ಆ್ಯಪ್ನಗರ

ನೂತನ ಸಚಿವ, ದಾಖಲೆಯ 8 ಬಾರಿಯ ಶಾಸಕ ಉಮೇಶ್‌ ಕತ್ತಿ ಪರಿಚಯ

ಧರಂ ಸಿಂಗ್‌, ಮಲ್ಲಿಕಾರ್ಜುನ‌ ಖರ್ಗೆ ಬಳಿಕ ದಾಖಲೆಯ 8ನೇ ಬಾರಿ ಶಾಸಕರಾಗಿರುವ ಉಮೇಶ್‌ ಕತ್ತಿ ಇಲ್ಲಿಯವರೆಗೆ ಆರು ಪಕ್ಷಗಳನ್ನು ಬದಲಿಸಿದ್ದಾರೆ. ಇಷ್ಟೆಲ್ಲ ಪಕ್ಷ ಬದಲಿಸಿಯೂ ಇವರು ಸೋತಿದ್ದು ಒಮ್ಮೆ ಮಾತ್ರ. ಅದು ಕಾಂಗ್ರೆಸ್‌ನಿಂದ.

Vijaya Karnataka 13 Jan 2021, 4:04 pm
ಹುಕ್ಕೇರಿ ಶಾಸಕರಾಗಿದ್ದ ತಂದೆ ವಿಶ್ವನಾಥ್‌ ಕತ್ತಿ ಅಕಾಲಿಕ ನಿಧನದ ಬಳಿಕ 1985ರಲ್ಲಿ ರಾಜಕಾರಣ ಪ್ರವೇಶಿಸಿದವರು ಉಮೇಶ್‌ ಕತ್ತಿ. 8 ಬಾರಿ ಶಾಸಕರಾಗಿರುವ ಇವರು ಇಲ್ಲಿಯವರೆಗೆ ಆರು ಪಕ್ಷಗಳನ್ನು ಬದಲಿಸಿದ್ದಾರೆ. ಇಷ್ಟೆಲ್ಲ ಪಕ್ಷ ಬದಲಿಸಿಯೂ ಇವರು ಸೋತಿದ್ದು ಒಮ್ಮೆ ಮಾತ್ರ.
Vijaya Karnataka Web Umesh Katti


ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಯ ಪ್ರಸ್ತಾವಿಡುವುದು, ನಾನು ಡಿಸಿಎಂ ಅಲ್ಲ ಸಿಎಂ ಸ್ಥಾನದ ಆಕಾಂಕ್ಷಿ ಎನ್ನುವುದು; ಹೀಗೆ ಆಗಾಗ ಸುದ್ದಿಗೆ ಗ್ರಾಸವಾಗುತ್ತಿರುವ ಉಮೇಶ್‌ ಕತ್ತಿ ಇದೀಗ ಸಚಿವರಾಗಿ ಯಡಿಯೂರಪ್ಪ ಸಂಪುಟ ಸೇರಿದ್ದಾರೆ.

ಬೆಳಗಾವಿಯಲ್ಲಿರುವ ಕೆಎಲ್‌ಇ ಸೊಸೈಟಿಯ ಲಿಂಗರಾಜ್‌ ಕಾಲೇಜಿನಲ್ಲಿ ಪಿಯುಸಿವರೆಗೆ ಓದಿರುವ ಉಮೇಶ್‌ ಕತ್ತಿ, 1985ರಲ್ಲಿ ಮೊದಲ ಬಾರಿಗೆ ಹುಕ್ಕೇರಿ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಿ ಮೊದಲ ಯತ್ನದಲ್ಲೇ ಗೆಲುವಿನ ನಗೆ ಬೀರಿದರು. ಎರಡನೇ ಬಾರಿಗೆ 1989ರಲ್ಲೂ ಗೆಲುವು ಅವರದಾಯಿತು. ಆದರೆ ಈ ಬಾರಿ ಅವರು ಜನತಾದಳಕ್ಕೆ ಬಂದಿದ್ದರು. 1994ರಲ್ಲೂ ಅದೇ ಪಕ್ಷದಿಂದ ಹ್ಯಾಟ್ರಿಕ್‌ ಗೆಲುವು ಸಾಧಿಸಿದರು. 1999ರಲ್ಲಿ ಸಂಯುಕ್ತ ಜನತಾದಳ (ಜೆಡಿಯು)ದಿಂದ ಸ್ಪರ್ಧಿಸಿ ನಾಲ್ಕನೇ ಬಾರಿಗೆ ಜಯಭೇರಿ ಬಾರಿಸಿದರು.

ಪಂಚಮಸಾಲಿ ಪ್ರಭಾವಿ ನಾಯಕ, ನೂತನ ಸಚಿವ ಮುರುಗೇಶ್‌ ನಿರಾಣಿ ಪರಿಚಯ

2004ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನೆಗೆದ ಕತ್ತಿ ಕೇವಲ 821 ಮತಗಳಿಂದ ಮೊದಲ ಸೋಲು ಕಂಡರು. ವಿಧಾನಸಭೆ ಚುನಾವಣೆಯಲ್ಲಿ ಅವರು ಕಂಡ ಏಕೈಕ ಸೋಲು ಇದು.

2008ರಲ್ಲಿ ಜೆಡಿಎಸ್‌ಗೆ ಬಂದು ಮತ್ತೆ ಗೆಲುವು ಸಾಧಿಸಿದ ಅವರು ನಂತರ ಆಪರೇಷನ್‌ ಕಮಲದ ಫಲವಾಗಿ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2013 ಮತ್ತು 2018ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ. ಹೀಗೆ ಒಟ್ಟು 8 ಬಾರಿ ಹುಕ್ಕೇರಿ ಕ್ಷೇತ್ರದಲ್ಲಿ ದಾಖಲೆಯ ಗೆಲುವು ಸಾಧಿಸಿದ ಹೆಗ್ಗಳಿಕೆಯ ಕತ್ತಿ ಮಗದೊಮ್ಮೆ ಸಚಿವರಾಗುತ್ತಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ ಧರಂ ಸಿಂಗ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಮಾತ್ರ 8 ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಅವರ ದಾಖಲೆಯನ್ನು ಕತ್ತಿ ಸರಿಗಟ್ಟಿದ್ದಾರೆ.

ನೂತನ ಸಚಿವ ‘ಸೈನಿಕ’ ಸಿ.ಪಿ. ಯೋಗೇಶ್ವರ್‌ ಪರಿಚಯ
ಸಕ್ಕರೆ ಕಂಪನಿಗಳ ಮಾಲಿಕರೂ ಆಗಿರುವ ಉಮೇಶ್‌ ಕತ್ತಿ ಈ ಹಿಂದೆ ಸಕ್ಕರೆ, ಲೋಕೋಪಯೋಗಿ, ಬಂಧೀಖಾನೆ, ತೋಟಗಾರಿಕೆ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಲವು ಹುದ್ದೆಗಳನ್ನು ನಿಭಾಯಿಸಿದ ಅನುಭವಿಯೂ ಹೌದು. ಇಂಥ ಅನುಭವಿಗೆ ಯಾವ ಖಾತೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ