ಆ್ಯಪ್ನಗರ

ಪ್ರವಾಹ ಪೀಡಿತ ಪ್ರದೇಶದ ಸಂಪರ್ಕ ವ್ಯವಸ್ಥೆಗೆ ಆದ್ಯತೆ

ಪ್ರವಾಹ ಪರಿಸ್ಥಿತಿಯಿಂದ ಹಾಳಾಗಿರುವ ರಸ್ತೆ, ಸೇತುವೆ, ಸರಕಾರಿ ಕಟ್ಟಡ ಸರಿಪಡಿಸುವುದು ...

Vijaya Karnataka 28 Aug 2019, 5:00 am
ಬೆಂಗಳೂರು: ಪ್ರವಾಹ ಪರಿಸ್ಥಿತಿಯಿಂದ ಹಾಳಾಗಿರುವ ರಸ್ತೆ, ಸೇತುವೆ, ಸರಕಾರಿ ಕಟ್ಟಡ ಸರಿಪಡಿಸುವುದು ಸರಕಾರದ ಮೊದಲ ಆದ್ಯತೆ ಎಂದು ನೂತನ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
Vijaya Karnataka Web GOVIND KARJOL (BJP)


ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಖಾತೆಯನ್ನೂ ಹೊಂದಿರುವ ಅವರು ವಿಧಾನಸೌಧ ಕಚೇರಿಯಲ್ಲಿ ಮಂಗಳವಾರ ಕಾರ್ಯಾರಂಭ ಮಾಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ''ನೆರೆ ಹಾವಳಿ ಹಾಗೂ ಮಳೆಯಿಂದ ರಾಜ್ಯಾದ್ಯಂತ ಸಂಪರ್ಕ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಹಾಳಾಗಿದ್ದು, ಅದನ್ನು ಸರಿಪಡಿಸುವ ಕೆಲಸವನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುವುದು'' ಎಂದು ಹೇಳಿದರು.

''ಬುಧವಾರ ಲೋಕೋಪಯೋಗಿ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ. ರಸ್ತೆ, ಸೇತುವೆ, ಸರಕಾರಿ ಕಟ್ಟಡಗಳ ಹಾನಿ ಕುರಿತಂತೆ ವಿವರವಾದ ಮಾಹಿತಿ ಪಡೆಯಲಾಗುವುದು. ಬಳಿಕ, ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸುತ್ತೇನೆ. ನಷ್ಟದ ಸಂಪೂರ್ಣ ಮಾಹಿತಿ ಕಲೆಹಾಕಿದ ಬಳಿಕ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಸೂಕ್ತ ನೆರವಿಗೆ ಮನವಿ ಮಾಡಲಾಗುವುದು'' ಎಂದು ತಿಳಿಸಿದರು.

ದಲಿತರಿಗೆ ಕಾರ್ಯಕ್ರಮ

''ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲಷ್ಟೇ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ಸೀಮಿತವಾಗಬಾರದು. ದಲಿತ ಸಮುದಾಯದ ಯುವಜನರಿಗೆ ವೃತ್ತಿಪರ ಕೋರ್ಸ್‌ ಮಾಡಲು ಉತ್ತಮ ಅವಕಾಶ ಹಾಗೂ ಆ ಮೂಲಕ ಉದ್ಯೋಗವಕಾಶ ಕಲ್ಪಿಸುವುದು ಆದ್ಯತೆಯಾಗಬೇಕು. ಈ ಮೂಲಕ ನೊಂದವರಿಗೆ ಧ್ವನಿಯಾಗಿ ಶಕ್ತಿ ತುಂಬುವ ಸದಾಶಯ ನನ್ನದಾಗಿದೆ'' ಎಂದು ಕಾರಜೋಳ ಹೇಳಿದರು.

ಗೊಂದಲ ಇಲ್ಲ

''ಮೂರು ಡಿಸಿಎಂ ಹುದ್ದೆಗಳ ಸೃಷ್ಟಿಯಿಂದ ಪಕ್ಷ ಅಥವಾ ಸರಕಾರದಲ್ಲಿ ಯಾವ ಗೊಂದಲವೂ ಇಲ್ಲ. ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಿರುವುದು ಹೈಕಮಾಂಡ್‌ ತೀರ್ಮಾನವಾಗಿದ್ದು, ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ