ಆ್ಯಪ್ನಗರ

ಬಡವರ ಬಂಧುಗೆ ಮಾರ್ಗಸೂಚಿ: 22ರಂದು ಉದ್ಘಾಟನೆ

ಈ ಯೋಜನೆಯಡಿ ರಾಜ್ಯಾದ್ಯಂತ ಎಲ್ಲ ನಗರ ಪ್ರದೇಶಗಳಲ್ಲಿ ಫಲಾನುಭವಿಗಳಿಗೆ ಡಿಸಿಸಿ ಬ್ಯಾಂಕ್‌, ಮಹಿಳಾ ಸಹಕಾರ ಬ್ಯಾಂಕ್‌ಗಳು ಹಾಗೂ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಗರಿಷ್ಠ 10 ಸಾವಿರ ರೂ.ವರೆಗೆ ಸಾಲ ನೀಡಲು ಅವಕಾಶ ಕಲ್ಪಿಸಲಾಗಿದೆ.

Vijaya Karnataka 10 Nov 2018, 8:09 am
Vijaya Karnataka Web kumaraswamy..
ಬೆಂಗಳೂರು: ಬೀದಿ ವ್ಯಾಪಾರಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಕಿರು ಸಾಲ ನೀಡುವ 'ಬಡವರ ಬಂಧು' ಯೋಜನೆ ಜಾರಿ ಸಂಬಂಧ ಶುಕ್ರವಾರ ಸರಕಾರಿ ಆದೇಶ ಹೊರಬಿದ್ದಿದೆ.

ಈ ಯೋಜನೆಯಡಿ ರಾಜ್ಯಾದ್ಯಂತ ಎಲ್ಲ ನಗರ ಪ್ರದೇಶಗಳಲ್ಲಿ ಫಲಾನುಭವಿಗಳಿಗೆ ಡಿಸಿಸಿ ಬ್ಯಾಂಕ್‌, ಮಹಿಳಾ ಸಹಕಾರ ಬ್ಯಾಂಕ್‌ಗಳು ಹಾಗೂ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಗರಿಷ್ಠ 10 ಸಾವಿರ ರೂ.ವರೆಗೆ ಸಾಲ ನೀಡಲು ಅವಕಾಶ ಕಲ್ಪಿಸಲಾಗಿದೆ.

ಯಾರಿಗೆ ಸಿಗುತ್ತೆ ಸಾಲ?

* ರಸ್ತೆ ಬದಿಯ ತಳ್ಳು ಗಾಡಿ ಅಥವಾ ಮೋಟಾರು ವಾಹನದಲ್ಲಿ ಪಾನೀಯ, ತಿಂಡಿ, ಊಟ, ಸಿಹಿ ಪದಾರ್ಥ ಮತ್ತಿತರ ಹೋಟೆಲ್‌ ಸೇವೆ ಒದಗಿಸುವ ಬೀದಿ ವ್ಯಾಪಾರಿಗಳು, ತರಕಾರಿ, ಹಣ್ಣು, ಹೂವು, ಕಾಯಿ ಮಾರುವವರು ಮತ್ತು ರಸ್ತೆ ಬದಿಯ ಬುಟ್ಟಿ ವ್ಯಾಪಾರಿಗಳು.

* ಪಾದರಕ್ಷೆ, ಚರ್ಮ ಉತ್ಪನ್ನಗಳ ರಿಪೇರಿ, ಮಾರಾಟದಲ್ಲಿ ತೊಡಗಿರುವ ಬೀದಿ ವ್ಯಾಪಾರಿಗಳು.

* ಆಟದ ಸಾಮಾನು, ಇತರೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು.

* ಬಿಪಿಎಲ್‌ ಕಾರ್ಡ್‌ ಹೊಂದಿರುವ ವ್ಯಾಪಾರಿಗಳಿಗೆ ಮಾತ್ರ ಈ ಯೋಜನೆ ಅನ್ವಯ.

* ರಸ್ತೆ ಬದಿ ಸ್ವಚ್ಛತೆ ಹಾಳು ಮಾಡುವ ಹಾಗೂ ಪರಿಸರಕ್ಕೆ ಹಾನಿಯಾಗುವ ವಸ್ತು ಉಪಯೋಗಿಸುವ ಸಣ್ಣ ವ್ಯಾಪಾರಿಗಳಿಗೆ ಈ ಯೋಜನೆಯಡಿ ಸಾಲ ಸಿಗಲ್ಲ.

ಷರತ್ತು ಮತ್ತು ಮಾರ್ಗಸೂಚಿ

* ಸಹಕಾರ ಬ್ಯಾಂಕ್‌ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ನಗರ ಪ್ರದೇಶಗಳಲ್ಲಿ ನಿಗದಿಪಡಿಸಿದ ಗುರಿಯಂತೆ ಅರ್ಜಿ ಸಲ್ಲಿಸಿದ ಫಲಾನುಭವಿಗೆ ಮೊದಲ ಆದ್ಯತೆ ನೀಡಿ ಸಾಲ ವಿತರಿಸಬೇಕು.

* ಪ್ರತಿ ನಗರ ಪ್ರದೇಶದಲ್ಲಿ ಒಂದು ಸಹಕಾರ ಬ್ಯಾಂಕ್‌ ಮೂಲಕ ಸಾಲ ವಿತರಣೆ ಮಾಡಬೇಕು. ಈ ಬ್ಯಾಂಕ್‌ ಯಾವುದು ಮತ್ತು ಮೊಬೈಲ್‌ ವ್ಯಾನ್‌ಗೆ ಸ್ಥಳ ಗುರುತಿಸಲು ಆಯಾ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ.

* ನೋಂದಾಯಿತ ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಆಧಾರ್‌ ಕಾರ್ಡ್‌, ಬಿಪಿಎಲ್‌ ಕಾರ್ಡ್‌ ಹಾಗೂ ತಾವು ವ್ಯಾಪಾರ ನಡೆಸುವ ಸ್ಥಳದ ಪೋಟೋ ಮತ್ತು ಸ್ಥಳೀಯ ಸಂಸ್ಥೆಯ ಗುರುತಿನ ಚೀಟಿ ಸಲ್ಲಿಸಿದರೆ ಡಿಸಿಸಿ ಬ್ಯಾಂಕ್‌ಗಳು ಶೂನ್ಯ ಬ್ಯಾಲೆನ್ಸ್‌ ಉಳಿತಾಯ ಖಾತೆಯನ್ನು ತೆರೆಯಬೇಕು.

* ಸಾಲದ ಖಾತೆ ತೆರೆದ ಫಲಾನುಭವಿಗಳಿಗೆ 2 ಸಾವಿರ ರೂ.ಗಳಿಂದ ಗರಿಷ್ಠ 10 ಸಾವಿರ ವರೆಗೆ ಸಾಲ ವಿತರಿಸಬೇಕು. ಸಾಲವನ್ನು ಹಂತಹಂತವಾಗಿ ರೂಪೇ ಕ್ರೆಡಿಟ್‌ ಕಾರ್ಡ್‌ ಮೂಲಕ ವಿತರಿಸಲು ಕ್ರಮ ತೆಗೆದುಕೊಳ್ಳಬೇಕು.

* ಸಾಲವು ಕ್ಯಾಶ್‌ ಕ್ರೆಡಿಟ್‌ ರೂಪದಲ್ಲಿದ್ದು, ಮರುಪಾವತಿ ಅವಧಿ ಮೂರು ತಿಂಗಳು. ಈ ಅವಧಿಯಲ್ಲಿ ಸಾಲದ ಮಿತಿಗೊಳಪಟ್ಟು ಫಲಾನುಭವಿ ಎಷ್ಟು ಬಾರಿಯಾದರೂ ಹಣ ಡ್ರಾ ಮಾಡಬಹುದು ಮತ್ತು ಜಮಾ ಮಾಡಬಹುದು.

* ಮೂರು ತಿಂಗಳಲ್ಲಿ ನಿಗದಿಯಂತೆ ಸಾಲ ಮರುಪಾವತಿಸಿದವರಿಗೆ ಹೊಸದಾಗಿ ಸಾಲ ನೀಡಬಹುದು. ಸಾಲದ ಮಿತಿಯನ್ನು 15 ಸಾವಿರ ಮಿತಿಗೆ ಹೆಚ್ಚಳ ಮಾಡಬಹುದು.

* ಫಲಾನುಭವಿ ಇಚ್ಛೆ ಮತ್ತು ಅನುಕೂಲಕ್ಕೆ ತಕ್ಕಂತೆ ಪಿಗ್ಮಿ ಮಾದರಿಯಲ್ಲಿ ತಮ್ಮ ಬ್ಯಾಂಕ್‌ ಖಾತೆಗೆ ಜಮಾ ಮಾಡಲೂ ಅವಕಾಶ ಕಲ್ಪಿಸಬೇಕು. ಪಿಗ್ಮಿ ಮತ್ತು ಸಾಲದ ಮೊತ್ತ ಸಂಗ್ರಹಿಸಲು ಬ್ಯಾಂಕ್‌ ತನ್ನ ವ್ಯಾಪಾರ ಪ್ರತಿನಿಧಿ ನೇಮಕ ಮಾಡಬೇಕು.

* ಯೋಜನೆ ಫಲಾನುಭವಿಯ ಉಳಿತಾಯ ಖಾತೆಯ ಈ ವಹಿವಾಟಿಗೆ ದಿನದ ಬ್ಯಾಲೆನ್ಸ್‌ ಆಧರಿಸಿ ಶೇ.4 ಬಡ್ಡಿಯನ್ನು ಸಂಬಂಧಪಟ್ಟ ಬ್ಯಾಂಕ್‌ಗಳು ನೀಡಬೇಕು.

* ಬ್ಯಾಂಕ್‌ಗಳು ದೈನಂದಿನ ಚಾಲ್ತಿ ಹೊರಬಾಕಿ ಆಧಾರದಲ್ಲಿ ಸರಕಾರದಿಂದ ಶೇ.10 ಬಡ್ಡಿ ಸಹಾಯಧನಕ್ಕಾಗಿ ಅಪೆಕ್ಸ್‌ ಬ್ಯಾಂಕ್‌ ಮೂಲಕ ಸಹಕಾರ ಸಂಘಗಳ ನಿಬಂಧಕರಿಗೆ ಸಲ್ಲಿಸಿ ಮರುಪಾವತಿ ಪಡೆಯಬಹುದು.

* 2019ರ ಮಾರ್ಚ್‌ 31 ರವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ