ಆ್ಯಪ್ನಗರ

ಬಿಜೆಪಿ ಹುಟ್ಟಿದ್ದೇ 370 ರದ್ದತಿ ಉದ್ದೇಶದಿಂದ: ಬಿ.ಎಲ್‌.ಸಂತೋಷ್‌

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್‌...

Vijaya Karnataka 24 Aug 2019, 5:00 am
ಬೆಂಗಳೂರು: ಬಿಜೆಪಿ ಹುಟ್ಟಿದ್ದೇ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಮಾಡಲು ಹಾಗೂ ಭಾರತದೊಂದಿಗೆ ಶಾಶ್ವತವಾಗಿ ಕಾಶ್ಮೀರ ವಿಲೀನ ಮಾಡುವ ಉದ್ದೇಶದಿಂದ. ಆ ಗುರಿ ಸಾಧನೆ ಮಾಡುವ ಮೂಲಕ ಪಕ್ಷ ತನ್ನ ಜನ್ಮ ಸಾರ್ಥಕ ಮಾಡಿಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದರು.
Vijaya Karnataka Web 2308-2-2-43


ನಗರದ ಗಾಂಧಿ ಭವನದಲ್ಲಿ ಜನಮನ ಸಂಘಟನೆ ಶುಕ್ರವಾರ ಆಯೋಜಿಸಿದ್ದ 'ಭಾರತಾಂಬೆಯ ಕಿರೀಟ-ಕಾಶ್ಮೀರ 370 ವಿಧಿ ರದ್ಧತಿ' ಕುರಿತು ಉಪನ್ಯಾಸ ನೀಡಿದ ಅವರು, ''ಕರ್ನಾಟಕ, ಗುಜರಾತ್‌, ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬರಬೇಕು, ಯಾರನ್ನಾದರೂ ಪ್ರಧಾನಿ ಮಾಡಬೇಕು, ಮುಖ್ಯಮಂತ್ರಿ ಮಾಡಬೇಕೆಂದು ಪಕ್ಷ ಜನಿಸಲಿಲ್ಲ. ಇಂತಹ ಮಹತ್ತರವಾದ ಕೆಲಸ ಮಾಡುವ ಆಶಯದಿಂದ ಪಕ್ಷ ಉದಯವಾಯಿತು,'' ಎಂದು ಅಭಿಪ್ರಾಯಪಟ್ಟರು.

''ಸ್ವತಃ ಅಂಬೇಡ್ಕರ್‌ ಅವರು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದನ್ನು ವಿರೋಧ ಮಾಡಿದ್ದರು. ಅಂಬೇಡ್ಕರ್‌ ರಚಿಸಿದ ಸಂವಿಧಾನ ಇದುವರೆಗೂ ಕಾಶ್ಮೀರಕ್ಕೆ ಅನ್ವಯವಾಗಿರಲೇ ಇಲ್ಲ. ಇದು ಅಂಬೇಡ್ಕರ್‌ಗೆ ಮಾಡಿದ ದೊಡ್ಡ ಅಪಮಾನ ಅಲ್ಲವೇ ? ಹಾಗಾದರೆ ಇದನ್ನು ಯಾಕೆ ಯಾರೂ ಇದುವರೆಗೂ ವಿರೋಧಿಸಲಿಲ್ಲ. ಕಾಶ್ಮೀರಕ್ಕೆ 379ನೇ ವಿಧಿ ಮೂಲಕ ವಿಶೇಷ ಸ್ಥಾನಮಾನ ನೀಡಿಕೆಯನ್ನು ಅಂಬೇಡ್ಕರ್‌ ಪ್ರಬಲವಾಗಿ ವಿರೋಧಿಸಿದ್ದರಿಂದ ಅದನ್ನು ತಾತ್ಕಾಲಿಕವಾಗಿ ಸ್ವೀಕರಿಸಿ ನೆಹರು ವಿರುದ್ಧ ಮಾತನಾಡಲಾಗದೆ ಅಂದಿನ ಅನೇಕ ಕಾಂಗ್ರೆಸ್‌ ಹಿರಿಯ ನಾಯಕರು ಮೌನಕ್ಕೆ ಶರಣಾಗಿದ್ದರು. ವಾಸ್ತವದಲ್ಲಿ ಬಹುತೇಕ ಆಗಿನ ಕಾಂಗ್ರೆಸಿಗರಿಗೂ ಬೇಕಿರಲಿಲ್ಲ ,''ಎಂದು ಹೇಳಿದರು.

''ಶ್ಯಾಮ ಪ್ರಸಾದ್‌ ಮುಖರ್ಜಿ ಅವರು ನೆಹರು ಅವರ ಅರ್ಥಹೀನ ರಾಜಕೀಯದಿಂದ ಬೇಸತ್ತು ಕಾಂಗ್ರೆಸ್‌ನಿಂದ ಹೊರಬಂದು ಜನಸಂಘ ಸ್ಥಾಪಿಸಿದ್ದರು. ನಂತರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕುವ ಹೋರಾಟ ಆರಂಭಿಸಿದ್ದರು. ಆದರೆ ಅಂದು ಮೊದಲ ಪ್ರಧಾನಿ ಮಾಡಿದ ಐತಿಹಾಸಿಕ ಪ್ರಮಾದ ಸರಿಪಡಿಸಲು 15 ನೇ ಪ್ರಧಾನಿ ಮೋದಿ ಬರಬೇಕಾಯಿತು. ವಿಶೇಷ ಸ್ಥಾನಮಾನ ರದ್ದು ಮಾಡುವ ಕ್ರಮವನ್ನು ದಿಢೀರನೆ ಕೈಗೊಂಡಿಲ್ಲ. ಕಳೆದ ಐದು ವರ್ಷಗಳಿಂದ ಇದಕ್ಕಾಗಿ ಸಿದ್ಧತೆ ನಡೆದಿತ್ತು. ಹಾಗೆಯೇ ಪಕ್ಷದ ಕಳೆದ 73 ಅಧಿವೇಶನಗಳಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜತೆ ಕೈ ಜೋಡಿಸಿದಾಗ ಪಕ್ಷದೊಳಗಿದ್ದವರೂ ಟೀಕಿಸಿದ್ದರು. ಆದರೆ ಅದು ಕೂಡ ಈ ಉದ್ದೇಶದ ಒಂದು ತಂತ್ರವಾಗಿತ್ತು,'' ಎಂದರು.

ರಾಷ್ಟ್ರೀಯತೆಯ ರಾಜಕಾರಣ

''ನೆಹರು ಮೂರ್ಖತನದಿಂದ ಕಾಶ್ಮೀರದಲ್ಲಿ 42 ಸಾವಿರ ನಿವಾಸಿಗಳು ವಿನಾಕಾರಣ ಸತ್ತಿದ್ದಾರೆ. ವಿಶೇಷ ಸ್ಥಾನಮಾನಕ್ಕಾಗಿ ಬಲಿದಾನವಾದವರಲ್ಲಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಮೊದಲಿಗರಾಗಿದ್ದರು. ಸದಾ ಜಾತ್ಯತೀತ ರಾಜಕಾರಣ ಕಂಡಿದ್ದ ದೇಶದ ಜನರು ಬಿಜೆಪಿ ಬಂದ ಬಳಿಕ ರಾಷ್ಟ್ರೀಯತೆಯ ರಾಜಕಾರಣವೂ ಇದೆ ಎಂಬುದನ್ನು ಅರಿತುಕೊಂಡರು,'' ಎಂದರು.

ಪ್ರಮುಖಾಂಶಗಳು'

*ಕಾಶ್ಮೀರ ಎಂದಾಕ್ಷಣ ಮುಸ್ಲಿಂ ಹಿಂದುಗಳ ಕಲಹ ಅಲ್ಲ

* 370 ರದ್ದಿನಿಂದ ಜನರಿಗೆ ಯಾವುದೇ ನಷ್ಟವಾಗಿಲ್ಲ.

* ಫಾರೂಕ್‌ ಅಬ್ದುಲ್ಲ, ಮೆಹಬೂಬ ಮುಫ್ತಿ ಹಾಗೂ ಗಾಂಧಿ ಕುಟುಂಬಕ್ಕೆ ಮಾತ್ರ ನಷ್ಟ

*ಜಮ್ಮು ಕಾಶ್ಮೀರದ ಒಟ್ಟು ಯುವಜನರಲ್ಲಿ ಶೇ.13 ರಷ್ಟು ಮಂದಿಗೆ ಮಾತ್ರ ಉನ್ನತ ಶಿಕ್ಷಣ

* ಶೇ.7 ಮಂದಿ ಮಾತ್ರ ಪಿಎಚ್‌ಡಿ ಮುಗಿಸಿದ್ದಾರೆ.

*ಇನ್ನು ಮುಂದೆ ಕೆಎಲ್‌ಇ ಸೊಸೈಟಿ ಶಾಖೆ, ಅಪೋಲೊ ಆಸ್ಪತ್ರೆ ನಿರ್ಮಾಣದ ಭರವಸೆ

* ಎಲ್ಲ ರಾಜ್ಯಗಳಿಗಿರುವ 250 ಕಾನೂನುಗಳು ಕಾಶ್ಮೀರದಲ್ಲಿ ಜಾರಿಯಾಗಿದೆ.

ಪಿಒಕೆ ನಮ್ಮದಾಗಲಿದೆ

''ಜಮ್ಮು ಕಾಶ್ಮೀರಕ್ಕೆ ನ್ಯಾಯ ದೊರೆತ ನಂತರ ಗಡಿ ನಿಯಂತ್ರಣ ರೇಖೆಯ ಆಚೆಯ ಭೂಮಿಯೂ (ಪಿಒಕೆ) ದೇಶಕ್ಕೆ ಸೇರಲಿದೆ. ಕಾಶ್ಮೀರ ವಿಶೇಷ ಸ್ಥಾನಮಾನ ಹೇಗೆ ಯಾರ ನಿರೀಕ್ಷೆ ಇಲ್ಲದಂತೆ ರದ್ದಾಯಿತೋ ಅದೇ ರೀತಿ ಪಿಒಕೆ ಕೂಡ ನಮ್ಮದಾಗಲಿದೆ ಎಂಬ ಭರವಸೆ ಇಟ್ಟುಕೊಳ್ಳಿ,'' ಎಂದು ಬಿ.ಎಲ್‌.ಸಂತೋಷ್‌ ಹೇಳಿದರು.


ರಾಮಮಂದಿರ ನಿರ್ಮಾಣ

''ಬಿಜೆಪಿ ಹುಟ್ಟಿದ್ದೇ ಕಾಶ್ಮೀರಕ್ಕಾಗಿದ್ದ ಅನ್ಯಾಯ ಸರಿಪಡಿಸಲು ಎಂಬುದು ಎಷ್ಟು ಸತ್ಯವೋ ಅದೇ ರೀತಿ ರಾಮಮಂದಿರ ನಿರ್ಮಾಣ ಹಾಗೂ ಸಮಾನ ನಾಗರಿಕ ಸಂಹಿತೆ ಜಾರಿ ಹೋರಾಟದಿಂದಲೇ ಪಕ್ಷ ಬೆಳೆದು ಬಂದಿದೆ ಎಂಬುದೂ ಅಷ್ಟೇ ಸತ್ಯ. ರಾಮಮಂದಿರ ನಿರ್ಮಾಣ ಸಾಕಾರವಾಗಲಿದೆ ಎಂಬ ನಂಬಿಕೆ ಹಾಗೂ ಭರವಸೆಯನ್ನು ಇಟ್ಟುಕೊಳ್ಳಿ ,''ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ