ಆ್ಯಪ್ನಗರ

ಕಾವೇರಿ ಸಮಸ್ಯೆ ಇತ್ಯರ್ಥಕ್ಕೆ, ರೈತರ ಚಪ್ಪಲಿಯಾಗಲು ಸಿದ್ಧ

ಕಾವೇರಿ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಸೇತುವೆಯಾಗಲು, ರೈತರ ಚಪ್ಪಲಿಯಾಗಲು ಸಿದ್ಧ ಎಂದು ಚಿತ್ರನಟ ಹಾಗೂ ತಮಿಳು ಮಕ್ಕಳ್‌ ನೀಧಿ ಮೈಯಂ ಪಕ್ಷದ ಸಂಸ್ಥಾಪಕ ಕಮಲ್‌ ಹಾಸನ್‌ ಹೇಳಿದ್ದಾರೆ...

Vijaya Karnataka 5 Jun 2018, 5:00 am
ಬೆಂಗಳೂರು : ಕಾವೇರಿ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಸೇತುವೆಯಾಗಲು, ರೈತರ ಚಪ್ಪಲಿಯಾಗಲು ಸಿದ್ಧ ಎಂದು ಚಿತ್ರನಟ ಹಾಗೂ ತಮಿಳು ಮಕ್ಕಳ್‌ ನೀಧಿ ಮೈಯಂ ಪಕ್ಷದ ಸಂಸ್ಥಾಪಕ ಕಮಲ್‌ ಹಾಸನ್‌ ಹೇಳಿದ್ದಾರೆ.
Vijaya Karnataka Web 0406-2-2-39


ನಿರ್ವಹಣಾ ಮಂಡಳಿ ರಚನೆ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಲ್‌ ಹಾಸನ್‌, ''ನಾವು ಹುಟ್ಟುವುದಕ್ಕೆ ಮೊದಲೇ ಕಾವೇರಿ ಇತ್ತು. ಆದರೆ ನಾವೀಗ ಕಾವೇರಿಗಾಗಿ ಬಡಿದಾಡಿಕೊಳ್ಳುತ್ತಿದ್ದೇವೆ. ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಉಭಯ ರಾಜ್ಯಗಳ ಮಧ್ಯೆ ಸೇತುವೆಯಾಗಲು, ಅಳಿಲಾಗಲು, ರೈತರ ಚಪ್ಪಲಿಯಾಗಲು ಸಿದ್ಧ್ದ,'' ಎಂದು ಹೇಳಿದರು.

''ಈ ಸಭೆ ಅತ್ಯಂತ ಹೃದಯಸ್ಪರ್ಶಿಯಾಗಿತ್ತು. ವಿವಾದವನ್ನು ಸೌಹಾರ್ದವಾಗಿ ಬಗೆಹರಿಸುವ ವಿಶ್ವಾಸವಿದೆ,''ಎಂದರು ಹೇಳಿದರು.

ನ್ಯಾಯಾಲಯದ ಹೊರಗೆ ವಿವಾದ ಬಗೆಹರಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಿಲ್ಲ. ''ನಾವೀಗ ನೀರು ಹಂಚಿಕೊಳ್ಳುತ್ತಿದ್ದೇವೆ. ಅದನ್ನು ಬಿಟ್ಟು ಎರಡನೇಯ ಮಾರ್ಗವಿಲ್ಲ,'' ಎಂದು ಹೇಳಿದರು.

ಕಾಲಾ ಚಿತ್ರದ ಬಗ್ಗೆ ಚರ್ಚೆಯಾಗಿಲ್ಲ :

''ಸಭೆಯಲ್ಲಿ ಕಾಲಾ ಚಿತ್ರದ ಬಿಡುಗಡೆ ವಿವಾದದ ಬಗ್ಗೆ ಚರ್ಚೆಯಾಗಿಲ್ಲ. ಅದರ ಬಗ್ಗೆ ಚರ್ಚಿಸಲು, ನಿರ್ಣಯ ತೆಗೆದುಕೊಳ್ಳಲು ಚಲನಚಿತ್ರ ಮಂಡಳಿಗಳಿವೆ. ಸಿನಿಮಾಕ್ಕಿಂತಲೂ ಮಿಗಿಲಾದ ವಿಚಾರಗಳ ಬಗ್ಗೆ ಚರ್ಚಿಸುವುದಕ್ಕಾಗಿ ನಾನು ಬಂದಿದ್ದೇನೆ. ನಾನಿಲ್ಲಿಗೆ ರಾಜಕಾರಣಿಯಾಗಿ ಬಂದಿಲ್ಲ. ಪ್ರಜೆಗಳ ಸೇವಕನಾಗಿ ಬಂದಿದ್ದೇನೆ. ಎರಡು ರಾಜ್ಯಗಳ ನಡುವೆ ಸೋದರತ್ವ ಸ್ಥಾಪನೆಗಾಗಿ ಎಲ್ಲರೂ ದುಡಿಯಬೇಕಿದೆ,'' ಎಂದು ಅಭಿಪ್ರಾಯಪಟ್ಟರು.

ನಾನೂ ಮಾತುಕತೆಗೆ ಸಿದ್ಧ: ಎಚ್ಡಿಕೆ

ಬಳಿಕ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ''ಕಾವೇರಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದೇ ನನ್ನ ಆದ್ಯತೆ. ಮಾತುಕತೆ ಸಂದರ್ಭದಲ್ಲಿ ಇದೇ ಚರ್ಚೆಯಾಗಿದೆ. ಈ ವಿಚಾರದಲ್ಲಿ ಸಂಘರ್ಷ ಬೇಡ ಎಂಬುದು ಕಮಲ್‌ ಹಾಸನ್‌ ಅವರ ನಿಲುವೂ ಆಗಿದೆ. ಎರಡು ರಾಜ್ಯದ ರೈತರ ಹಿತ ಮುಖ್ಯ. ಈ ವಿಚಾರದಲ್ಲಿ ತಮಿಳುನಾಡು ಸರಕಾರ ಬಯಸಿದರೆ ಮಾತುಕತೆಗೆ ಸಿದ್ಧ,'' ಎಂದು ಹೇಳಿದರು.

''ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ ಆದೇಶಾನುಸಾರ ಕೇಂದ್ರ ಸರಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿದೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರ ಮಾತುಕತೆಗೆ ಸಿದ್ಧವಿದೆ. ಕಾವೇರಿ ವಿಚಾರದಲ್ಲಿ ಎರಡು ರಾಜ್ಯದ ಬಾಂಧವ್ಯಕ್ಕೆ ಧಕ್ಕೆಯಾಗಬಾರದು ಎಂದು ನನ್ನ ಬಳಿ ಹೇಳಿದ್ದಾರೆ. ನಾವಿಬ್ಬರು ಸೇರಿ ಹೊಸ ಚಿತ್ರ ನಿರ್ಮಿಸುವ ಉದ್ದೇಶವಿಲ್ಲ. ಆದರೆ ಅವರು ಹೊಸ ರಾಜಕೀಯ ಪಕ್ಷ ಆರಂಭಿಸಿರುವುದರಿಂದ ಹೊಸ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ,'' ಎಂದು ಹೇಳಿದರು.

ಇದ್ದಾಗ ಮಾತ್ರ ನೀರು

ಕಾವೇರಿ ವಿಚಾರದಲ್ಲಿ ಸೌಹಾರ್ದಯುತ ವಾತಾವರಣ ಅಗತ್ಯ ಎಂದು ಸರಕಾರ ಪ್ರತಿಪಾದಿಸಿದ್ದರೂ ರಾಜ್ಯದ ಹಿತ ಕಾಪಾಡುವುದಕ್ಕೆ ಬದ್ಧವಾಗಿರಲು ನಿರ್ಧರಿಸಿದೆ.
ನಮ್ಮಲ್ಲೇ ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧೋರಣೆಯನ್ನು ನೀರಿದ್ದಾಗ ಬಿಡಲು ಅಡ್ಡಿಯಿಲ್ಲ ಎಂಬಂತೆ ಧ್ವನಿ ಬದಲಿಸಿಕೊಳ್ಳಲು ಸರಕಾರ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ