ಆ್ಯಪ್ನಗರ

ತಾಯಂದಿರ ಸಾವು ಇಳಿಕೆಯಲ್ಲಿ ಕರ್ನಾಟಕ ನಂ 1: ಕೇಂದ್ರ ಆರೋಗ್ಯ ಸಚಿವಾಲಯ ವರದಿ

ಹೆರಿಗೆ ವೇಳೆ ತಾಯಂದಿರ ಸಾಯುವ ಪ್ರಮಾಣ ರಾಜ್ಯದಲ್ಲಿ ಶೇ. 10 ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಸರಕಾರ ವರದಿ ನೀಡಿದೆ. ಅಲ್ಲದೆ, ಈ ಪೈಕಿ ಕರ್ನಾಟಕ ನಂ. 1 ಸ್ಥಾನ ಪಡೆದುಕೊಂಡಿದೆ ಎಂದೂ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Vijaya Karnataka 19 Nov 2019, 10:46 am
ಬೆಂಗಳೂರು: ರಾಜ್ಯದಲ್ಲಿ ಹೆರಿಗೆ ವೇಳೆ ತಾಯಂದಿರು ಸಾಯುವ ಪ್ರಮಾಣ ಶೇ.10ರಷ್ಟು ಇಳಿಕೆಯಾಗಿದ್ದು, ಕರ್ನಾಟಕಕ್ಕೆ ನಂ.1 ಸ್ಥಾನ ದೊರೆತಿದೆ.
Vijaya Karnataka Web mother with baby


ಕೇಂದ್ರ ಆರೋಗ್ಯ ಸಚಿವಾಲಯ ಮಾದರಿ ನೋಂದಣಿ ವ್ಯವಸ್ಥೆಯ ವರದಿಯನ್ನು ಎರಡು ವರ್ಷಕ್ಕೊಮ್ಮೆ ಬಿಡುಗಡೆ ಮಾಡುತ್ತದೆ. 2015-17ರ ವರದಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಗಿದೆ. 2014-16ನೇ ವರದಿಗೆ ಹೋಲಿಸಿದರೆ ಹೆರಿಗೆ ವೇಳೆ ಸಾವಿಗೀಡಾಗುವ ತಾಯಂದಿರ ಪ್ರಮಾಣ ಶೇ.10ರಷ್ಟು ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಕ್ರಮ ಕೈಗೊಂಡ ರಾಜ್ಯಗಳಲ್ಲಿ ಕರ್ನಾಟಕ ಪ್ರಥಮ ಸ್ಥಾನ ಪಡೆದಿದೆ.

ಆರೋಗ್ಯ ಸೇವೆಗಳಿಗೆ ಕನಿಷ್ಠ ಮಾನದಂಡ ನಿಗದಿ
ಗರ್ಭ ಧರಿಸಿದ ಸಮಯದಲ್ಲಿ ಆರೋಗ್ಯದ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿರುವುದು, ಹೆರಿಗೆ ವೇಳೆ ಸೂಕ್ತ ಚಿಕಿತ್ಸೆ ಮುಂತಾದ ಕಾರಣಗಳಿಂದ ತಾಯಿಯ ಮರಣ ಸಂಭವಿಸುತ್ತಿದೆ. ಇದನ್ನು ತಡೆಯಲು ಹೆರಿಗೆ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹೆರಿಗೆ ಆಸ್ಪತ್ರೆಯಲ್ಲಿ ತಾಯಂದಿರ ಆರೋಗ್ಯ ಕಾಪಾಡಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಮರಣ ಪ್ರಮಾಣ ಶೇ.10ರಷ್ಟು ಇಳಿದಿದೆ.

ರಾಜ್ಯದ ಶೇ. 49 ಮಕ್ಕಳಿಗೆ ಕರುಳಿನ ಹುಳ ಬಾಧೆ
2015-17ರ ಅವಧಿಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ 23,388 ಶಿಶುಗಳು ಜನಿಸಿದ್ದು, 23 ತಾಯಂದಿರು ಮೃತಪಟ್ಟಿದ್ದಾರೆ. 2014-16 ರ ವರದಿಯ ಪ್ರಕಾರ ರಾಜ್ಯದಲ್ಲಿ ಪ್ರತಿ 1 ಲಕ್ಷ ಹೆರಿಗೆಗೆ 108 ತಾಯಂದಿರು ಸಾವಿಗೀಡಾಗುತ್ತಿದ್ದರು. 2015-17ರ ವರದಿಯಂತೆ, ಸಾವಿನ ಪ್ರಮಾಣ 97 ಕ್ಕೆ ಇಳಿದಿದೆ. ಸಾವಿನ ಪ್ರಮಾಣ ಇಳಿಸುವಲ್ಲಿ ಮಹಾರಾಷ್ಟ್ರ 2 ಹಾಗೂ ಕೇರಳ 3ನೇ ಸ್ಥಾನದಲ್ಲಿದೆ. ಒಟ್ಟು 20 ರಾಜ್ಯಗಳಲ್ಲಿ ಈ ಅಧ್ಯಯನ ನಡೆದಿದೆ.

ರಾಜ್ಯದ ಆರೋಗ್ಯವಾಣಿಗೆ ಕೇಂದ್ರ ಸರಕಾರ ಫಿದಾ

ಶೇ. 20ರ ಗುರಿ
ವಿವಿಧ ಆರೋಗ್ಯ ಕಾರ್ಯಕ್ರಮಗಳಿಂದ ತಾಯಂದಿರ ಮರಣ ಪ್ರಮಾಣ ಇನ್ನಷ್ಟು ಇಳಿಕೆಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. 2017- 19ನೇ ಸಾಲಿನ ವರದಿ ಬಿಡುಗಡೆಯಾಗುವ ವೇಳೆಗೆ ಮರಣ ಇಳಿಕೆ ಪ್ರಮಾಣ ಶೇ.20 ರಷ್ಟಾಗಬಹುದು ಎಂದು ಇಲಾಖೆ ಅಂದಾಜಿಸಿದೆ.

15 ಲಕ್ಷ ತಾಯಿ ಕಾರ್ಡ್‌
ತಾಯಿ ಮತ್ತು ಶಿಶು ಆರೋಗ್ಯಕ್ಕಾಗಿ ತಾಯಿ ಕಾರ್ಡ್‌ ವಿತರಿಸಲಾಗುತ್ತಿದೆ. ಪ್ರತಿ ವರ್ಷ ಇಲಾಖೆಯಿಂದ 15 ಲಕ್ಷ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಹೊರ ರಾಜ್ಯಗಳಿಂದ ಬರುವ ತಾಯಂದಿರಿಗೆ ವಾರ್ಷಿಕ 3 ಲಕ್ಷ ಕಾರ್ಡ್‌ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ತಾಯಿ ಕಾರ್ಡ್‌ ವಿತರಣೆ ಹೆಚ್ಚಿನ ಪ್ರಮಾಣದಲ್ಲಾಗುತ್ತಿರುವುದರಿಂದ ರಾಜ್ಯ ಸರಕಾರದ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಹಾಗೂ ಕೇಂದ್ರ ಸರಕಾರದ ಮಾತೃವಂದನಾ ಯೋಜನೆಗೆ ತಾಯಿ ಕಾರ್ಡ್‌ ಅನ್ನು ದಾಖಲೆಯಾಗಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾತೃ ಶ್ರೀ ಯೋಜನೆ ಯಲ್ಲಿ ಫಲಾನುಭವಿಗೆ 12 ಸಾವಿರ ರೂ. ಹಾಗೂ ಮಾತೃವಂದನ ಯೋಜನೆಯಲ್ಲಿ 5 ಸಾವಿರ ರೂ. ನೀಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ