ಆ್ಯಪ್ನಗರ

ಮೇಲ್ಮನೆಯಲ್ಲಿ ಮೂರು ದಶಕ ಕಳೆದಿದ್ದ ಶಂಕರಮೂರ್ತಿ ನಿವೃತ್ತಿ

ರಾಜ್ಯ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಗುರುವಾರ ನಿವೃತ್ತಿ ಹೊಂದಿದ್ದು, ಸದನದ ಅತೀ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹಂಗಾಮಿ ಸಭಾಪತಿಯಾಗಿ ನೇಮಕಗೊಂಡಿದ್ದಾರೆ.

Vijaya Karnataka 22 Jun 2018, 9:13 am
ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಗುರುವಾರ ನಿವೃತ್ತಿ ಹೊಂದಿದ್ದು, ಸದನದ ಅತೀ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹಂಗಾಮಿ ಸಭಾಪತಿಯಾಗಿ ನೇಮಕಗೊಂಡಿದ್ದಾರೆ.
Vijaya Karnataka Web dh shankarmurthy


ಶಂಕರಮೂರ್ತಿ ನೈರುತ್ಯ ಪದವೀಧರ ಕ್ಷೇತ್ರವನ್ನು ಸತತ ಐದು ಬಾರಿ ವಿಧಾನ ಪರಿಷತ್‌ನಲ್ಲಿ ಪ್ರತಿನಿಧಿಸಿದ್ದರು. ಮೇಲ್ಮನೆ ಸದಸ್ಯರಾಗಿ ಮೂರು ದಶಕಗಳು ಹಾಗೂ ಸಭಾಪತಿಯಾಗಿ ಆರು ವರ್ಷಗಳಿಂದ ಕೆಲಸ ಮಾಡಿದ್ದರು.

ಸಭಾಪತಿಯಾಗಿ ಕೊನೇ ದಿನ ಕಚೇರಿಯಿಂದ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರಮೂರ್ತಿ ''ಹಿರಿಯರ ಸದನದ ಸಭಾಪತಿ ಸ್ಥಾನದಿಂದ ನಿರ್ಗಮಿಸುತ್ತಿರುವ ಈ ಹಂತದಲ್ಲಿ ಹಲವು ಕಹಿ ಹಾಗೂ ಖುಷಿಯ ಘಟಾನಾವಳಿ ನೆನಪಾಗುತ್ತಿವೆ. ಜತೆಗೆ, ಈ ಸ್ಥಾನದಲ್ಲಿ ಕುಳಿತು ದೊಡ್ಡ ಪ್ರಮಾಣದಲ್ಲಿ ಯಶಸ್ವಿ ಕಂಡಿದ್ದೇನೆ. ವಿಧಾನಸೌಧ ಆವರಣದಲ್ಲಿ ಗಾಂಧೀಜಿ ಪ್ರತಿಮೆ ಸ್ಥಾಪಿಸಿದ ಖುಷಿಯಿದೆ. ಕಳೆದ ವರ್ಷ ಕಾಂಗ್ರೆಸ್‌ ತಮ್ಮ ವಿರುದ್ಧ ಅವಿಶ್ವಾಸ ಗೊತ್ತುವಳಿ ತಂದಿತ್ತಾದರೂ, ಜೆಡಿಎಸ್‌ ಬೆಂಬಲಕ್ಕೆ ನಿಂತ ಕಾರಣ ಆ ಪ್ರಯತ್ನ ವಿಫಲವಾಯಿತು'' ಎಂದು ನೆನಪಿಸಿಕೊಂಡರು.

''ಮೇಲ್ಮನೆ ಸದಸ್ಯತ್ವ ಹಾಗೂ ಸಭಾಪತಿ ಹುದ್ದೆಯಿಂದ ನಿವೃತ್ತಿ ಹೊಂದುತ್ತಿದ್ದೇನೆಯೇ ಹೊರತು, ರಾಜಕೀಯದಿಂದ ಅಲ್ಲ. ಹಿಂದೆ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಪಾಲ ಹುದ್ದೆ ನೀಡುವುದಾಗಿ ತಿಳಿಸಿದ್ದರು ಮತ್ತು ನಾನೂ ಸಮ್ಮತಿಸಿದ್ದೆ. ಆದರೆ, ಹುದ್ದೆ ಸಿಗಲಿಲ್ಲವಾದರೂ, ಆ ಬಗ್ಗೆ ಬೇಸರವಿಲ್ಲ. ಮುಂದಿನ ಅವಕಾಶ ಕುರಿತು ಆಶಾವಾದವಿದೆ'' ಎಂದರು.

ನೈರುತ್ಯ ಪದವೀಧರ ಕ್ಷೇತ್ರದಿಂದ 1988 ರಲ್ಲಿ ಮೇಲ್ಮನೆ ಪ್ರವೇಶಿಸಿದ್ದ ಶಂಕರಮೂರ್ತಿ ಅವರು 1994, 2000, 2006 ಮತ್ತು 2012ರಲ್ಲಿ ನಿರಂತರ ಆಯ್ಕೆಯಾಗಿದ್ದರು. 2006ರಲ್ಲಿ ಜೆಡಿಎಸ್‌ -ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು.

ಹೊರಟ್ಟಿ ಹಂಗಾಮಿ ಸಭಾಪತಿ

ಶಂಕರಮೂರ್ತಿ ಅವರ ನಿವೃತ್ತಿಯಿಂದ ತೆರವಾಗಿರುವ ಮೇಲ್ಮನೆಯ ಹಂಗಾಮಿ ಸಭಾಪತಿಯಾಗಿ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರನ್ನು ನೇಮಕ ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಗುರುವಾರ ಆದೇಶ ಹೊರಡಿಸಿದ್ದಾರೆ. ಸದನವು ಹೊಸ ಸಭಾಪತಿ ಆಯ್ಕೆ ಮಾಡುವವರೆಗೆ ಹೊರಟ್ಟಿ ಅವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ