ಆ್ಯಪ್ನಗರ

ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ, ಬಿಎಸ್‌ವೈ ನಿರ್ಧಾರದ ಹಿಂದಿನ ಕಾರಣವೇನು?

ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆ ಮಾಡದೇ ಇರಲು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪರಿಷತ್‌ ಸ್ಥಾನ ಪಡೆದುಕೊಂಡರೂ ಸಚಿವರಾಗಲು ಕನಿಷ್ಠ ಎರಡು ತಿಂಗಳು ಕಾಯಬೇಕಾಗಿದೆ.

Vijaya Karnataka Web 21 Jun 2020, 11:46 am
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸೇರ್ಪಡೆಗೆ ಕಾತುರರಾಗಿರುವ ಆಕಾಂಕ್ಷಿಗಳ ಆಸೆ ಇನ್ನೂ ಎರಡು ತಿಂಗಳು ಈಡೇರುವ ಸಾಧ್ಯತೆಗಳಿಲ್ಲ.
Vijaya Karnataka Web bs yeddyurappa


ಯಡಿಯೂರಪ್ಪ ನೇತೃತ್ವದ ಸರಕಾರ ಮುಂದಿನ ತಿಂಗಳು 26ರಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿಸದ್ಯಕ್ಕೆ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಗೆ ಕೈ ಹಾಕದಿರಲು ನಿರ್ಧರಿಸಿದ್ದಾರೆ.

ವರ್ಷ ಪೂರೈಸಿದ ಬಳಿಕ ಪ್ರತಿಯೊಬ್ಬ ಸಚಿವರ ಸಾಧನಾ ಪರಾಮರ್ಶೆ ನಡೆಯಲಿದೆ. ಆ ಬಳಿಕ ಮೂರರಿಂದ ನಾಲ್ಕು ಮಂದಿ ಹಳಬರು/ಹಿರಿಯರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲಎಂದು ಉನ್ನತ ಮೂಲಗಳು ತಿಳಿಸಿವೆ.

ತಿಂಗಳಂತ್ಯಕ್ಕೆ ಪರಿಷತ್ತಿನ 5 ಸ್ಥಾನ ಖಾಲಿ, ನಾಮನಿರ್ದೇಶನ ಹೊಣೆ ಹೈಕಮಾಂಡ್‌ ಹೆಗಲಿಗೆ

ಇತ್ತೀಚೆಗೆ ನಡೆದ ಪರಿಷತ್ತಿನ ಚುನಾವಣೆಯಲ್ಲಿಸದಸ್ಯರಾಗಿ ಆಯ್ಕೆಯಾಗಿರುವ ಮಾಜಿ ಸಚಿವರಾದ ಎಂ.ಟಿ.ಬಿ.ನಾಗರಾಜ್‌ ಹಾಗೂ ಆರ್‌.ಶಂಕರ್‌ ಸೇರಿದಂತೆ ಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ, ಎಸ್‌. ರಾಮದಾಸ್‌, ಮುರುಗೇಶ್‌ ನಿರಾಣಿ, ಜಿ.ಎಚ್‌.ತಿಪ್ಪಾರೆಡ್ಡಿ, ಸಿದ್ದು ಸವದಿ, ದತ್ತಾತ್ರೇಯ ಪಾಟೀಲ್‌ ರೇವೂರ ಸೇರಿದಂತೆ ಅನೇಕ ಮಂದಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಈ ಮಧ್ಯೆ ರಾಜ್ಯದಲ್ಲಿಕೊರೊನಾ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚಳ ನಿಯಂತ್ರಣಕ್ಕೆ ತಲೆಕೆಡಿಸಿಕೊಂಡಿರುವ ಸಿಎಂ, ಸಂಪುಟ ವಿಸ್ತರಣೆ ಕಸರತ್ತಿನ ಬಗ್ಗೆ ಯೋಚಿಸುತ್ತಿಲ್ಲಎನ್ನಲಾಗಿದೆ. ಸೋಂಕು ನಿಯಂತ್ರಣಕ್ಕೆ ಬರುವ ತನಕ ಸದ್ಯದ ವ್ಯವಸ್ಥೆಯೇ ಮುಂದುವರಿಯಲಿ ಎಂಬುದು ಯಡಿಯೂರಪ್ಪ ಅವರ ಆಶಯವೂ ಆಗಿದೆ ಎನ್ನಲಾಗಿದೆ.

ಕಳೆದ ಸಲ ಸಂಭವಿಸಿದ ಪ್ರವಾಹ ಹಾಗೂ ಕೊರೊನಾದಿಂದಾಗಿ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಈ ಅವಧಿಯಲ್ಲಿತಮ್ಮ ಇಲಾಖೆಗಳಿಗೆ ನಿಗದಿಪಡಿಸಿದ ಅನುದಾನವೂ ಪೂರ್ಣ ಪ್ರಮಾಣದಲ್ಲಿಬಿಡುಗಡೆಯಾಗಿಲ್ಲ. ಅನುದಾನ ಕೊರತೆಯಿಂದಾಗಿ ಇಲಾಖೆಗಳ ಮಹತ್ವಕಾಂಕ್ಷೆಯ ಕಾರ್ಯಕ್ರಮಗಳು/ ಯೋಜನೆಧಿಗಳನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ.

ಕಳೆದ ಒಂದು ವರ್ಷದ ಅವಧಿಯಲ್ಲಿದೈನಂದಿನ ಕೆಲಸಗಳು ನಡೆದಿವೆಯೇ ಹೊರತು ಗಮನ ಸೆಳೆಯುವಂತಹ ಕಾರ್ಯಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ. ಹಣ ಇಲ್ಲದೆ ಕೆಲಸ ಅಥವಾ ಸಾಧನೆ ಮಾಡಿ ತೋರಿಸುವುದಾದರೂ ಹೇಗೆ ಎಂಬುದು ಕೆಲವು ಸಚಿವರ ಪ್ರಶ್ನೆಗಳಾಗಿವೆ. ಹೀಗಾಗಿ ಸಂಪುಟ ಪುನಾರಚನೆ ಅಥವಾ ಸಚಿವರ ಸಾಧನೆ ಪರಾಮರ್ಶೆ ಪ್ರಕ್ರಿಯೆಯನ್ನು ಆರು ತಿಂಗಳು ಮುಂದೂಡಬೇಕೆಂದು ಒತ್ತಾಯಿಸಲು ಕೆಲವು ಸಚಿವರು ಸಿಎಂ ಭೇಟಿಯಾಗಿ ಒತ್ತಡ ಹೇರಲು ನಿರ್ಧರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ