ಆ್ಯಪ್ನಗರ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಕ್ಕಲಿಗರಿಗೋ, ಲಿಂಗಾಯತರಿಗೋ? ಸಿಡಬ್ಲ್ಯೂಸಿ ಸಭೆಯತ್ತ ಎಲ್ಲರ ಚಿತ್ತ

ಸಿಡಬ್ಲ್ಯೂಸಿ ಸಭೆಯಲ್ಲಿ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಎಚ್‌ ಮುನಿಯಪ್ಪ ಅವರು ಪಾಲ್ಗೊಳ್ಳುತ್ತಿದ್ದು, ಅನಾರೋಗ್ಯದ ಕಾರಣಕ್ಕೆ ಆಸ್ಕರ್‌ ಫರ್ನಾಂಡೀಸ್‌ ಭಾಗಹಿಸುವ ಸಾಧ್ಯತೆ ಇಲ್ಲ.

Vijaya Karnataka 10 Jan 2020, 9:03 pm

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ದಕ್ಷಿಣದ ಒಕ್ಕಲಿಗರಿಗೋ ಅಥವಾ ಉತ್ತರದ ಲಿಂಗಾಯತರಿಗೋ ಇಲ್ಲವೆ, ಎರಡೂ ಆಯ್ಕೆಗೆ ಹೊರತಾದ ಲೆಕ್ಕಾಚಾರ ಇದೆಯೇ ಎಂಬ ಗೊಂದಲದ ಮಧ್ಯೆಯೇ ದಿಲ್ಲಿಯಲ್ಲಿ ಶನಿವಾರ ನಡೆಯುತ್ತಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ಗಮನ ಸೆಳೆದಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಧ್ಯಕ್ಷತೆಯಲ್ಲಿ ಈ ಮಹತ್ವದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ಪುನಃಶ್ಚೇತನ ಕುರಿತಂತೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆಗಳಿವೆ.
Vijaya Karnataka Web Sonia Gandhi Rahul Gandhi


ಸಿಡಬ್ಲ್ಯೂಸಿ ಸಭೆಯಲ್ಲಿ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಎಚ್‌ ಮುನಿಯಪ್ಪ ಅವರು ಪಾಲ್ಗೊಳ್ಳುತ್ತಿದ್ದು, ಅನಾರೋಗ್ಯದ ಕಾರಣಕ್ಕೆ ಆಸ್ಕರ್‌ ಫರ್ನಾಂಡೀಸ್‌ ಭಾಗಹಿಸುವ ಸಾಧ್ಯತೆ ಇಲ್ಲ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‌ ಗುಂಡೂರಾವ್‌ ನೀಡಿರುವ ರಾಜೀನಾಮೆ ವಿಚಾರ ಸಭೆಯಲ್ಲಿ ಪ್ರಸ್ತಾಪವಾಗಲಿದೆ. ಹೊಸ ನಾಯಕತ್ವದೊಂದಿಗೆ ಪಕ್ಷ ಸಂಘಟನೆ ಕೆಲಸವನ್ನು ರಾಜ್ಯದಲ್ಲಿ ಚುರುಕುಗೊಳಿಸಲು ಬಹುದಿನಗಳ ನಿರೀಕ್ಷೆಯಂತೆ ಕೆಪಿಸಿಸಿಗೆ ಹೊಸ ಸಾರಥಿ ಆಯ್ಕೆ ವಿಚಾರ ಸಭೆಯಲ್ಲಿ ಚರ್ಚೆಗೆ ಬರುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಂಬಿ ಪಾಟೀಲ್‌ಗೆ ಕೆಪಿಸಿಸಿ ಪಟ್ಟ ? ಡಿಕೆಶಿ ‘ಕೈ’ ಬಿಡಲು ಕಾರಣವಿದು !

ಕಳೆದ ಲೋಕಸಭೆ ಚುನಾವಣೆ ಬಳಿಕ ಕೆಪಿಸಿಸಿ ವಿಸರ್ಜನೆಯಾಗಿದ್ದು, ವಿಧಾನಸಭೆ ಉಪಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರೂ ರಾಜೀನಾಮೆ ನೀಡಿದ್ದಾರೆ. ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹೊರತಾಗಿ ಪದಾಧಿಕಾರಿಗಳೇ ಇಲ್ಲ. ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಕೆಪಿಸಿಸಿ ಪುನಾರಚಿಸಲು ಉದ್ದೇಶಿಸಲಾಗಿದೆ. ಹೊಸ ಅಧ್ಯಕ್ಷರ ಆಯ್ಕೆ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ್‌ ಮಿಸ್ತ್ರಿ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ವರದಿ ಸಲ್ಲಿಸಿದ್ದಾರೆ. ಶನಿವಾರದ ಸಿಡಬ್ಲ್ಯೂಸಿ ಸಭೆ ಬಳಿಕ ವರಿಷ್ಠರು ನಿರ್ಧಾರ ಪ್ರಕಟಿಸುತ್ತಾರಾ ಅಥವಾ ರಾಜ್ಯದ ಆಯ್ದ ಹಿರಿಯ ನಾಯಕರನ್ನು ದಿಲ್ಲಿಗೆ ಕರೆಸಿಕೊಂಡು ಅಭಿಪ್ರಾಯ ಕೇಳಿ ತೀರ್ಮಾನ ಕೈಗೊಳ್ಳಲಿದ್ದಾರಾ? ಎಂಬುದು ಸ್ಪಷ್ಟವಾಗಿಲ್ಲ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜತೆಗೆ, ಜಾತಿ, ಪ್ರದೇಶದ ಲೆಕ್ಕಾಚಾರದಲ್ಲಿ ಕಾರ್ಯಾಧ್ಯಕ್ಷ ಹುದ್ದೆಗಳ ನೇಮಕವೂ ನಡೆಯುವ ನಿರೀಕ್ಷೆಯಿದೆ. ಬದಲಾದ ಲೆಕ್ಕಾಚಾರದಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಉತ್ತರ ಕರ್ನಾಟಕದ ಲಿಂಗಾಯತ ನಾಯಕರೊಬ್ಬರಿಗೆ ಅವಕಾಶ ಕಲ್ಪಿಸಬಹುದು. ಇಂತಹ ತೀರ್ಮಾನ ಕೈಗೊಂಡರೆ ಒಕ್ಕಲಿಗ ಸಮುದಾಯದ ಒಬ್ಬರು ಹಾಗೂ ಮುಸ್ಲಿಂ ನಾಯಕರೊಬ್ಬರನ್ನು ಕಾರ್ಯಾಧ್ಯಕ್ಷರಾಗಿ ನೇಮಕ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಪಕ್ಷದ ಮೂಲಗಳು ಹೇಳಿವೆ.

'ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಂಗಡಿಯಲ್ಲಿ ಸಿಗಲ್ಲ, ಕನಕಪುರದಲ್ಲಿ ಕಲ್ಲು ಹೊಡ್ಕೊಂಡು ಇರ್ತೀನಿ': ಡಿಕೆಶಿ ಕಾಮಿಡಿ..!

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮುದಾಯದಿಂದಲೂ ಬೇಡಿಕೆ ಇದೆ. ಎಐಸಿಸಿ ವರಿಷ್ಠರು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಕಳೆದ ತಿಂಗಳು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ್ದೆ. ಮತ್ತೆ ವರಿಷ್ಠರನ್ನು ಭೇಟಿ ಮಾಡುವ ಉದ್ದೇಶ ಸದ್ಯಕ್ಕಿಲ್ಲ.
ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ


ಎಂಬಿ ಪಾಟೀಲ್‌ ವಿಶ್ವಾಸ

"ವೀರೇಂದ್ರ ಪಾಟೀಲ್‌ ಅವರ ಬಳಿಕ ಸಮುದಾಯದ ನಾಯಕರಿಗೆ ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಭಿಪ್ರಾಯ ಲಿಂಗಾಯತರಲ್ಲಿದೆ. ಹೀಗಾಗಿ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಸಮುದಾಯವನ್ನು ಪರಿಗಣಿಸಬಹುದು ಎಂಬ ನಿರೀಕ್ಷೆ ಇದೆ. ಪಕ್ಷದ ಎಲ್ಲ ಹಿರಿಯ ನಾಯಕರ ಅಭಿಪ್ರಾಯ ಪಡೆದು ಎಐಸಿಸಿ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ," ಎಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾದ ಮಾಜಿ ಸಚಿವ ಎಂಬಿ ಪಾಟೀಲ್‌ ಶನಿವಾರ ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ