೈಗಾರಿಕಾ ಅಭಿವೃದ್ಧಿ

* ಸಾಂಕ್ರಾಮಿಕ ರೋಗ ನಿಯಂತ್ರಣ

* ವಿಶ್ವವಿದ್ಯಾಲಯ ತಿದ್ದುಪಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ