ಆ್ಯಪ್ನಗರ

ಸಿಎಂ ಕಚೇರಿ ಅಂಗಳದಲ್ಲಿ ಗಾಲ್ಫ್ ಚೆಂಡು !

ಸಿಎಂ ಗೃಹ ಕಚೇರಿ ಕೃಷ್ಣಾಗೆ ಗಾಲ್ಫ್ ಚೆಂಡೊಂದು ಬಂದು ಬಿದ್ದು ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆ ನಡೆದಾಗ ಸಿಎಂ ಅಧಿಕಾರಿಗಳೊಂದಿಗೆ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದರು. ಪದೇ ಪದೇ ಇಂತಹಾ ಘಟನೆ ನಡೆಯುತ್ತಿದ್ದರೂ ಗಾಲ್ಫ್ ಕ್ಲಬ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವಿದೆ.

Vijaya Karnataka Web 13 Sep 2019, 3:25 pm
ಬೆಂಗಳೂರು: ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಭಾರೀ ಭದ್ರತೆಯ ಸಿಎಂ ಕಚೇರಿ ಆವರಣಕ್ಕೆ ಇದ್ದಕ್ಕಿದ್ದಂತೆ ಚೆಂಡೊಂದು ಬಂದು ಬಿದ್ದಿತ್ತು. ದಿಢೀರಾಗಿ ನಡೆದ ಘಟನೆಯಿಂದ ಸಿಎಂ ಬೆಂಗಾವಲಿಗಿದ್ದ ಭದ್ರತಾ ಪಡೆ ಸಿಬಂಧಿ ಕೆಲಕಾಲ ತಬ್ಬಿಬ್ಬುಗೊಂಡರು. ಅಷ್ಟಕ್ಕೂ ಈ ಚೆಂಡು ಬಂದಿದ್ದು ಗೃಹ ಕಚೇರಿ ಕೃಷ್ಣಾ ಮುಂಭಾಗದ ಗಾಲ್ಫ್ ಮೈದಾನದಿಂದ.
Vijaya Karnataka Web golf club


ಹೌದು, ರಾಜ್ಯದ ಆಡಳಿತ ನಿರ್ವಹಣಾ ಕೇಂದ್ರ ಕೃಷ್ಣಾ ಅಂಗಳಕ್ಕೆ ಬಂದು ಬಿದ್ದ ಚೆಂಡು ಭದ್ರತಾ ಲೋಪವನ್ನು ಸಾಬೀತುಪಡಿಸಿದೆ. ಗೃಹ ಕಚೇರಿ ಮುಂಭಾಗದಲ್ಲಿರುವ ಗಾಲ್ಫ್ ಮೈದಾನ ಆವರಣದ ನೆಟ್ ದಾಟಿ ಈ ಚೆಂಡು ಸಿಎಂ ಕಚೇರಿ ಅಂಗಳಕ್ಕೆ ನೇರವಾಗಿ ಬಂದು ಬಿದ್ದಿದೆ. ಆದರೆ ಯಾವುದೇ ಅನಾಹುತಗಳು ಸಂಭವಿಸಿಲ್ಲ.

ಚೆಂಡು ಸಿಎಂ ಗೃಹ ಕಚೇರಿ ಅಂಗಳಕ್ಕೆ ಬಂದು ಬಿದ್ದ ಕೆಲವೇ ಕ್ಷಣಗಳಿಗಿಂತ ಮೊದಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಲ್ಲಿಗೆ ಆಗಮಿಸಿದ್ದರು. ಸಿಎಂ ಬಿ.ಎಸ್ ಯಡಿಯೂರಪ್ಪ ಜೊತೆಗೆ ಸಭೆ ನಡೆಸಿ ಅವರು ಅಲ್ಲಿಂದ ತೆರಳಿದ್ದರು. ಕೆಲ ಹೊತ್ತಿನಲ್ಲೇ ಗಾಲ್ಫ್ ಚೆಂಡು ಕೃಷ್ಣಾ ಆವರಣಕ್ಕೆ ಬಂದು ಬಿದ್ದಿದೆ.

ಕೃಷ್ಣಾ ಆಚರಣದಲ್ಲಿ ಗಾಲ್ಫ್ ಚೆಂಡು ಬಂದು ಬಿದ್ದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡಾ ಹಲವು ಬಾರಿ ಇಂತಹ ಘಟನೆಗಳು ನಡೆದಿವೆ. ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಕೃಷ್ಣಾ ಅಂಗಳಕ್ಕೆ ಚೆಂಡು ಬಂದು ಬಿದ್ದಿತ್ತು. ಡಿಸಿಎಂ ಪರಮೇಶ್ವರ್ ಅವರ ಬೆಂಗಾವಲು ವಾಹನದ ಮೇಲೆ ಬಿದ್ದು ಗ್ಲಾಸ್‌ಗೆ ಹಾನಿಯಾಗಿತ್ತು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಅವರ ಸರಕಾರಿ ಬಂಗಲೆ ಕಾವೇರಿ ನಿವಾಸಕ್ಕೂ ಗಾಲ್ಫ್ ಚೆಂಡು ಬಡಿದಿತ್ತು. ಪದೇ ಪದೇ ಇಂತಹಾ ಘಟನೆಗಳು ನಡೆಯುತ್ತಿದ್ದರೂ ಗಾಲ್ಫ್ ಕ್ಲಬ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಎಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಅವರ ಆದೇಶದ ಮೇರೆಗೆ ಗಾಲ್ಫ್ ಗ್ರೌಂಡ್ ಸುತ್ತ ಎತ್ತರದ ನೆಟ್ ಅಳವಡಿಸಲಾಗಿತ್ತು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ