ಆ್ಯಪ್ನಗರ

ರಾಜ್ಯ ರಾಜಕೀಯ ಬಿಕ್ಕಟ್ಟು: ಸುಪ್ರೀಂ‌ನಲ್ಲಿಂದು ಅತೃಪ್ತ ಶಾಸಕರ ಅರ್ಜಿ ವಿಚಾರಣೆ

ರಾಜ್ಯ ರಾಜಕಾರಣ ದಿನಕಳೆದಂತೆ ಹೆಚ್ಚೆಚ್ಚು ಕುತೂಹಲ ಸೃಷ್ಟಿಸುತ್ತಿದ್ದು, ಇಂದಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Vijaya Karnataka Web 11 Jul 2019, 8:36 am
ಬೆಂಗಳೂರು: ರಾಜ್ಯ ರಾಜಕೀಯ ಹೈ ಡ್ರಾಮಾ ಮುಂದುವರಿದಿದೆ. ರಾಜ್ಯದ ಮೈತ್ರಿ ಸರಕಾರ ಉಳಿಸಿಕೊಳ್ಳುವ ಅಂತಿಮ 'ಸಾಹಸ' ನಡೆಸಿದ ಕಾಂಗ್ರೆಸ್‌ ಪಾಲಿನ 'ಟ್ರಬಲ್‌ ಶೂಟರ್‌' ಡಿ.ಕೆ.ಶಿವಕುಮಾರ್‌ ಮುಂಬಯಿ ಭೇಟಿಯಿಂದ ಹೈಡ್ರಾಮ ಸೃಷ್ಟಿಯಾಯಿತೇ ಹೊರತು, ಮೈತ್ರಿ ನಾಯಕರ ಆಶಾವಾದ ಕೈಗೂಡಲಿಲ್ಲ. ನಿರಾಶರಾಗಿ ಅವರು ಬೆಂಗಳೂರಿಗೆ ಮರಳಿದ್ದಾರೆ. ಇಂದಿನ ರಾಜಕೀಯ ಬೆಳವಣಿಗೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
Vijaya Karnataka Web ಅತೃಪ್ತ ಶಾಸಕರು


ಸುಪ್ರೀಂ‌ನಲ್ಲಿಂದು ಅತೃಪ್ತ ಶಾಸಕರ ಅರ್ಜಿ ವಿಚಾರಣೆ

ಯಾವುದೇ ಕಾರಣವಿಲ್ಲದೇ, ಉದ್ದೇಶ ಪೂರ್ವಕವಾಗಿ ಸ್ಪೀಕರ್ ರಮೇಶ್ ಕುಮಾರ್ ನಮ್ಮ ರಾಜೀನಾಮೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ರಾಜೀನಾಮೆ ಪಡೆಯುವಂತೆ ಸ್ಪೀಕರ್‌ಗೆ ಸೂಚಿಸಿ ಎಂದು ಅತೃಪ್ತ 10 ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ಅರ್ಜಿ ಸಲ್ಲಿಸಿದ್ದಾರೆ. ಸರಿಯಾಗಿ 10.30ಗೆ ವಿಚಾರಣೆ ಆರಂಭಗೊಳ್ಳಲಿದೆ. ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಕಿ ಅತೃಪ್ತರ ಪರ ವಾದ ಮಂಡಿಸಲಿದ್ದಾರೆ. ಮುಖ್ಯ ನ್ಯಾಮೂರ್ತಿ ರಂಜನ್ ಗೊಗೊಯಿ ನೇತೃತ್ವದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಅಭಿಷೇಕ್ ಮನು ಸಿಂಘ್ವಿ ಕಾಂಗ್ರೆಸ್ ಪರ ವಾದ ಮಂಡಿಸಲಿದ್ದಾರೆ.

ತೀರ್ಪು ಬಂದ ಬಳಿಕ ಅತೃಪ್ತರು ಮುಂದಿನ ನಿರ್ಧಾರ ತಳೆಯಲಿದ್ದು, ಇಂದು 11 ಗಂಟೆಗೆ ಏನಾಗತ್ತೆ ಎಂದು ನೀವೇ ನೋಡಿ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಬುಧವಾರ ಸವಾಲು ಹಾಕಿದ್ದಾರೆ.

ವಿಧಾನ ಸೌಧಕ್ಕೆ ಬಿಗಿ ಭದ್ರತೆ

ನಿನ್ನೆ ವಿಧಾನ ಸೌಧದಲ್ಲಿ ಹೈ ಡ್ರಾಮಾ ನಡೆದ ಹಿನ್ನೆಲೆಯಲ್ಲಿ ವಿಧಾನ ಸೌಧ ಮತ್ತು ಶಕ್ತಿ ಸೌಧಕ್ಕೆ ಬಿಗಿ ಬಂದೋಬಸ್ತ್ ನೀಡಲಾಗಿದೆ.

ಶಕ್ತಿ ಸೌಧದ ಒಳಗೆ ಮತ್ತು ಹೊರಗೆ ಮಫ್ತಿ ಪೊಲೀಸ್ ನಿಯೋಜನೆ ಮಾಡಲಾಗಿದೆ.

ತಾಜ್ ವೆಸ್ಟ್ ಎಂಡ್‌ನಿಂದ ತೆರಳಿದ ಸಿಎಂ

ನಿನ್ನೆ ತಾಜ್ ವೆಸ್ಟ್ ಎಂಡ್‌ನಲ್ಲಿ ಉಳಿದುಕೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಂಗಾವಲು ವಾಹನ ಇಲ್ಲದೆ ಅಲ್ಲಿಂದ ಹೊರಟಿದ್ದಾರೆ. ಜೆಪಿ ನಗರದ ನಿವಾಸದ ಕಡೆಗೆ ಹೊರಟಿರುವ ಅವರು ತಮ್ಮ ತಂದೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಭೇಟಿಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

11 ಗಂಟೆಗೆ ಸಂಪುಟ ಸಭೆ

ಇಂದು ಮುಂಜಾನೆ 11 ಗಂಟೆಗೆ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ತುರ್ತು ಸಂಪುಟ ಸಭೆ ನಡೆಯಲಿದೆ. ರಾಜ್ಯ ರಾಜಕೀಯ ಬೆಳವಣಿಗೆಗೆ ಬಗ್ಗೆ ಚರ್ಚೆ ನಡೆಯಲಿದ್ದು ಯಾವ ರೀತಿಯಲ್ಲಿ ಸರಕಾರವನ್ನು ಉಳಿಸಿಕೊಳ್ಳುವುದು, ಅದಕ್ಕಿರುವ ಆಯ್ಕೆಗಳು ಯಾವುವೆಂದು ಚರ್ಚೆಯಾಗುವ ಸಾಧ್ಯತೆಗಳಿವೆ.

ಅತೃಪ್ತ ಶಾಸಕ ಎಸ್ ಟಿ ಸೋಮಶೇಖರ್ ಬೆಂಗಳೂರಿಗೆ

ಕಳೆದ 5 ದಿನಗಳಿಂದ ಮುಂಬಯಿ ಹೋಟೆಲ್‌ನಲ್ಲಿ ಠಿಕಾಣಿ ಹೂಡಿರುವ ಅತೃಪ್ತ ಶಾಸಕರಲ್ಲೊಬ್ಬರೊಬ್ಬ ಎಸ್ ಟಿ ಸೋಮಶೇಖರ್ ಇಂದು ಬೆಂಗಳೂರಿಗೆ ಮರಳಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜುಲೈ 6 ರಂದು ಅವರು ಮುಂಬಯಿಗೆ ತೆರಳಿದ್ದರು. ಡಿ ಕೆ ಶಿವಕುಮಾರ್ ಅವರು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಂತೆ ಸೋಮಶೇಖರ್ ಕೂಡ ನಗರಕ್ಕೆ ಮರಳಿದ್ದಾರೆ.

ರಾಜ್ಯ ವಸತಿ ಮಹಾಮಂಡಳ ಚುನಾವಣೆ ಹಿನ್ನೆಲೆಯಲ್ಲಿ ಅವರು ಬುಧವಾರ ಮಧ್ಯ ರಾತ್ರಿ ನಗರಕ್ಕೆ ಬಂದಿಳಿದಿದ್ದಾರೆ.

ವಿಧಾನ ಸೌಧದ ಸುತ್ತಲೂ ನಿಷೇಧಾಜ್ಞೆ


ಬೆಂಗಳೂರು: ಇತ್ತೀಚಿನ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಜು.11ರಿಂದ ಜು.14ರವರೆಗೆ ವಿಧಾನಸೌಧ ಸುತ್ತಲಿನ ಎರಡು ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಆದೇಶ ಹೊರಡಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನ ಸೌಧದ ಒಳಗಡೆ ಮತ್ತು ಹೊರಗಡೆ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಅಧಿಕಾರಿಗಳು, ನಗರ ಪೊಲೀಸ್ ಕಮಿಷನರ್ ಅವರಿಗೆ ಎಚ್ಚರಿಕೆ ಸಂದೇಶ ನೀಡಿದ್ದರು.

ನಾಲ್ಕು ದಿನಗಳ ಕಾಲ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ವಿಧಾನಸೌಧ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿಭಟನೆ, ಮೆರವಣಿಗೆ, ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವುದು, ಪ್ರತಿಕೃತಿಗಳ ದಹನ, ಘೋಷಣೆ ಕೂಗುವುದಕ್ಕೆ ನಿಷೇಧವಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ