ಆ್ಯಪ್ನಗರ

ವಿರೋಧ ಪಕ್ಷ ನಾಯಕನಾದ ನಾನು ಎಂದ ಸಿದ್ದರಾಮಯ್ಯ!

ಶಾಸಕಾಂಗ ಪಕ್ಷದ ನಾಯಕ ಎನ್ನುವ ಬದಲು ವಿರೋಧ ಪಕ್ಷದ ನಾಯಕನಾದ ನಾನು ಎಂದ ಸಿದ್ದರಾಮಯ್ಯ ಅವರನ್ನು ಬಿಜೆಪಿಯವರು ಮೇಜು ಕುಟ್ಟಿ ಛೇಡಿಸಿದರು. ಈ ಸನ್ನಿವೇಶ ಸದನದಲ್ಲಿ ಹಾಸ್ಯಕ್ಕೆ ಎಡೆ ಮಾಡಿಕೊಟ್ಟಿತು.

Vijaya Karnataka Web 18 Jul 2019, 12:40 pm
ಬೆಂಗಳೂರು: ವಿರೋಧಪಕ್ಷದ ನಾಯಕನಾದ ನಾನು ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ಬಿಜೆಪಿ ಶಾಸಕರು ಮೇಜು ಕುಟ್ಟಿ ಛೇಡಿಸಿದ ಸನ್ನಿವೇಶ ವಿಧಾನಸಭೆಯಲ್ಲಿ ನಡೆದಿದೆ.
Vijaya Karnataka Web siddaramaish


ವಿಶ್ವಾಸಮತ ಯಾಚನೆಯ ಚರ್ಚೆಯ ವೇಳೆ ಕ್ರಿಯಾಲೋಪವೆತ್ತಿದ ಸಿದ್ದರಾಮಯ್ಯ ಅವರು, ಸುದೀರ್ಘ ಭಾಷಣ ಮಾಡಲಾರಂಭಿಸಿದರು. ಈ ವೇಳೆ ಬಿಜೆಪಿ ಶಾಸಕರು ಅಡ್ಡಿಪಡಿಸಿದರಲ್ಲದೆ, ಸಿದ್ದರಾಮಯ್ಯ ಅವರು ಕ್ರಿಯಾಲೋಪವನ್ನು ನೇರವಾಗಿ ತಿಳಿಸುವಂತೆ ಆಗ್ರಹಿಸಿದರು.

ಮಾತು ಮುಂದುವರಿಸಿದ ಸಿದ್ದರಾಮಯ್ಯ, ಶಾಸಕಾಂಗ ಪಕ್ಷದ ನಾಯಕ ಎನ್ನುವ ಬದಲು ವಿರೋಧ ಪಕ್ಷದ ನಾಯಕನಾದ ನಾನು ಎಂದು ಹೇಳಿದರು. ಇದಕ್ಕೆ ಬಿಜೆಪಿ ಶಾಸಕರು ಮೇಜು ಕುಟ್ಟಿ, ಸಿದ್ದರಾಮಯ್ಯ ಅವರನ್ನು ಛೇಡಿಸಿದರು.

ತಕ್ಷಣ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಏನು, ಬಹಳ ಖುಷಿಯಾಗಿ ಮೇಜು ಕುಟ್ಟುತ್ತಿದ್ದೀರಲ್ಲ? ನಾನೂ ನಾಲ್ಕು ವರ್ಷ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತೇ ಬಂದವನು. ಈ ಅಭ್ಯಾಸ ಹಾಗೂ ಮಾತಿನ ಭರದಲ್ಲಿ ತಪ್ಪಿ ವಿರೋಧ ಪಕ್ಷ ನಾಯಕ ಎಂದು ಹೇಳಿದ್ದೇನೆ ಅಷ್ಟೇ. ಅದಕ್ಕೇ ಇಷ್ಟೊಂದು ಖುಷಿ ಪಡುವ ಅಗತ್ಯವಿಲ್ಲ ಎಂದರು. ಅಷ್ಟೇ ಅಲ್ಲ, ಸ್ಪೀಕರ್‌ ಸಂಬೋಧಿಸಿಯೂ ಬಿಜೆಪಿ ಶಾಸಕರ ಖುಷಿ ನೋಡಿ ಎಂದು ಬಿಟ್ಟರು!
ಸ್ಪೀಕರ್‌ ರಮೇಶ್‌ ಕುಮಾರ್‌ ಈ ವಿಚಾರಕ್ಕೆ ಮತ್ತೆ ಸ್ವಲ್ಪ ಹಾಸ್ಯ ಸೇರಿಸಿ, ಬಿಜೆಪಿಯವರನ್ನು ಸ್ವಲ್ಪ ಹೊತ್ತಾದರೂ ಖುಷಿಯಾಗಿರಲು ಬಿಡಿ ಎಂದು ಬಿಟ್ಟರು!

ಸಿದ್ದರಾಮಯ್ಯ ಭಾಷಣದ ಅಂಶಗಳೇನು? ಸುಪ್ರೀಂ ಕೋರ್ಟ್‌ ತೀರ್ಪು ವಿಪ್‌ಗೆ ಚ್ಯುತಿಯಾಗುವಂತಿದೆ. ಅತೃಪ್ತ ಶಾಸಕರಿಗೆ ಬಿಜೆಪಿಯ ಕುಮ್ಮಕ್ಕಿದೆ ಎಂದು ಹೇಳಿದರು.

ನಾನು ಶಾಸಕಾಂಗ ಪಕ್ಷದ ನಾಯಕನಾಗಿ ವಿಪ್‌ ನೀಡುವ ಅಧಿಕಾರ ನನಗಿದೆ. ಅತೃಪ್ತರನ್ನು ಬಲಾತ್ಕರಿಸುವಂತಿಲ್ಲ ಎಂಬ ಕೋರ್ಟ್‌ ಆದೇಶಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಅವರನ್ನು ಬಲಾತ್ಕರಿಸುತ್ತಿಲ್ಲ ಎಂದು ಹೇಳಿದರು. ಈ ವೇಳೆ ಬಿಜೆಪಿ ನಾಯಕರು ಮತ್ತೆ ಕ್ರಿಯಾಲೋಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಕೆಲ ಕಾಲ ಗದ್ದಲ ಸೃಷ್ಟಿಯಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ