ಆ್ಯಪ್ನಗರ

‘ಖಾದಿಯ ಕರೆ, ಭಾರತದ ಧ್ವನಿ ’

'ಖಾದಿಯ ಕರೆ, ಭಾರತದ ಧ್ವನಿ ' ಎಂಬ ಘೋಷ ವಾಕ್ಯದೊಂದಿಗೆ ಜನವರಿ 2ರಿಂದ ಜನವರಿ 31ರ ವರೆಗೆ ...

Vijaya Karnataka Web 30 Dec 2018, 5:00 am
ಬೆಂಗಳೂರು: 'ಖಾದಿಯ ಕರೆ, ಭಾರತದ ಧ್ವನಿ ' ಎಂಬ ಘೋಷ ವಾಕ್ಯದೊಂದಿಗೆ ಜನವರಿ 2ರಿಂದ ಜನವರಿ 31ರ ವರೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಖಾದಿ ಉತ್ಸವ ಆಯೋಜಿಸಲಾಗಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದ್ದಾರೆ.
Vijaya Karnataka Web Gubbi JDS - SR Srinivas


''ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉತ್ಸವ ಉದ್ಘಾಟಿಸುವರು. ಸ್ವಾತಂತ್ರ್ಯಯೋಧ ನಾಡೋಜ ಡಾ.ಪಾಟೀಲ್‌ ಪುಟ್ಟಪ್ಪ, ಎಚ್‌.ಎಸ್‌.ದೊರೆಸ್ವಾಮಿಯವರನ್ನು ಸನ್ಮಾನಿಸಲಾಗುವುದು. ನಿಫ್ಟ್‌ ಸಂಸ್ಥೆ ಯಿಂದ ಖಾದಿ ಬ್ರಾಂಡಿಂಗ್‌ ಹಾಗೂ ಇತರೆ ಗುಡಿ ಕೈಗಾರಿಕೆಗಳ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ,'' ಎಂದು ಹೇಳಿದರು.

''ಈ ಉತ್ಸವದಲ್ಲಿ ಸುಮಾರು 1.50 ಲಕ್ಷ ಸಾರ್ವಜನಿಕರು ಭೇಟಿ ನೀಡುವ ಸಾಧ್ಯತೆ ಇದೆ. 50 ಕೋಟಿ ರೂ. ಮೌಲ್ಯದ ವಸ್ತುಗಳು ಮಾರಾಟವಾಗುವ ನಿರೀಕ್ಷೆ ಇದೆ. ರಾಜ್ಯ ಹಾಗೂ ಹೊರ ರಾಜ್ಯದ ಒಟ್ಟು 225 ಖಾದಿ ಮತ್ತು ಗ್ರಾಮೋದ್ಯೋಗ ಮಳಿಗೆಗಳು ಭಾಗವಹಿಸುತ್ತವೆ,''ಎಂದು ಹೇಳಿದರು.

''ಸಣ್ಣ ಕೈಗಾರಿಕೆ ಇಲಾಖೆ ವಿತರಿಸಿರುವ ಕೈಗಾರಿಕಾ ನಿವೇಶನಗಳನ್ನು ಬೇರೆಯವರಿಗೆ ಲೀಸ್‌ ನೀಡಲಾಗಿದೆ ಎಂಬ ಆರೋಪ ಪರಿಶೀಲನೆ ನಡೆಯುತ್ತಿದೆ. ಸುಮಾರು 4000 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಇನ್ನೂ ಸೇಲ್‌ಡೀಡ್‌ ನೀಡಿಲ್ಲ. ಅಕ್ರಮ ನಡೆದರೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು,'' ಎಂದು ಎಚ್ಚರಿಕೆ ನೀಡಿದರು.

40 ಲಕ್ಷ ಟನ್‌ ಮರಳು ಕೊರತೆ
''ರಾಜ್ಯದಲ್ಲಿ 30ರಿಂದ 40 ಲಕ್ಷ ಟನ್‌ ಮರಳು ಕೊರತೆ ಇದ್ದು, ಬೇಡಿಕೆ ಹಾಗೂ ಪೂರೈಕೆ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು,'' ಎಂದು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಮರಳು ಮಾಫಿಯಾ ತಡೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಕ್ರಮವಾಗಿ ಸಾಗಾಟ ಮಾಡುವ ಲಾರಿಯ ದುಪ್ಪಟ್ಟು ದಂಡ ವಿಧಿಸಲಾಗುತ್ತಿದೆ. ಇದುವರೆಗೆ 100 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ,'' ಎಂದು ಹೇಳಿದರು.

''ಎಂಎಸ್‌ಐಎಲ್‌ ಮೂಲಕ ಈ ಹಿಂದೆ ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು. ಈ ಪೈಕಿ ಆಂಧ್ರದ ಕೃಷ್ಣಪಟ್ಟಣಂನಲ್ಲಿ 1.5 ಲಕ್ಷ ಹಾಗೂ ಮಂಗಳೂರು ಬಂದರಿನಲ್ಲಿ 1.5 ಲಕ್ಷ ಟನ್‌ ಮರಳು ಹಾಗೆ ಉಳಿದಿದೆ,'' ಎಂದು ಸ್ಪಷ್ಟಪಡಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ