ಆ್ಯಪ್ನಗರ

ಕೆಎಂಎಫ್‌ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಿಕೆ: ರೇವಣ್ಣ ಉತ್ಸಾಹಕ್ಕೆ ತಣ್ಣೀರು ಸುರಿದ ಸರಕಾರ

ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್‌) ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ರಾಜ್ಯ ಸರಕಾರ ಕೊನೇ ಕ್ಷಣದಲ್ಲಿ ಮುಂದೂಡಿದ್ದು, ಈ ...

Vijaya Karnataka 30 Jul 2019, 5:00 am
ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್‌) ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ರಾಜ್ಯ ಸರಕಾರ ಕೊನೇ ಕ್ಷಣದಲ್ಲಿ ಮುಂದೂಡಿದ್ದು, ಈ ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷಗಾದಿ ಏರುವ ಉತ್ಸಾಹದಲ್ಲಿದ್ದ ಮಾಜಿ ಸಚಿವ ಎಚ್‌.ಡಿ.ರೇವಣ್ಣಗೆ ನಿರಾಶೆಯಾಗಿದೆ.
Vijaya Karnataka Web H D Revanna (JDS) HNP


ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ರೇವಣ್ಣ ಹಾಗೂ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಭೀಮಾ ನಾಯ್ಕ್‌ ಆಕಾಂಕ್ಷಿಗಳಾಗಿದ್ದರು. ಅಧಿಕಾರ ಗಿಟ್ಟಿಸಲು ರೇವಣ್ಣ ಅವರು ಕಾಂಗ್ರೆಸ್‌ನ ನಾಲ್ವರು ನಿರ್ದೇಶಕರನ್ನು ಹೈಜಾಕ್‌ ಮಾಡಿ ರೆಸಾರ್ಟ್‌ ವಾಸ್ತವ್ಯಕ್ಕೆ ಶಿಫ್ಟ್‌ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಬೆಳವಣಿಗೆ ನಡುವೆಯೇ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಸೂಚನೆಯಂತೆ ಚುನಾವಣೆಯನ್ನು ಮುಂದೂಡಲಾಗಿದ್ದು, ಶೀಘ್ರ ಹೊಸ ದಿನಾಂಕ ಪ್ರಕಟಿಸುವುದಾಗಿ ಸರಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಇದರೊಂದಿಗೆ, ಕೆಎಂಎಫ್‌ ಅಧ್ಯಕ್ಷಗಾದಿಗಾಗಿ ಕಾಂಗ್ರೆಸ್‌ - ಜೆಡಿಎಸ್‌ 'ದೋಸ್ತಿ'ಗಳ ಮಧ್ಯೆ ನಡೆದಿದ್ದ ಹಣಾಹಣಿ ಸದ್ಯಕ್ಕೆ ಮುಂದೂಡಿಕೆಯಾಗಿದೆ.

ಕೆಎಂಎಫ್‌ನಲ್ಲಿ 5 ಕಾಂಗ್ರೆಸ್‌ ಬೆಂಬಲಿತ, ಮೂವರು ಜೆಡಿಎಸ್‌ ಬೆಂಬಲಿತ ಹಾಗೂ ಎರಡೂ ಪಕ್ಷಗಳ ಮೈತ್ರಿಕೂಟ ಬೆಂಬಲಿತ 3, ಬಿಜೆಪಿಯ ಒಬ್ಬರು ಹಾಗೂ ನಾಲ್ವರು ನಾಮನಿರ್ದೇಶಿತ ನಿರ್ದೇಶಕರಿದ್ದರು. ಕೆಲವು ಕಾಂಗ್ರೆಸ್‌ ನಿರ್ದೇಶಕರ ಬೆಂಬಲದೊಂದಿಗೆ ಕೆಎಂಎಫ್‌ ಅಧ್ಯಕ್ಷ ಸ್ಥಾನ ಗಿಟ್ಟಿಸಲು ರೇವಣ್ಣ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.

ಸಿಎಂ ಭೇಟಿ ಮಾಡಿದ ನಾಯ್ಕ್‌

ಕೆಎಂಎಫ್‌ ಚುನಾವಣೆ ಮುಂದೂಡಿಕೆಯಾದ ಬೆನ್ನಲ್ಲೇ, ಕಾಂಗ್ರೆಸ್‌ ಶಾಸಕ ಭೀಮಾ ನಾಯ್ಕ್‌ ಸೋಮವಾರ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಮೈತ್ರಿ ಸರಕಾರದಲ್ಲಿ ತಮಗೆ ನೀಡಿದ್ದ ಭರವಸೆಯಂತೆ ಕೆಎಂಎಫ್‌ ಅಧ್ಯಕ್ಷ ಸ್ಥಾನ ತಮಗೆ ಸಿಗಬೇಕಿದ್ದು, ತಮ್ಮ ಅವಕಾಶವನ್ನು ರೇವಣ್ಣ ಕಸಿದುಕೊಳ್ಳಲು ಮುಂದಾಗಿದ್ದಾರೆ ಎಂದು ಭೀಮಾ ನಾಯ್ಕ್‌ ಅವರು ಸಿಎಂ ಬಳಿ ದೂರು ಹೇಳಿಕೊಂಡರು ಎನ್ನಲಾಗಿದೆ.

ಸಿಎಂ ಸೂಚನೆಯಂತೆ ಚುನಾವಣೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಸೋಮವಾರ ಎಚ್‌.ಡಿ.ರೇವಣ್ಣ ಅವರು ಪತ್ರಿಕಾಗೋಷ್ಠಿ ನಡೆಸಿದ್ದು ''ತಾವು ಯಾವ ನಿರ್ದೇಶಕರನ್ನೂ ಹೈಜಾಕ್‌ ಮಾಡಿಲ್ಲ. ನಿರ್ದೇಶಕರಿಗೆ ಯಾರು ಬೇಕೋ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುತ್ತಾರೆ. ಭೀಮಾ ನಾಯ್ಕ್‌ಗೆ ಅಧ್ಯಕ್ಷ ಸ್ಥಾನದ ಭರವಸೆಯನ್ನು ಎಚ್‌.ಡಿ.ಕುಮಾರಸ್ವಾಮಿ ನೀಡಿಲ್ಲ. ಇಂತಹ ಭರವಸೆ ನೀಡಲು ಕುಮಾರಸ್ವಾಮಿ ಅವರಿಗೂ ಕೆಎಂಎಫ್‌ಗೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ