ಆ್ಯಪ್ನಗರ

ಕೊರೊನಾ ಲಕ್ಷಣರಹಿತ ಸೋಂಕಿತರಿಗೆ ಮನೆ ಐಸೋಲೇಷನ್‌ - ಶೀಘ್ರ ನಿರ್ಧಾರ ಸಾಧ್ಯತೆ

ರಾಜ್ಯದಲ್ಲಿ ಸದ್ಯ ರೋಗ ಲಕ್ಷಣ ರಹಿತ ಕೊರೊನಾ ವೈರಸ್‌ ಸೋಂಕಿತರಾದ ವೈದ್ಯರು, ನರ್ಸ್‌ಗಳಿಗೆ ಮಾತ್ರ ಈ ಕ್ರಮ ಅನ್ವಯಿಸಲಾಗಿದೆ. ಇನ್ನು ಮುಂದೆ ಸಾಮಾನ್ಯ ಜನರಿಗೂ ಈ ಕ್ರಮ ಜಾರಿ ಮಾಡುವ ಸಾಧ್ಯತೆ ಇದೆ.

Vijaya Karnataka 29 Jun 2020, 8:03 pm

ಬೆಂಗಳೂರು: ರಾಜ್ಯದಲ್ಲಿ ಅಸಿಮ್ಟಮ್ಯಾಟಿಕ್‌ ರೋಗಿಗಳ ಸಂಖ್ಯೆ ಹೆಚ್ಚಳದಿಂದ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿನ ಹಾಸಿಗೆಗಳು ಶೀಘ್ರದಲ್ಲೇ ಭರ್ತಿಯಾಗುವ ಹಂತಕ್ಕೆ ತಲುಪಲಿದೆ. ಹಾಸಿಗೆ ಕೊರತೆ ಉಂಟಾದರೆ ಲಕ್ಷಣರಹಿತ ಮತ್ತು ಅತಿ ಕಡಿಮೆ ಲಕ್ಷಣವಿರುವ ರೋಗಿಗಳನ್ನು ಮನೆ ಆರೈಕೆಗೆ ಒಳಪಡಿಸುವ ಸಾಧ್ಯತೆ ಇದೆ.
Vijaya Karnataka Web Home isolation
ಸಾಂದರ್ಭಿಕ ಚಿತ್ರ


ಈ ಸಾಧ್ಯತೆಯನ್ನು ಮೊದಲೇ ಅರಿತಿದ್ದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಕೆಲ ವಾರಗಳ ಹಿಂದೆಯೇ ಈ ಕ್ರಮಕ್ಕೆ ಅನುಮೋದನೆ ನೀಡಿತ್ತು. ಕಾರ್ಯಪಡೆ ಕೂಡ ರಾಜ್ಯ ಸರಕಾರಕ್ಕೆ ಇದೇ ಸಲಹೆ ನೀಡಿದೆ.

ದಿಲ್ಲಿಯಲ್ಲಿ ಲಕ್ಷಣರಹಿತ ರೋಗಿಗಳ ಸಂಖ್ಯೆ ಹೆಚ್ಚಿದ್ದರಿಂದ ಈ ಕ್ರಮ ಜಾರಿ ಮಾಡಲಾಗಿದೆ. ರಾಜ್ಯದಲ್ಲಿ ಲಕ್ಷಣ ರಹಿತ ಸೋಂಕಿತರಾದ ವೈದ್ಯರು, ನರ್ಸ್‌ಗಳಿಗೆ ಮಾತ್ರ ಈ ಕ್ರಮ ಅನ್ವಯಿಸಲಾಗಿದೆ. ಇನ್ನು ಮುಂದೆ ಸಾಮಾನ್ಯ ಜನರಿಗೂ ಈ ಕ್ರಮ ಜಾರಿ ಮಾಡುವ ಸಾಧ್ಯತೆ ಇದೆ.
ಸೋಂಕಿತೆ ಸತ್ತು ಎರಡು ದಿನದ ಬಳಿಕ ಬಂದ ಕೊರೊನಾ ರಿಪೋರ್ಟ್‌: ಹಾಸನದಲ್ಲಿ 3ನೇ ಬಲಿ

ಮನೆ ಐಸೋಲೇಷನ್‌

ರಾಜ್ಯದಲ್ಲಿ 5472 (ಜೂ.28) ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಶೇ.80 ಕ್ಕೂ ಅಧಿಕ ರೋಗಿಗಳು ಲಕ್ಷಣರಹಿತರೇ ಆಗಿದ್ದಾರೆ. ಇವರಲ್ಲಿ ಬಹುತೇಕರು ಕೋವಿಡ್‌ಗೆ ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇತ್ತೀಚೆಗೆ ಕೋವಿಡ್‌ ಆರೈಕೆ ಕೇಂದ್ರಗಳನ್ನು ಆರಂಭಿಸಿದ್ದು, ಅಲ್ಲಿಗೆ ಈ ವರ್ಗದ ರೋಗಿಗಳನ್ನು ಸ್ಥಳಾಂತರಿಸಲಾಗುತ್ತಿದೆ.

ಲಕ್ಷ ಣರಹಿತ ರೋಗಿಗಳನ್ನು ಮನೆಯಲ್ಲಿಪ್ರತ್ಯೇಕವಾಗಿರಿಸಿ ಆರೈಕೆ ಮಾಡಬಹುದು. ರೋಗ ಲಕ್ಷ ಣ ಹೆಚ್ಚಿದರೆ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ.
ಡಾ.ಕೆ.ಎಸ್‌.ಸಂಜಯ್‌, ನಿರ್ದೇಶಕ, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ

ಕ್ರಮ ಹೇಗೆ?

ಮನೆ ಆರೈಕೆಯಲ್ಲಿ ಲಕ್ಷಣರಹಿತ ರೋಗಿಯು ಪ್ರತ್ಯೇಕ ಕೋಣೆಯಲ್ಲಿ ವಾಸಿಸಬೇಕು. ಬಟ್ಟೆ, ಆಹಾರ, ಶೌಚಾಲಯ ಎಲ್ಲದರಲ್ಲೂ ಪ್ರತ್ಯೇಕತೆ ಕಾಯ್ದುಕೊಳ್ಳಬೇಕು. ಜ್ವರ ಜೋರಾದರೆ, ಉಸಿರಾಟದ ತೊಂದರೆ ಕಂಡು ಬಂದರೆ ಮಾತ್ರ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆರೋಗ್ಯ ಸಿಬ್ಬಂದಿ ಇವರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇವರಿಗೆ ಕೆಲ ದಿನಗಳವರೆಗೆ ಜ್ವರದ ಮಾತ್ರೆಗಳನ್ನು ನೀಡಲಾಗುತ್ತದೆ. ಹೊರಗೆ ಹೋಗದೆ ಮನೆಯಲ್ಲೇ ಇದ್ದು, ರೋಗ ನಿರೋಧಕ ಶಕ್ತಿ ಹೆಚ್ಚಾಗುವ ಆಹಾರ ಸೇವಿಸಬೇಕು.

ರಾಜ್ಯದಲ್ಲಿ ಈ ಹೊಸ ಕ್ರಮ ಜಾರಿ ಮಾಡುವ ಕುರಿತು ಚರ್ಚೆಯಷ್ಟೇ ನಡೆದಿದೆ. ಸದ್ಯಕ್ಕೆ ಲಕ್ಷ ಣರಹಿತ ರೋಗಿಗಳಿಗಾಗಿ ಕೋವಿಡ್‌ ಕೇರ್‌ ಸೆಂಟರ್‌ಗಳಿವೆ.
ಡಾ.ಸಿ.ನಾಗರಾಜ್‌, ನಿರ್ದೇಶಕ, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ


ಲಕ್ಷಣರಹಿತ ಸೋಂಕಿತರನ್ನು ಸದ್ಯಕ್ಕೆ ಆರೈಕೆ ಕೇಂದ್ರಗಳಲ್ಲೇ ದಾಖಲಿಸಲಾಗುತ್ತಿದೆ. ಪರಿಸ್ಥಿತಿ ನೋಡಿಕೊಂಡು ಮನೆ ಆರೈಕೆ ಕ್ರಮ ತರಬಹುದು. ಸದ್ಯಕ್ಕಂತೂ ಆ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ