ಆ್ಯಪ್ನಗರ

ಎನ್‌ಇಪಿನಲ್ಲಿ ಮಾತೃಭಾಷೆಯದೇ ಮೊದಲು ಪ್ರಸ್ತಾಪ; ಹಿಂದಿ ಕಡ್ಡಾಯವೆಂದಿಲ್ಲ: ಡಾ.ಕಸ್ತೂರಿ ರಂಗನ್‌ ಬೇಸರ

''ರಾಷ್ಟ್ರೀಯ ಶಿಕ್ಷಣ ನೀತಿ-2019ರ (ಎನ್‌ಇಪಿ) ಕರಡಿನಲ್ಲಿ ಹಿಂದಿ ಭಾಷೆ ಕಡ್ಡಾಯದ ಪ್ರಸ್ತಾಪ ಮಾಡಿರಲಿಲ್ಲ...

Vijaya Karnataka 26 Jul 2019, 5:00 am
ಬೆಂಗಳೂರು: ''ರಾಷ್ಟ್ರೀಯ ಶಿಕ್ಷಣ ನೀತಿ-2019ರ (ಎನ್‌ಇಪಿ) ಕರಡಿನಲ್ಲಿ ಹಿಂದಿ ಭಾಷೆ ಕಡ್ಡಾಯದ ಪ್ರಸ್ತಾಪ ಮಾಡಿರಲಿಲ್ಲ. ಆದರೆ, ಕೆಲವರು ಅನಗತ್ಯವಾಗಿ ವಿವಾದ ಸೃಷ್ಟಿಸಿದರು,'' ಎಂದು ಎನ್‌ಇಪಿ-2019ರ ಕರಡು ಸಮಿತಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್‌ ಬೇಸರ ವ್ಯಕ್ತಪಡಿಸಿದರು.
Vijaya Karnataka Web 2507-2-2-KSG_11


ನಗರದ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎನ್‌ಇಪಿ-2019ರ ಕರಡು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ,''ಎನ್‌ಇಪಿ ಕರಡು ಪ್ರತಿಯಲ್ಲಿ ಭಾಷೆಗೆ ಸಂಬಂಧಿಸಿದಂತೆ ಕೇವಲ ಒಂದು 'ಪ್ಯಾರ' ಮಾತ್ರ ಪ್ರಸ್ತಾವನೆಯಿದೆ. ಮೊದಲು ಮಾತೃಭಾಷೆ, ನಂತರ ಇಂಗ್ಲಿಷ್‌ ಹಾಗೂ ಮೂರನೇ ಭಾಷೆಯಾಗಿ ಹಿಂದಿ ಸೇರಿದಂತೆ ಯಾವುದಾದರೂ ಪ್ರಾದೇಶಿಕ ಭಾಷೆ ಕಲಿಸಬಹುದು ಎಂದು ಪ್ರಸ್ತಾಪಿಸಲಾಗಿತ್ತು,''ಎಂದು ಸ್ಪಷ್ಟನೆ ನೀಡಿದರು.

''1986ರ ಕೊಠಾರಿ ಸಮಿತಿಯ ವರದಿಯಂತೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಈಗಾಗಲೇ ತ್ರಿಭಾಷಾ ಸೂತ್ರ ಜಾರಿಯಲ್ಲಿದೆ. ದೇಶದಲ್ಲಿ ಪಾಳಿ, ಪ್ರಾಕೃತ, ಸಂಸ್ಕೃತ, ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಪುರಾತನ ಹಾಗೂ ಪ್ರಾದೇಶಿಕ ಭಾಷೆಗಳಿವೆ. ಹಾಗಾಗಿ, ಯಾವುದೇ ಭಾಷೆಗಳನ್ನು ಕಡೆಗಣಿಸುವಂತಿಲ್ಲ,'' ಎಂದರು.

''ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿ ಮೂರು ದಶಕಗಳು ಕಳೆದಿವೆ. ಹಾಗಾಗಿ, ಪ್ರಸಕ್ತ ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ 70 ಸಂಸ್ಥೆಗಳು, 216 ಶಿಕ್ಷಣ ತಜ್ಞರ ಜತೆ ಚರ್ಚಿಸಿ ಕರಡು ಪ್ರತಿಯನ್ನು ರೂಪಿಸಲಾಗಿದೆ,'' ಎಂದರು.

''ಶಾಲಾ ಶಿಕ್ಷಣ ವ್ಯವಸ್ಥೆಯನ್ನು 3 ವರ್ಷದಿಂದ 18 ವರ್ಷಗಳ ವರೆಗೆ ನಿಗದಿ ಮಾಡಲಾಗಿದೆ. ಮಕ್ಕಳ ಬುದ್ಧಿಶಕ್ತಿ ಮೂರು ವರ್ಷದಿಂದ ಬೆಳವಣಿಗೆಯಾಗಲಿದ್ದು, ಯಾವುದೇ ವಿಷಯವನ್ನು ಗ್ರಹಿಸುವ ಮನೋಬಲ ಹೊಂದಿರುವರು. ಹಾಗಾಗಿ, ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುವ ವೇಳೆಗೆ ಭಾಷೆ, ಇತಿಹಾಸ, ವಿಜ್ಞಾನ ಗಣಿತ ಸೇರಿದಂತೆ ಎಲ್ಲಾ ವಿಷಯಗಳನ್ನು ಕರಗತ ಮಾಡಿಕೊಳ್ಳಲು ಅನುಕೂಲವಾಗಲಿದೆ. ಮುಂದಿನ 20 ವರ್ಷಗಳಲ್ಲಿ ದೇಶಾದ್ಯಂತ ಸುಮಾರು 100ರಿಂದ 200ಕ್ಕೂ ಅತ್ಯುತ್ತಮ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ,'' ಎಂದು ವಿವರಿಸಿದರು.

''ಉದ್ಯೋಗ ಮಾರುಕಟ್ಟೆಗೆ ಮಾನವ ಸಂಪನ್ಮೂಲ ಒದಗಿಸುವುದು ಹೊಸ ಶಿಕ್ಷಣ ನೀತಿಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಪದವಿ ಹಂತದಲ್ಲೇ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ಇರುವ 2 ವರ್ಷದ ಬಿ.ಇಡಿ ಕೋರ್ಸ್‌ ಕಲಿಕೆಯನ್ನು 2030ರ ನಂತರ ನಾಲ್ಕು ವರ್ಷಗಳಿಗೆ ಹೆಚ್ಚಳ ಮಾಡಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ, ರಾಷ್ಟ್ರೀಯ ಸಂಶೋಧನಾ ನಿಧಿ ಆರಂಭ, ಖಾಸಗಿ ಸೇರಿದಂತೆ ಎಲ್ಲಾ ವಿವಿಗಳಲ್ಲಿನ ಸಂಶೋಧನೆಗಳಿಗೆ ನೆರವು, ನಕಲಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ,'' ಎಂದು ನುಡಿದರು.

ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ, ಪಿಇಎಸ್‌ ವಿವಿ ಸಹ ಕುಲಾಧಿಪತಿ ಪ್ರೊ.ಡಿ.ಜವಾಹರ್‌, ಕುಲಪತಿ ಕೆ.ಎನ್‌.ಬಿ.ಮೂರ್ತಿ, ಸಿಇಒ ಅಜೋಯ್‌ಕುಮಾರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ