ಆ್ಯಪ್ನಗರ

ಕೊಡಗಿನ ಬೋಪಯ್ಯ ಸ್ಪೀಕರ್‌ ?

ಸ್ಪೀಕರ್‌ ಸ್ಥಾನಕ್ಕೆ ಕೆ.ಆರ್‌.ರಮೇಶ್‌ ಕುಮಾರ್‌ ರಾಜೀನಾಮೆ ಹಿನ್ನೆಲೆಯಲ್ಲಿ ವಿಧಾನಸಭೆಯ ಮುಂದಿನ ಅಧ್ಯಕ್ಷರಾಗಿ ಕೆ.ಜಿ.ಬೋಪಯ್ಯ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

Vijaya Karnataka 30 Jul 2019, 5:00 am
ಬೆಂಗಳೂರು: ಸ್ಪೀಕರ್‌ ಸ್ಥಾನಕ್ಕೆ ಕೆ.ಆರ್‌.ರಮೇಶ್‌ ಕುಮಾರ್‌ ರಾಜೀನಾಮೆ ಹಿನ್ನೆಲೆಯಲ್ಲಿ ವಿಧಾನಸಭೆಯ ಮುಂದಿನ ಅಧ್ಯಕ್ಷರಾಗಿ ಕೆ.ಜಿ.ಬೋಪಯ್ಯ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
Vijaya Karnataka Web BOPAIAH K G- bjp- virajpete


ರಮೇಶ್‌ ಕುಮಾರ್‌ ನಿರ್ಗಮನದ ಬೆನ್ನಿಗೇ ನೂತನ ಸ್ಪೀಕರ್‌ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ಆಡಳಿತ ಪಕ್ಷ ಬಿಜೆಪಿ ತನ್ನ ಕಡೆಯಿಂದ ಬೋಪಯ್ಯ ಅವರನ್ನು ಸ್ಪೀಕರ್‌ ಹುದ್ದೆಗೆ ಸೂಚಿಸುವ ನಿರ್ಧಾರ ಕೈಗೊಂಡಿದೆ.

ಬುಧವಾರ ಬೆಳಗ್ಗೆ 11 ಗಂಟೆಗೆ ಹೊಸ ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಸಂಬಂಧ ಮಂಗಳವಾರ ಮಧ್ಯಾಹ್ನ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಿದೆ. ಬಿಜೆಪಿಯಿಂದ ಬೋಪಯ್ಯ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ವಿಧಾನಸಭೆ ಸಂಖ್ಯಾಬಲದ ಆಧಾರದಲ್ಲಿ ಬೋಪಯ್ಯ ಆಯ್ಕೆ ನಿಶ್ಚಿತ.

ಬೋಪಯ್ಯ ಈ ಹಿಂದೆಯೂ ಬಿಜೆಪಿ ಸರಕಾರದ ಅವಧಿಯಲ್ಲಿ ವಿಧಾನಸಭೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಜಗದೀಶ್‌ ಶೆಟ್ಟರ್‌ ಬಳಿಕ ಸ್ಪೀಕರ್‌ ಹುದ್ದೆ ವಹಿಸಿಕೊಂಡಿದ್ದ ಬೋಪಯ್ಯ, ಏಕಪಕ್ಷೀಯವಾಗಿ ಅಂದಿನ ಆಡಳಿತ ಪಕ್ಷದ 19 ಶಾಸಕರನ್ನು ಅನರ್ಹಗೊಳಿಸಿದ್ದರು. 15ನೇ ವಿಧಾನಸಭೆ ಅಸ್ತಿತ್ವಕ್ಕೆ ಬಂದಾಗಲೂ ಹಂಗಾಮಿ ಸ್ಪೀಕರ್‌ ಆಗಿ ಬೋಪಯ್ಯ ಕಾರ್ಯ ನಿರ್ವಹಿಸಿದ್ದರು.

ಸ್ಪೀಕರ್‌ ಚುನಾವಣೆ ಸಂಬಂಧ ಡೆಪ್ಯೂಟಿ ಸ್ಪೀಕರ್‌ ಕೃಷ್ಣಾರೆಡ್ಡಿ ವಿಧಾನಸಭೆಯಲ್ಲಿ ಪ್ರಕಟಿಸಿದರು. ಡೆಪ್ಯೂಟಿ ಸ್ಪೀಕರ್‌ ಅವರೇ ಈ ಚುನಾವಣೆ ನಡೆಸಿಕೊಡಲಿದ್ದಾರೆ. ನಂತರ ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ಬಳಿಕ ನೂತನ ಡೆಪ್ಯೂಟಿ ಸ್ಪೀಕರ್‌ ಆಯ್ಕೆ ಪ್ರಕ್ರಿಯೆಯಾಗಲಿದೆ.

ದೋಸ್ತಿ ಸ್ಪರ್ಧೆ ಅನುಮಾನ

ಸ್ಪೀಕರ್‌ ಚುನಾವಣೆಗೆ ದೋಸ್ತಿ ಪಕ್ಷಗಳಿಂದ ಜಂಟಿ ಅಭ್ಯರ್ಥಿ ನಿಲ್ಲುಸುವುದು ಅನುಮಾನ. ಈ ಸಂಬಂಧ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಯಾವುದೇ ಚರ್ಚೆ ನಡೆದಿಲ್ಲವೆಂದು ಗೊತ್ತಾಗಿದೆ. ದೋಸ್ತಿ ಪಕ್ಷಗಳ ಅಭ್ಯರ್ಥಿ ನಾಮಪತ್ರ ಸಲ್ಲಿಸದಿದ್ದರೆ ಬೋಪಯ್ಯ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ಒಲ್ಲೆ ಎಂದ ಮಹಾಶಯರು !

ಪ್ರಾರಂಭದಲ್ಲಿ ಸ್ಪೀಕರ್‌ ಹುದ್ದೆಗೆ ಬೋಪಯ್ಯ ಹೆಸರು ಇರಲಿಲ್ಲ. ಈ ಬಾರಿ ಅವರಿಗೆ ಸಚಿವ ಸ್ಥಾನ ನೀಡಲು ಪಕ್ಷದ ನಾಯಕತ್ವವೂ ಒಲವು ತೋರಿತ್ತು. ಜಗದೀಶ ಶೆಟ್ಟರ್‌, ಸುರೇಶ್‌ ಕುಮಾರ್‌, ವಿಶ್ವೇಶ್ವರ ಹೆಗಡೆ ಕಾಗೇರಿ ಪೈಕಿ ಒಬ್ಬರನ್ನು ಈ ಹುದ್ದೆಗೆ ಪರಿಗಣಿಸಲು ಪಕ್ಷದ ವಲಯದಲ್ಲಿ ಚರ್ಚೆಯಾಗಿತ್ತು. ಆದರೆ, ಈ ಬಾರಿ ಕಲಾಪ ನಡೆಸಲು ಸೌಮ್ಯ ಸ್ವಭಾವದವರ ಬದಲು ಸ್ವಲ್ಪ ಖಡಕ್‌ ಆದ ಹಾಗೂ ಕಾನೂನಿನ ಬಗ್ಗೆ ಹೆಚ್ಚು ತಿಳಿವಳಿಕೆ ಉಳ್ಳವರೇ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಹಾಗಾಗಿ ಶೆಟ್ಟರ್‌ ಜತೆಗೆ ಬೋಪಯ್ಯ ಹೆಸರು ಸೇರಿಕೊಂಡಿತು. ಸಚಿವ ಸಂಪುಟ ಸೇರ್ಪಡೆಗೆ ಆಸಕ್ತಿ ತೋರಿದ ಶೆಟ್ಟರ್‌ ಸ್ಪೀಕರ್‌ ಹುದ್ದೆಯನ್ನು ನಿರಾಕರಿಸಿದರು. ಅಂತಿಮವಾಗಿ ಬೋಪಯ್ಯ ಈ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪುವುದು ಅನಿವಾರ್ಯವಾಯಿತು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ