ಬೆಂಗಳೂರು: ಕುಡಿಯುವ ನೀರು ಯೋಜನೆಗಳ ಜಾರಿಗೆ ಒತ್ತಾಯಿಸಿ ಜೂ 12ರಂದು ಕನ್ನಡ ಸಂಘಟನೆಗಳ ಒಕ್ಕೂಟವು ಕರ್ನಾಟಕ ಬಂದ್ಗೆ ಕರೆ ನೀಡಿದೆ. ಆದರೆ, ಬಹುತೇಕ ಸಂಘಟನೆಗಳು ಈ ಬಾರಿ ಬಂದ್ಗೆ ಬೆಂಬಲ ನೀಡುವುದಿಲ್ಲ ಎಂದು ಪ್ರಕಟಿಸಿವೆ.
ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯಲಿರುವ ಬಂದ್ಗೆ ಹಲವಾರು ಸಂಘಟನೆಗಳು ಬೆಂಬಲ ಕೊಟ್ಟಿಲ್ಲ. ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ, ಆಟೊ, ಟ್ಯಾಕ್ಸಿ ಮತ್ತು ಲಾರಿ ಚಾಲಕರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಹೋಟೆಲ್, ಪೆಟ್ರೋಲ್ ಬಂಕ್ ಮಾಲೀಕರ ಸಂಘಗಳು ಕೂಡ ಬೆಂಬಲ ಘೋಷಿಸಿಲ್ಲ. ಹಾಗಾಗಿ, ಬಂದ್ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.
ಶಾಲಾ-ಕಾಲೇಜುಗಳು, ಅಂಗಡಿ ಮುಂಗಟ್ಟುಗಳು, ಪೆಟ್ರೋಲ್ ಬಂಕ್ಗಳು, ಚಿತ್ರಮಂದಿರಗಳು, ಮಾಲ್ಗಳು, ಹೋಟೆಲ್, ರೆಸ್ಟೋರೆಂಟ್ಗಳು ಸಹ ತೆರೆದಿರಲಿವೆ. ಪರಿಸ್ಥಿತಿ ಆಧರಿಸಿ ಬಸ್ಗಳನ್ನು ಕಾರ್ಯಾಚರಣೆಗೊಳಿಸಲು ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ನಿರ್ಧರಿಸಿವೆ. ಅಲ್ಲದೇ ನಿತ್ಯದಂತೆ ಮೆಟ್ರೊ ರೈಲುಗಳನ್ನು ಕಾರ್ಯಾಚರಣೆಗೊಳಿಸಲಾಗುವುದು ಎಂದು ಬಿಎಂಆರ್ಸಿಎಲ್ ಹೇಳಿದೆ.
ಈ ನಡುವೆ, ''ಮಹದಾಯಿ, ಕಳಸಾ-ಬಂಡೂರಿ, ಮೇಕೆದಾಟು ನೀರಾವರಿ ಯೋಜನೆ ಜಾರಿ, ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವುದು, ಎಂಇಎಸ್ ಪುಂಡರನ್ನು ಗಡಿಪಾರು ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರೆ ನೀಡಿರುವ ಬಂದ್ಗೆ ರಾಜ್ಯದ 2 ಸಾವಿರ ಸಂಘಟನೆಗಳು ಬೆಂಬಲ ನೀಡಿವೆ. ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ. ಆಸ್ಪತ್ರೆಗಳು, ಔಷಧ, ಹಾಲು, ಔಷಧ, ಪತ್ರಿಕೆ ಪೂರೈಕೆಗೆ ಬಂದ್ನಿಂದ ಯಾವುದೇ ತೊಂದರೆ ಆಗುವುದಿಲ್ಲ. '' ಎಂದು ವಾಟಾಳ್ ನಾಗರಾಜ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಧಾನಸೌಧಕ್ಕೆ ಮುತ್ತಿಗೆ:
''ನೀರಾವರಿ ಯೋಜನೆಗಳ ಶೀಘ್ರ ಜಾರಿ, ರೈತರ ಸಾಲ ಮನ್ನಾ, ಮಲೆಯಾಳಂ ಭಾಷೆ ಹೇರಿಕೆಗೆ ತಡೆ, ಎಂಇಎಸ್ ಪುಂಡಾಟಿಕೆ ನಿಯಂತ್ರಣ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಗಮನ ಸೆಳೆಯಲು ಬೆಳಗ್ಗೆ 11ಕ್ಕೆ ಪುರಭವನದಿಂದ ಮೆರವಣಿಗೆ ಮೂಲಕ ಸಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು,'' ಎಂದು ತಿಳಿಸಿದರು.
''ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಈ ಎಲ್ಲ ಸಮಸ್ಯೆಗಳ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ಸಂಸದರ ನಿವಾಸಗಳಿಗೆ ಮುತ್ತಿಗೆ ಹಾಕಿ, ಗೃಹ ಬಂಧನದಲ್ಲಿರಿಸಲಾಗುವುದು,'' ಎಂದು ಎಚ್ಚರಿಸಿದರು.
ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಕನ್ನಡ ಒಕ್ಕೂಟದ ಕೆ.ಆರ್.ಕುಮಾರ್, ಮಂಜುನಾಥ್ ದೇವ್, ಗಿರೀಶ್ ಗೌಡ ಸೇರಿದಂತೆ ನಾನಾ ಕನ್ನಡ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸುತ್ತಿಲ್ಲವಂತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, '' ಇದು ನಮ್ಮ ಮನೆಯ ಮದುವೆ ಕಾರ್ಯಕ್ರಮವಲ್ಲ. ನಾಡು-ನುಡಿ-ಜಲದ ಬಗ್ಗೆ ಅಭಿಮಾನ ಇರುವ ಎಲ್ಲರೂ ಸ್ವಯಂಪ್ರೇರಿತರಾಗಿ ಹೋರಾಟದಲ್ಲಿ ಪಾಲ್ಗೊಂಡು ಬಂದ್ಗೆ ಬೆಂಬಲ ಸೂಚಿಸಬಹುದು,'' ಎಂದರು.
''ನೀರಿನ ಸಮಸ್ಯೆಯಿಂದಾಗಿ ಕೋಲಾರದಲ್ಲಿ ಜನ ಜಾನುವಾರುಗಳು ಪರಿತಪಿಸುವಂತಾಗಿದೆ. ಬೆಂಗಳೂರಿಗೆ ಹಣ್ಣು ತರಕಾರಿಗಳನ್ನು ಒದಗಿಸುತ್ತಿದ್ದೇವೆ. ನಾವು ಕಸ ತಿಂದರೂ ನಗರಿಗರಿಗೆ ರಸ ನೀಡುತ್ತಿದ್ದೇವೆ. ಹೀಗಾಗಿ ನಮ್ಮ ಈ ಹೋರಾಟಕ್ಕೆ ಬೆಂಗಳೂರಿನ ಜನರು ಸಹಕಾರ ನೀಡಬೇಕು''.
- ಆಂಜನೇಯರೆಡ್ಡಿ, ಕೋಲಾರ
ಶಾಲೆಗಳಿಗೆ ರಜೆಯಿಲ್ಲ
ಕರ್ನಾಟಕ ಬಂದ್ಗೆ ನಾವು ಅಧಿಕೃತವಾಗಿ ಬೆಂಬಲ ನೀಡುತ್ತಿಲ್ಲ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಆಯಾ ಶಾಲೆಗಳ ಆಡಳಿತ ಮಂಡಳಿಗಳು ಅನಿವಾರ್ಯವಿದ್ದರೆ ರಜೆ ನೀಡಬಹುದು.
-ಡಿ. ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಖಾಸಗಿ ಶಾಲೆಗಳ ಸಂಘಟನೆ (ಕ್ಯಾಮ್ಸ್)
ಈರುಳ್ಳಿ, ಆಲೂಗಡ್ಡೆಯವರು ಬಂದ್ ಮಾಡುತ್ತಿಲ್ಲ
ಯಶವಂತಪುರ ಎಪಿಎಂಸಿಯಲ್ಲಿ ಈರುಳ್ಳಿ-ಆಲೂಗಡ್ಡೆ ವರ್ತಕರ ಸಂಘದವರು ಜೂ.12ರ ಬಂದ್ಗೆ ಬೆಂಬಲ ನೀಡುತ್ತಿಲ್ಲ. ಒಂದು ವೇಳೆ ಅನಿವಾರ್ಯ ಪರಿಸ್ಥಿತಿ ಎದುರಾದರೆ ವ್ಯಾಪಾರ ವಹಿವಾಟು ನಿಲ್ಲಿಸುತ್ತೇವೆ.
- ಬಿ. ರವಿಶಂಕರ್, ಈರುಳ್ಳಿ, ಆಲೂಗಡ್ಡೆ ಸಗಟು ವ್ಯಾಪಾರಿ
ಹಣ್ಣು-ತರಕಾರಿ ಸಂಘಟನೆಯಿಂದ ಬಂದ್ ಇಲ್ಲ
ಮೇಲಿಂದ ಮೇಲೆ ಬಂದ್ ನಡೆದರೆ ನಷ್ಟವಾಗುವುದು ಸಾರ್ವಜನಿಕ ವಲಯಕ್ಕೆ. ಹೀಗಾಗಿ ನಾವು ಜೂ.12ರ ಕರ್ನಾಟಕ ಬಂದ್ಗೆ ಬೆಂಬಲ ನೀಡುತ್ತಿಲ್ಲ. ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿದೆ.
- ಆರ್.ವಿ. ಗೋಪಿ, ಅಧ್ಯಕ್ಷರು, ತರಕಾರಿ ಸಗಟು ಮಾರಾಟಗಾರರ ಸಂಘ, ಕಲಾಸಿಪಾಳ್ಯ