ಆ್ಯಪ್ನಗರ

ಕೆಎಎಸ್‌ ನೇಮಕ ಹಗರಣ: 2016ರ ತೀರ್ಪು ಪುನರ್‌ ಪರಿಶೀಲನೆ ಅರ್ಜಿ ವಜಾ

1998, 99, 2004ರ ಕೆಎಎಸ್‌ ನೇಮಕ ಹಗರಣ ಸಂಬಂಧ ವಿಭಾಗೀಯ ಪೀಠ 2016ರ ಜೂ...

Vijaya Karnataka 13 Apr 2019, 5:00 am
ಬೆಂಗಳೂರು: 1998, 99, 2004ರ ಕೆಎಎಸ್‌ ನೇಮಕ ಹಗರಣ ಸಂಬಂಧ ವಿಭಾಗೀಯ ಪೀಠ 2016ರ ಜೂ.21ರ ತೀರ್ಪು ಮರು ಪರಿಶೀಲನೆಯ ಕೋರಿಕೆಯನ್ನು ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.
Vijaya Karnataka Web highcourt enterncy


ಬೆಂಗಳೂರಿನ ಕೆ.ಮಾಯಣ್ಣ ಗೌಡ ಸಲ್ಲಿಸಿದ್ದ ರಿವ್ಯೂ ಅರ್ಜಿಯನ್ನು ಆಲಿಸಿದ ನ್ಯಾ.ಎಸ್‌.ಎನ್‌. ಸತ್ಯನಾರಾಯಣ ಅವರಿದ್ದ ವಿಭಾಗೀಯ ಪೀಠ ಕೆಲ ಕಾಲ ವಾದ ಆಲಿಸಿ, ಈ ಆದೇಶ ನೀಡಿತು.

''ಹೈಕೋರ್ಟ್‌ನ ವಿಭಾಗೀಯ ಪೀಠದ ತೀರ್ಪು ಪ್ರಶ್ನಿಸಿದ್ದ ವಿಶೇಷ ಮೇಲ್ಮನವಿಯನ್ನು ಹಾಗೂ ಆ ನಂತರ ಸಲ್ಲಿಸಿದ್ದ ಪುನರ್‌ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್‌ ಈಗಾಗಲೇ ವಜಾಗೊಳಿಸಿದೆ. ಈ ಹಂತದಲ್ಲಿ ಮತ್ತೆ ಹಿಂದಿನ ತೀರ್ಪು ಮರು ಪರಿಶೀಲಿಸಲಾಗದು. ಹೈಕೋರ್ಟ್‌ ಆದೇಶ ನೀಡಿದ ಮೂರು ವರ್ಷಗಳ ಬಳಿಕ ಈ ರಿವ್ಯೂ ಅರ್ಜಿ ಮಾನ್ಯ ಮಾಡಲಾಗದು''ಎಂದು ನ್ಯಾಯಪೀಠ ಹೇಳಿದೆ.

''ಹೈಕೋರ್ಟ್‌ನ ವಿಭಾಗೀಯ ಪೀಠ 2016ರ ಜೂ.21ರಂದು ನೀಡಿರುವ ತೀರ್ಪಿನಲ್ಲಿ ತಪ್ಪಾಗಿಲ್ಲ. ಎಲ್ಲ ಅಂಶಗಳನ್ನು ಆಧರಿಸಿಯೇ ತೀರ್ಪು ನೀಡಲಾಗಿದೆ,'' ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

2016ರ ಜೂ.21ರಂದು ಕೆ.ಆರ್‌.ಖಲೀಲ್‌ ಆಹಮದ್‌ ಮತ್ತಿತರರು ಸಲ್ಲಿಸಿದ್ದ ಪಿಐಎಲ್‌ ಆಲಿಸಿದ್ದ ನ್ಯಾ.ಎನ್‌.ಕುಮಾರ್‌ ಮತ್ತು ನ್ಯಾ.ಬಿ.ವೀರಪ್ಪ ಅವರಿದ್ದ ವಿಭಾಗೀಯ ಪೀಠ, ''ಕೆಎಎಸ್‌ ಅಧಿಕಾರಿಗಳ ನೇಮಕದಲ್ಲಿ ಅಕ್ರಮ ನಡೆದಿರುವುದು ನಿಜ. ಆದರೂ ಆ ನೇಮಕಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗದು. ನಿಯಮ ಉಲ್ಲಂಘಿಸಿ ನೇಮಕಗೊಂಡವರನ್ನು ಸೇವೆಯಿಂದ ಮುಕ್ತಿಗೊಳಿಸಿ,ಆ ಜಾಗದಲ್ಲಿ ಪ್ರತಿಭಾವಂತರಿಗೆ ಆವಕಾಶ ನೀಡಿ, ''ಎಂದು ತೀರ್ಪು ನೀಡಿತ್ತು. ''ಮೀಸಲು ವಲಸೆ, ಸ್ವಜನಪಕ್ಷಪಾತ, ಸಂದರ್ಶನದ ಅಂಕ ವ್ಯತ್ಯಾಸ ಮತ್ತಿತರ ಅಕ್ರಮಗಳಿಂದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ ಕೆಪಿಎಸ್‌ಸಿ 2 ತಿಂಗಳಲ್ಲಿ ಹೊಸ ಆಯ್ಕೆ ಪಟ್ಟಿ ಸಿದ್ದಪಡಿಸಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು''ಎಂದುಪೀಠ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು. ಅದರ ವಿರುದ್ಧ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಹಾಗೂ ಪುನರ್‌ ಪರಿಶೀಲನಾ ಅರ್ಜಿಗಳೂ ಸಹ ವಜಾಗೊಂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ