ಆ್ಯಪ್ನಗರ

ಕ್ಷಿಪ್ರ ಕ್ರಾಂತಿಯ ನಡುವೆಯೇ ಸಾರಾ-ಈಶ್ವರಪ್ಪ ಕುಚುಕು !

ಜೆಡಿಎಸ್‌ ...

Vijaya Karnataka 12 Jul 2019, 5:00 am
ಬೆಂಗಳೂರು: ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಸರಕಾರದ ಬಿಕ್ಕಟ್ಟು ಉಲ್ಬಣಗೊಂಡಿರುವ ಬೆನ್ನಲ್ಲೇ, ಬಿಜೆಪಿ -ಜೆಡಿಎಸ್‌ 'ದೋಸ್ತಿ' ಸಾಧ್ಯತೆ ಗುರುವಾರ ರಾತ್ರಿ ರಾಜ್ಯ ರಾಜಕಾರಣದಲ್ಲಿ ದಿಢೀರ್‌ ಸಂಚಲನ ಮೂಡಿಸಿತು. ಈ ಸ್ಫೋಟಕ ಸುದ್ದಿಯ ಸದ್ದು ಉಭಯ ಪಕ್ಷಗಳ ಸ್ಪಷ್ಟನೆಯೊಂದಿಗೆ ಅಷ್ಟೇ ಬೇಗ ಠುಸ್‌ ಆಯಿತು.
Vijaya Karnataka Web karnataka political eswarappa mahesh
ಕ್ಷಿಪ್ರ ಕ್ರಾಂತಿಯ ನಡುವೆಯೇ ಸಾರಾ-ಈಶ್ವರಪ್ಪ ಕುಚುಕು !


ಸಿಎಂ ಕುಮಾರಸ್ವಾಮಿ ಅವರ ಆಪ್ತ ಸಚಿವ ಸಾ.ರಾ.ಮಹೇಶ್‌ ಗುರುವಾರ ರಾತ್ರಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್‌ ಹಾಗೂ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಅವರೊಟ್ಟಿಗೆ ಕುಮಾರಕೃಪ ಅತಿಥಿಗೃಹದಲ್ಲಿ ರಹಸ್ಯ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಯಿತು ಮತ್ತು ಹೊಸ ರಾಜಕೀಯ ಬೆಳವಣಿಗೆಗಳ ಸಾಧ್ಯತೆ ಕುರಿತಾದ ಚರ್ಚೆಗೆ ಗ್ರಾಸ ಒದಗಿಸಿತು. ಈ 'ತ್ರಿಮೂರ್ತಿ'ಗಳ ಸಮಾಗಮ ದಿಢೀರ್‌ ಸದ್ದುಮಾಡುತ್ತಿದ್ದಂತೆ ತಕ್ಷಣ ಎಚ್ಚೆತ್ತುಕೊಂಡ ಬಿಜೆಪಿ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ಇಂತಹ ಸಾಧ್ಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿವೆ.

ಕುಮಾರಕೃಪ ಅತಿಥಿಗೃಹದಲ್ಲಿ ಮೂವರೂ ನಾಯಕರು ಸುಮಾರು 20 ನಿಮಿಷಗಳ ಕಾಲ ಕೊಠಡಿಯೊಂದರಲ್ಲಿ ಚರ್ಚೆ ನಡೆಸಿದ್ದು ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕಾಂಗ್ರೆಸ್‌ ಪಾಳೇಯದಲ್ಲಿ ದಿಗ್ಭ್ರಮೆ ಮೂಡಿಸಿತು. ಮೈತ್ರಿ ಸರಕಾರ ಉಳಿಸಿಕೊಳ್ಳಲು ಗಂಭೀರ ಪ್ರಯತ್ನ ಸಾಗಿರುವ ಸಂದರ್ಭದಲ್ಲಿ ಜೆಡಿಎಸ್‌ ಭಿನ್ನ ಹೆಜ್ಜೆ ತುಳಿಯಿತೇ? ಎಂಬ ಆತಂಕ ಕಾಂಗ್ರೆಸ್‌ ನಾಯಕರಲ್ಲಿ ಸೃಷ್ಟಿಯಾಯಿತು. ಮತ್ತೊಂದೆಡೆ, ರಾಜೀನಾಮೆ ನೀಡಿ ಮುಂಬೈ ಸೇರಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಂಡಾಯ ಶಾಸಕರೂ ಗಲಿಬಿಲಿಗೊಳಗಾದರು.

ಅತೃಪ್ತ ಶಾಸಕರ ಮನವೊಲಿಕೆ ಫಲಪ್ರದವಾಗದ್ದು ಹಾಗೂ ಕಾಂಗ್ರೆಸ್‌ ನಾಯಕರ ನಡವಳಿಕೆಯಿಂದ ಬೇಸತ್ತು ಜೆಡಿಎಸ್‌ ಕೊನೇ ಕ್ಷಣದಲ್ಲಿ ಸರಕಾರ ಉಳಿಸಿಕೊಳ್ಳಲು ಬಿಜೆಪಿಯ ನೆರವು ಬಯಸಿತೇ ಅಥವಾ ಬಿಜೆಪಿಗೆ ಬೆಂಬಲ ನೀಡಲು ಮುಂದಾಯಿತೇ? ಎಂಬ ಅನುಮಾನಗಳು ಮೂಡಿದವು.

ಜೆಡಿಎಸ್‌ ಸಚಿವ ಸಾ.ರಾ.ಮಹೇಶ್‌ ಅವರ ಭೇಟಿ ಆಕಸ್ಮಿಕ. ಹೊಸ ಮೈತ್ರಿ ಸಾಧ್ಯತೆ ಎಂಬುದೆಲ್ಲಾ ಊಹಾಪೋಹ ಮತ್ತು ಗಾಳಿ ಸುದ್ದಿ ಎಂದು ಬಿಜೆಪಿ ನಾಯಕ ಮುರಳೀಧರರಾವ್‌ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಬಿಜೆಪಿ ನಾಯಕರೂ ಇದೇ ಸ್ಪಷ್ಟನೆ ನೀಡಿದ್ದಾರೆ.

ಮತ್ತೊಂದೆಡೆ, ಸುದ್ದಿಯ ಕೇಂದ್ರಬಿಂದುವಾಗಿದ್ದ ಸಾ.ರಾ.ಮಹೇಶ್‌ ಸ್ಪಷ್ಟನೆ ನೀಡಿದ್ದಾರೆ. ''ವಿಶ್ರಾಂತಿಗಾಗಿ ಕುಮಾರಕೃಪ ಅತಿಥಿಗೃಹಕ್ಕೆ ತೆರಳಿದ್ದಾಗ ಆಕಸ್ಮಿಕವಾಗಿ ಮುರಳೀಧರರಾವ್‌ ಮತ್ತು ಈಶ್ವರಪ್ಪ ಭೇಟಿಯಾದರು. ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ವಿಚಾರದಲ್ಲಿ ಕೆಲಸಮಯ ಚರ್ಚೆ ಮಾಡಿದೆ. ಇದರ ಹೊರತಾಗಿ ಬೇರೇನೂ ಇಲ್ಲ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರ ಮುಂದಿನ 4 ವರ್ಷ ಮುಂದುವರಿಯಲಿದೆ ಮತ್ತು ಕುಮಾರಸ್ವಾಮಿ ಅವರು ಸಿಎಂ ಆಗಿ ಮುಂದುವರಿಯಲಿದ್ದಾರೆ. ಈ ಬಗ್ಗೆ ಯಾವ ಅನುಮಾನವೂ ಬೇಡ,'' ಎಂದು ಮಹೇಶ್‌ ಸ್ಪಷ್ಟನೆ ನೀಡಿದರು.

ಕುಮಾರಕೃಪ ಅತಿಥಿಗೃಹಕ್ಕೆ ಶಾಸಕರು, ಸಚಿವರು ವಿಶ್ರಾಂತಿ ಪಡೆಯಲು ಹೋಗುವುದು ಸಹಜ. ಇಂತಹ ಸಂದರ್ಭದಲ್ಲಿ ಮುರಳೀಧರರಾವ್‌ ಮತ್ತು ಈಶ್ವರಪ್ಪ ಮುಖಾಮುಖಿ ಭೇಟಿಯಾಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಸರಕಾರ ಸದೃಢವಾಗಿದೆ ಎಂದು ಜೆಡಿಎಸ್‌ ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ಮಧ್ಯೆ ಟ್ವೀಟ್‌ ಮಾಡಿರುವ ಮುರಳೀಧರ ರಾವ್‌ ''ಜೆಡಿಎಸ್‌ ನಾಯಕರ ಜತೆ ಮಾತುಕತೆ ನಡೆಸಲಾಗಿದೆ ಎಂಬುದರ ಬಗ್ಗೆ ಯಾವುದೇ ಸತ್ಯವಿಲ್ಲ. ಇದೊಂದು ಸಾರ್ವಜನಿಕ ಸ್ಥಳ, ಆಕಸ್ಮಿಕ ಭೇಟಿ, ಊಹಾಪೋಹ ಸುದ್ದಿಗಳನ್ನು ನಂಬಬೇಡಿ,'' ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ