ಆ್ಯಪ್ನಗರ

ಡಿಕೆ ಶಿವಕುಮಾರ್‌ ಪದಗ್ರಹಣಕ್ಕೆ 3ನೇ ಬಾರಿ ಅಡ್ಡಿ, ಅನುಮತಿ ನಿರಾಕರಿಸಿದ ರಾಜ್ಯ ಸರಕಾರ

ಲಾಕ್‌ಡೌನ್‌ ಮಾರ್ಗಸೂಚಿ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಬಾರಿ ಅಧಿಕಾರ ಸ್ವೀಕಾರ ಸಮಾರಂಭ ಮುಂದೂಡಿಕೆಯಾಗಿತ್ತು. ಇದೀಗ ಮೂರನೇ ಬಾರಿ ಪದಗ್ರಹಣ ಕಾರ್ಯಕ್ರಮ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

Vijaya Karnataka 9 Jun 2020, 6:59 pm

ಬೆಂಗಳೂರು: ಇದೇ ಜೂನ್‌ 14ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಹೊರಟಿದ್ದ ಡಿ.ಕೆ. ಶಿವಕುಮಾರ್‌ಗೆ ಮತ್ತೆ ಹಿನ್ನಡೆಯಾಗಿದೆ. ಕಾರ್ಯಕ್ರಮಕ್ಕೆ ಅನುಮತಿ ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ.
Vijaya Karnataka Web Karnataka Pradesh Congress Committee (KPCC) President DK Shivakumar


ಜೂನ್‌ 5 ರಂದು ತಮ್ಮ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಡಿಕೆ ಶಿವಕುಮಾರ್‌ ಪತ್ರ ಬರೆದಿದ್ದರು. ಇದಕ್ಕೆ ಉತ್ತರ ನೀಡಿರುವ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗ, ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದೆ.

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಲಾಕ್‌ಡೌನ್‌ನ್ನು ಜೂನ್‌ 30ರವರೆಗೆ ವಿಸ್ತರಿಸಿದೆ. ಈ ಅವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿ ಹೊರಡಿಸಿದ್ದು ಅದನ್ನು ರಾಜ್ಯ ಸರಕಾರ ಯಥಾವತ್‌ ಜಾರಿಗೆ ತಂದಿದೆ. ಈ ಮಾರ್ಗಸೂಚಿಯಲ್ಲಿ ರಾಜಕೀಯ ಚಟುವಟಿಕೆಗೆ ನಿರ್ಬಂಧ ಹೇರಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಸರಕಾರದ ಮಾರ್ಗಸೂಚಿ ಅನುಸಾರ ತಮ್ಮ ಕೋರಿಕೆಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬುದಾಗಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಡಿಕೆ ಶಿವಕುಮಾರ್‌ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು, ಅನುಮತಿ ನಿರಾಕರಿಸುವುದಕ್ಕೆ ಮುಖ್ಯಮಂತ್ರಿಗಳೂ ಅನುಮೋದನೆ ನೀಡಿದ್ದಾರೆ' ಎಂದು ತಿಳಿಸಿದ್ದಾರೆ.

ಜೂನ್‌ 14ಕ್ಕೆ ಡಿಕೆ ಶಿವಕುಮಾರ್ ಪದಗ್ರಹಣ, ಅನುಮತಿಗಾಗಿ ಸಿಎಂಗೆ ಪತ್ರ

ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ 'ಪ್ರತಿಜ್ಞೆ' ಹೆಸರಿನ ಕಾರ್ಯಕ್ರಮ ನಡೆಸಲು ಅವಕಾಶ ನೀಡುವಂತೆ ಡಿಕೆ ಶಿವಕುಮಾರ್‌ ಅವರು ಕಳೆದ ಶನಿವಾರ ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

"ಲಾಕ್‌ಡೌನ್‌ ಅವಧಿ ಜಾರಿಯಲ್ಲಿದ್ದರೂ ನಿಯಮ ಮತ್ತು ನಿಬಂಧನೆಗಳಿಗೆ ಒಳಪಟ್ಟು ಕಾರ್ಯಕ್ರಮ ನಡೆಸಲು ಸಿದ್ಧರಿದ್ದೇವೆ. ಕೆಪಿಸಿಸಿ ಕಚೇರಿಯಲ್ಲಿ 150 ನಾಯಕರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಾದ್ಯಂತ ಪ್ರತಿ ಗ್ರಾಮ ಪಂಚಾಯತಿ, ಜಿಲ್ಲಾ ಮತ್ತು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಕಚೇರಿಗಳಲ್ಲಿ ನೇರ ಪ್ರಸಾರ ಇರಲಿದೆ. ಎಲ್ಲ ಕಡೆ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಲಾಕ್‌ಡೌನ್‌ ನಿಯಮ ಪಾಲನೆ ಮಾಡಿ ಕಾರ್ಯಕ್ರಮ ವೀಕ್ಷಣೆ ಮಾಡಲಿದ್ದಾರೆ. ಇದಕ್ಕೆ ಅವಕಾಶ ನೀಡಬೇಕು," ಎಂದು ಪತ್ರದಲ್ಲಿ ಶಿವಕುಮಾರ್‌ ಕೋರಿದ್ದರು.

ಮೂರನೇ ಬಾರಿಯೂ ಅಡ್ಟಿ

ಲಾಕ್‌ಡೌನ್‌ ಮಾರ್ಗಸೂಚಿ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಬಾರಿ ಅಧಿಕಾರ ಸ್ವೀಕಾರ ಸಮಾರಂಭ ಮುಂದೂಡಿಕೆಯಾಗಿತ್ತು. ಇದೀಗ ಮೂರನೇ ಬಾರಿ ಪದಗ್ರಹಣ ಕಾರ್ಯಕ್ರಮ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ಮಾ.11 ರಂದು ಡಿಕೆ ಶಿವಕುಮಾರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷನ್ನಾಗಿ ಘೋಷಣೆ ಮಾಡಲಾಗಿತ್ತು. ಇದಾಗಿ ಮೂರು ತಿಂಗಳು ಕಳೆದುಹೋದರೂ ಸರಕಾರದ ಮಾರ್ಗಸೂಚಿ ಪದಗ್ರಹಣಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.

ಮೇಲ್ಮನೆ ಚುನಾವಣೆಗೆ ಚುನಾವಣೆಗೆ ಆಯೋಗ ದಿನಾಂಕವನ್ನೂ ಘೋಷಿಸಿದ್ದು, ಒಂದೊಮ್ಮೆ ಅಧಿಕಾರ ಸ್ವೀಕಾರ ಸಾಧ್ಯವಾಗದೇ ಇದ್ದಲ್ಲಿ ಪಕ್ಷದ ಅಭ್ಯರ್ಥಿಗಳ 'ಬಿ' ಫಾರಂಗೆ ಶಿವಕುಮಾರ್‌ ಸಹಿ ಮಾಡಲು ತಾಂತ್ರಿಕ ತೊಡಕು ಉದ್ಭವಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ