ಬೆಂಗಳೂರು: ಬಡ್ತಿ ಸೌಲಭ್ಯ ಹಾಗೂ ವೇತನ ತಾರತಮ್ಯವನ್ನು ಸರಕಾರ ಕಾಲಮಿತಿಯೊಳಗೆ ನಿವಾರಿಸದಿದ್ದಲ್ಲಿ ಈ ವರ್ಷ ಕೂಡ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವುದು ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ಎಚ್ಚರಿಸಿದೆ.
''ನಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್ 4ರಂದು ನಗರದ ಮೌರ್ಯ ಹೋಟೆಲ್ ಗಾಂಧಿ ಪ್ರತಿಮೆ ಬಳಿ ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತದೆ. ಆನಂತರವೂ ಸರಕಾರ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಮೌಲ್ಯಮಾಪನ ಬಹಿಷ್ಕರಿಸುವುದು ಅನಿವಾರ್ಯವಾಗುತ್ತದೆ,'' ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ 'ವಿಕ'ಕ್ಕೆ ತಿಳಿಸಿದ್ದಾರೆ.
''ಕಳೆದ ವರ್ಷ ಸತತ 18 ದಿನಗಳ ಕಾಲ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸರಕಾರ ಡಿಸೆಂಬರ್ ಅಥವಾ ಜನವರಿಯೊಳಗೆ ವೇತನ ತಾರತಮ್ಯ ಹಾಗೂ ಬಡ್ತಿ ಸಮಸ್ಯೆ ನಿವಾರಿಸುವುದಾಗಿ ಭರವಸೆ ನೀಡಿತ್ತು. ಆದರೆ, ಅದು ಇದುವರೆಗೆ ಜಾರಿಯಾಗಿಲ್ಲ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸತತ ಏಳು ವರ್ಷಗಳಿಂದ ಹಂತ-ಹಂತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ, ಮೌಲ್ಯಮಾಪನ ಬಹಿಷ್ಕರಿಸದೆ ನಮಗೆ ಅನ್ಯ ಮಾರ್ಗವೇ ಉಳಿದಿಲ್ಲ,'' ಎಂದು ಅವರು ಹೇಳಿದರು.
''ಪಿಯು ಉಪನ್ಯಾಸಕರಿಗೆ ನಾಲ್ಕು ಬಡ್ತಿ ನೀಡಬೇಕಾಗಿತ್ತು. ಕನಿಷ್ಟ ಎರಡು ಬಡ್ತಿ ಸೌಲಭ್ಯವನ್ನಾದರೂ ನೀಡದಿದ್ದರೆ ಹೇಗೆ? ರಾಜ್ಯ ಸರಕಾರ ಒಮ್ಮೆ ಒಪ್ಪಿ ನಂತರ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವುದು ಸರಿಯಲ್ಲ,'' ಎಂದು ಅವರು ಆಕ್ಷೇಪಿಸಿದರು.