ಆ್ಯಪ್ನಗರ

IMA ವಂಚನೆ: RBI ಎಚ್ಚರಿಕೆ ನಿರ್ಲಕ್ಷಿಸಿದ್ದ ಸರಕಾರ

ಐಎಂಎ ಸಂಸ್ಥೆಯಲ್ಲಿ ಹಣಕಾಸು ವಂಚನೆ ಆಗುತ್ತಿದೆ, ಪರಿಶೀಲಿಸಿ ಎಂದು ರಿಸರ್ವ್ ಬ್ಯಾಂಕು 2015ರಲ್ಲೇ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿತ್ತು. ಆದರೆ, ಪೊಲೀಸರು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈತೊಳೆದುಕೊಂಡರು. 2018ರಲ್ಲಿ ಮತ್ತೊಮ್ಮೆ RBI ಸರಕಾರವನ್ನು ಈ ಕುರಿತು ಎಚ್ಚರಿಸಿತು. ದೂರು ಇಲ್ಲದೆ ಎಫ್ಐಆರ್ ದಾಖಲಿಸುವಂತಿಲ್ಲ ಎಂದರು ಕರ್ನಾಟಕ ಪೊಲೀಸರು.

TIMESOFINDIA.COM 13 Jun 2019, 5:44 pm
ಬೆಂಗಳೂರು: ಒಂದು ಆಡಿಯೋ ಕ್ಲಿಪ್ ಬಹಿರಂಗವಾದ ಬಳಿಕ ತೆರೆದುಕೊಂಡಿರುವ ಐಎಂಎ ಹಣಕಾಸು ವಂಚನಾ ಪ್ರಕರಣದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕು 2015ರಲ್ಲೇ ರಾಜ್ಯ ಸರಕಾರವನ್ನು ಎಚ್ಚರಿಸಿ, ಇಂಥದ್ದೊಂದು ವಂಚನೆ ಆಗುವ ಬಗ್ಗೆ ಸುಳಿವು ನೀಡಿತ್ತೆಂಬ ಮಾಹಿತಿ ಈಗ ಬಯಲಾಗಿದೆ.
Vijaya Karnataka Web IMA Fraud


ಈ ಎಚ್ಚರಿಕೆಯನ್ನು ರಾಜ್ಯ ಸರಕಾರವಂತೂ ನಿರ್ಲಕ್ಷಿಸಿತಷ್ಟೇ ಅಲ್ಲದೆ, ಪೊಲೀಸ್ ಇಲಾಖೆಯೂ ಐ ಮಾನೆಟರಿ ಅಡ್ವೈಸರಿ (ಐಎಂಎ) ಗ್ರೂಪ್‌ಗೆ ಕ್ಲೀನ್ ಚಿಟ್ ನೀಡಿತ್ತು. ಇದಕ್ಕೆ ಅದು ನೀಡಿದ ಕಾರಣವೆಂದರೆ, ಈ ಪ್ರಕರಣವು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ರಕ್ಷಣೆಯ ಕಾಯಿದೆ (KPID) ವ್ಯಾಪ್ತಿಯಲ್ಲಿ ಇದು ಬರುವುದಿಲ್ಲ, ಹೀಗಾಗಿ ಯಾವುದೇ ಕ್ರಮ ಕೈಗೊಳ್ಳಲಾಗದು ಎಂದೂ ಹೇಳಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವಂಚಕ ಸ್ಕೀಮ್ ಬಯಲಿಗೆ

ಕಾರ್ಯ ವ್ಯಾಪ್ತಿಗೆ ಸಂಬಂಧಿಸಿದ ಸಮಸ್ಯೆಗಳೂ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಪೊಲೀಸರಿಗೂ ಏನು ಮಾಡಲಾಗಿರಲಿಲ್ಲ ಎಂಬುದನ್ನು ಗೃಹ ಸಚಿವ ಎಂ.ಬಿ.ಪಾಟೀಲ್ ಅವರೇ ಒಪ್ಪಿಕೊಂಡಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕು ಸರಕಾರಕ್ಕೆ ಎಚ್ಚರಿಕೆ ನೀಡಿದ ಬಳಿಕ, ಪ್ರಕರಣವು ಪೊಲೀಸ್ ಇಲಾಖೆಗೆ ಹೋಯಿತು. ತಮ್ಮ ಕಂಪನಿಯು ಹೂಡಿಕೆ ಸಂಸ್ಥೆಯಲ್ಲ ಮತ್ತು ನಾವು ಠೇವಣಿ ಸಂಗ್ರಹಿಸುತ್ತಿಲ್ಲ ಎಂದು ಐಎಂಎ ಪ್ರೊಮೋಟರ್‌ಗಳು ಪೊಲೀಸರಿಗೆ ಹೇಳಿದರು. ಹಣ ಹೂಡುವವರು ಪಾಲುದಾರರ ರೂಪದಲ್ಲಿ ತಮ್ಮಲ್ಲಿರುವಷ್ಟು ಹಣವನ್ನು ಹೂಡುತ್ತಿದ್ದಾರೆ ಮತ್ತು ಸೀಮಿತ ಹೊಣೆಯ ಪಾಲುದಾರಿಕೆಯ ಅಡಿಯಲ್ಲಿ ನಿಧಿ ಸಂಗ್ರಹಿಸಲಾಗುತ್ತಿದೆ ಎಂದೂ ಅವರು ಹೇಳಿದ್ದರು.

ಕೆಪಿಐಡಿ ಕಾಯಿದೆ ಅನುಸಾರ ಐಎಂಎ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ತನಗಿಲ್ಲ ಎಂದು ಪೊಲೀಸ್ ಇಲಾಖೆಯು ಆರ್‌ಬಿಐಗೆ ತಿಳಿಸಿತು. ಈ ಸಂಸ್ಥೆಯು ವಂಚನೆ ಮಾಡುತ್ತಿಲ್ಲ ಎಂದು ಪೊಲೀಸ್ ಇಲಾಖೆಯು ಹೇಳದಿದ್ದರೂ, ಈ ವಂಚನೆಯ ಜಾಲ ಮುಂದುವರಿಯಲು ಅನುವು ಮಾಡಿಕೊಟ್ಟಿತು ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಪೊಲೀಸರ ವರದಿಯಿಂದ ಅಸಮಾಧಾನಗೊಂಡ ಆರ್‌ಬಿಐ, 2018ರಲ್ಲಿ ಮತ್ತೊಮ್ಮೆ ಸರಕಾರಕ್ಕೆ ಪತ್ರ ಬರೆದು, ಈ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿತು. ಆ ಬಳಿಕ ಸರಕಾರವು ಎಲ್ಲ ಪೊಂಝಿ ಕಂಪನಿಗಳ ವ್ಯವಹಾರಗಳ ತನಿಖೆ ನಡೆಸಲು ಕಂದಾಯ ಇಲಾಖೆಯ ಉಪಾಯುಕ್ತರಿಗೆ ಅಧಿಕಾರ ನೀಡಿತು. 2018ರ ನವೆಂಬರ್ 16ರಂದು ಬಹಿರಂಗ ನೋಟೀಸ್ ನೀಡಿದ ಕಂದಾಯ ಇಲಾಖೆಯು, ಕಂಪನಿಯ ಅಕ್ರಮ ವ್ಯವಹಾರದ ಬಗ್ಗೆ ಹೂಡಿಕೆದಾರರನ್ನು ಎಚ್ಚರಿಸಿತು.

ಹಣ ಕಳೆದುಕೊಂಡವರ ಗೋಳಾಟ

ಈ ನೋಟೀಸ್‌ನಲ್ಲಿ ಮೊಹಮದ್ ಮನ್ಸೂರ್ ಖಾನ್ ಸಹಿತ 16 ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಹೆಸರಿಸಲಾಗಿದ್ದು, ಅವರ ಚರ ಮತ್ತು ಸ್ಥಿರ ಆಸ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಕೇಳಿಕೊಳ್ಳಲಾಗಿತ್ತು.

ಐಎಂಎ ಗ್ರೂಪ್ ವಿರುದ್ಧ ಎಫ್ಐಆರ್ ದಾಖಲಿಸಲು ನಾವು ಪೊಲೀಸರಿಗೆ ಕೇಳಿಕೊಂಡಿದ್ದೆವು. ಆದರೆ ದೂರು ನೀಡದೆ ದಾಖಲಿಸಲಾಗದು ಎಂದು ಕಂದಾಯ ಇಲಾಖೆಯ ಉಪಾಯುಕ್ತ ಎ.ಸಿ.ನಾಗರಾಜ್ ಹೇಳಿದ್ದಾರೆ. 2019ರ ಜನವರಿ 21ರಂದು ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಮಹಾ ಪ್ರಬಂಧಕ (ಐಜಿಪಿ) ಅವರು ಐಎಂಎಗೆ ಅಧಿಕೃತವಾಗಿ ಕ್ಲೀನ್ ಚಿಟ್ ನೀಡಿದರು. "ಸರಕಾರದ ಈ ಕ್ರಮವೇ ಐಎಂಎ ಗ್ರೂಪ್ ಈಗ ಇಷ್ಟು ವಂಚನೆ ಮಾಡಲು ಕಾರಣವಾಗಿದೆ. ಅಂದೇ ಕ್ರಮ ಕೈಗೊಳ್ಳುತ್ತಿದ್ದರೆ, ಈ ಹಗರಣವನ್ನು ತಪ್ಪಿಸಬಹುದಾಗಿತ್ತು" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮದುವೆ ಮುರಿದು ಬಿತ್ತು, ಜೀವನ ನಿರ್ವಹಣೆಗೂ ಸಂಕಷ್ಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ