ಆ್ಯಪ್ನಗರ

ಕೆಎಎಸ್‌ ಅಕ್ರಮ:140 ಅಧಿಕಾರಿಗಳಿಗೆ ನೋಟಿಸ್‌

ಹಿಂಬಡ್ತಿ-ಮುಂಬಡ್ತಿ ಪ್ರಕ್ರಿಯೆಗೆ ಚಾಲನೆ, ನ್ಯಾಯಾಂಗ ನಿಂದನೆ ತಪ್ಪಿಸಿಕೊಳ್ಳಲು ಯತ್ನ

Vijaya Karnataka 17 Mar 2019, 5:00 am
ಶ್ರೀಕಾಂತ್‌ ಹುಣಸವಾಡಿ ಬೆಂಗಳೂರು
Vijaya Karnataka Web BNG-1603-2-2-KPSC-BUILDING

1998,1999 ಹಾಗೂ 2004ನೇ ಸಾಲಿನ ಕೆಎಎಸ್‌ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ 'ತೂಗುಗತ್ತಿ'ಯಿಂದ ತಪ್ಪಿಸಿಕೊಳ್ಳುವ ಸಲುವಾಗಿ 140 ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗಿದೆ.

ಹೈಕೋರ್ಟ್‌ ತೀರ್ಪಿನಂತೆ ಹಿಂಬಡ್ತಿ ಮತ್ತು ಮುಂಬಡ್ತಿ ಪಡೆಯಲಿರುವ ಅಧಿಕಾರಿಗಳಿಗೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ನೋಟಿಸ್‌ ನೀಡಿದ್ದು, ಪರಿಷ್ಕೃತ ಹುದ್ದೆಗಳನ್ನು ಒಪ್ಪಿಕೊಳ್ಳುವ ಬಗ್ಗೆ ಲಿಖಿತ ಉತ್ತರ ನೀಡುವಂತೆ ಸೂಚನೆ ನೀಡಿದೆ. ಡಿಪಿಎಆರ್‌ನಿಂದ ಅಧಿಕಾರಿಗಳಿಗೆ ಬಂದಿರುವ ನೋಟಿಸ್‌ನ ಒಂದು ಪ್ರತಿ 'ವಿಕ' ಗೆ ಲಭ್ಯವಾಗಿದೆ. ಇದು ಸರಕಾರ ಹೈಕೋರ್ಟ್‌ ತೀರ್ಪು ಜಾರಿಗೆ ಕ್ರಮ ಆರಂಭಿಸಿದೆ ಎನ್ನುವುದನ್ನು ತೋರಿಸಿಕೊಳ್ಳುವ ಕ್ರಮ ಎಂದು ಹೇಳಲಾಗಿದೆ.

ಅಕ್ರಮ ನೇಮಕಕ್ಕೆ ಸಂಬಂಧ ರಾಜ್ಯ ಸರಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನೂ ಸಹ ಸುಪ್ರೀಂಕೋರ್ಟ್‌ ಕಳೆದ ಫೆ.27ರಂದು ವಜಾಗೊಳಿಸಿದೆ. ಹಾಗಾಗಿ ಹೈಕೋರ್ಟ್‌ನ ವಿಭಾಗೀಯ ಪೀಠ 2016ರ ಜೂ.6ರಂದು ನೀಡಿರುವ ಆದೇಶವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಇಲಾಖೆ ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ಪತ್ರಿಕೆಗೆ ಖಚಿತಪಡಿಸಿವೆ.

ಏ.5ಕ್ಕೆ ಸುಪ್ರೀಂ ವಿಚಾರಣೆ
ಆದರೆ ಸರಕಾರದ ಈ ನಡೆ ಅನುಮಾನಕ್ಕೆ ಕಾರಣವಾಗಿದೆ.ಸರಕಾರ ನಿಜಕ್ಕೂ ಹೈಕೋರ್ಟ್‌ ಆದೇಶ ಪಾಲನೆ ದೃಷ್ಟಿಯಿಂದ ಹಿಂಬಡ್ತಿ-ಮುಂಬಡ್ತಿ ಪ್ರಕ್ರಿಯೆಗೆ ಚಾಲನೆ ನೀಡಿದೆಯೋ ಅಥವಾ ಸುಮ್ಮನೆ, ನ್ಯಾಯಾಂಗ ನಿಂದನೆಯಿಂದ ಪಾರಾಗಲು ಈ ಕಸರತ್ತು ನಡೆಸುತ್ತಿದೆಯೋ ಎಂಬ ಶಂಕೆ ಇದೆ. ಏಕೆಂದರೆ ಏ.5ರಂದು ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಬರಲಿದೆ. ಆದ್ದರಿಂದ ಡಿಪಿಎಆರ್‌ ಕೈಗೊಂಡಿರುವ ಈ ಪ್ರಕ್ರಿಯೆ ಅಚ್ಚರಿ ಮೂಡಿಸಿದೆ.

ಸರಕಾರಕ್ಕೆ ನಿಜಕ್ಕೂ ಹೈಕೋರ್ಟ್‌ ಆದೇಶವನ್ನು ಪಾಲಿಸುವ ಉದ್ದೇಶವಿದ್ದರೆ, ಈಗಾಗಲೇ 2014ರಲ್ಲಿಯೇ ಹೈಕೋಟ್‌ ಆದೇಶದಂತೆ ಪರಿಷ್ಕೃತ ಪಟ್ಟಿ (ಯಾರಾರ‍ಯರಿಗೆ ಹಿಂಬಡ್ತಿ ಮತ್ತು ಮುಂಬಡ್ತಿ) ಪ್ರಕಟಿಸಿದ್ದರಿಂದ ಆ ಪ್ರಕಾರ ನೇರವಾಗಿ ನೀವು ಇಂತಹ ಹುದ್ದೆ ವಹಿಸಿಕೊಳ್ಳಿ ಎಂದು ಆದೇಶ ನೀಡಬಹುದಿತ್ತುಎನ್ನುತ್ತಾರೆ ಕೆಲವು ಅಭ್ಯರ್ಥಿಗಳು.

ಆದರೆ, ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳು ತಮ್ಮ ಅಭಿಪ್ರಾಯ ಆಲಿಸಿಲ್ಲ, ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ದೂರುವುದನ್ನು ತಪ್ಪಿಸಿಕೊಳ್ಳಲು ಈ ನೋಟಿಸ್‌ ನೀಡಿದೆ ಎನ್ನಲಾಗಿದೆ.

27 ಮಂದಿಗೆ ನೇಮಕ ಆದೇಶ

ಈ ಮಧ್ಯೆ, ಇಷ್ಟು ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ 27 ಮಂದಿಗೆ ಕೊನೆಗೂ ಉದ್ಯೋಗ ಭಾಗ್ಯ ಸಿಗುವ ಕ್ಷಣ ಹತ್ತಿರವಾಗಿದೆ.ಹೈಕೋರ್ಟ್‌ ಆದೇಶದಂತೆ ಪರಿಷ್ಕರಿಸಲಾಗಿರುವ ಪಟ್ಟಿ ಪ್ರಕಾರ 28 ಮಂದಿಗೆ ನೇಮಕ ಆದೇಶ ನೀಡಬೇಕು, ಆದರೆ ಒಬ್ಬ ಅಭ್ಯರ್ಥಿಗೆ 60ವರ್ಷ ಆಗಿರುವುದರಿಂದ ಉಳಿದ 27 ಮಂದಿಗೆ ನೇಮಕ ಆದೇಶ ನೀಡುವಂತೆ ಡಿಪಿಎಆರ್‌ ಅಯಾ ಇಲಾಖೆಗಳಿಗೆ ಸೂಚನೆ ನೀಡಿದೆ. ಪರಿಷ್ಕೃತ ಪಟ್ಟಿಯಂತೆ ಸಹಕಾರ ಇಲಾಖೆಗೆ 3, ಕೃಷಿ 3, ಕಂದಾಯ 3, ಕಾರ್ಮಿಕ 2 , ಆರ್ಥಿಕ 3, ನಗರಾಭಿವೃದ್ಧಿ 1, ಅಬಕಾರಿ 1 ಮತ್ತು ಅಕೌಟಿಂಗ ಮತ್ತು ಆಡಿಟ್‌ ಇಲಾಖೆ 11 ಮಂದಿ ಸೇರ್ಪಡೆಯಾಗಿ ಹೊಸದಾಗಿ ಹುದ್ದೆಗಳನ್ನು ವಹಿಸಿಕೊಳ್ಳಲಿದ್ದಾರೆ. ಅವರಿಗೆ 13 ವರ್ಷ ಸರಕಾರಿ ಉದ್ಯೋಗದಿಂದ ವಂಚಿತವಾಗಿದ್ದು, ಅದನ್ನು ಸರಕಾರ ಹೇಗೆ ತುಂಬಿ ಕೊಡುತ್ತದೆಯೋ ಕಾದು ನೋಡಬೇಕಿದೆ.

ನೋಟಿಸ್‌ನಲ್ಲಿ ಏನಿದೆ?
ಡಿಪಿಎಆರ್‌ನ ಪ್ರಧಾನ ಕಾರ‍್ಯದರ್ಶಿ ಸಹಿಯೊಂದಿಗೆ ನೀಡಿರುವ ನೋಟಿಸ್‌ ಒಕ್ಕಣೆಯಲ್ಲಿ, ತಾವು ಇಷ್ಟು ವರ್ಷಗಳ ಕಾಲ ಇಂತಹ ಇಲಾಖೆಯಲ್ಲಿ, ಇಂತಹ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದೀರಿ, ಇದೀಗ ಹೈಕೋರ್ಟ್‌ ಆದೇಶದಂತೆ ಪರಿಷ್ಕೃತ ಹುದ್ದೆ, ಅಂದರೆ ಇನ್ನು ಮುಂದೆ ಇಂತಹ ಇಲಾಖೆಯ ಇಂತಹ ಹುದ್ದೆಯಲ್ಲಿ ಕಾರ‍್ಯನಿರ್ವಹಿಸಬೇಕಾಗುತ್ತದೆ. ನೀವು ಅದೇ ಹಾಲಿ ಇರುವ ಹುದ್ದೆಯಲ್ಲಿ ಮುಂದುವರಿಯುತ್ತೀರೋ, ಇಲ್ಲವೇ ಪರಿಷ್ಕೃತ ಹುದ್ದೆ ಒಪ್ಪಿಕೊಳ್ಳುತ್ತೀರೋ ಎಂಬ ಬಗ್ಗೆ ಅಧೀನ ಕಾರ‍್ಯದರ್ಶಿಗೆ ಲಿಖಿತವಾಗಿ ಉತ್ತರ ನೀಡಿ ಎಂದು ಹೇಳಲಾಗಿದೆ.

ಕಳಂಕಿತರನ್ನೂ ಉಳಿಸಲೂ ಯತ್ನ..!
ಈ ಮಧ್ಯೆ, ಸರಕಾರವು ಹಿಂಬಡ್ತಿಗೆ ಒಳಗಾಗುವ ಭೀತಿಯಲ್ಲಿರುವ ಕಳಂಕಿತರೂ ಸೇರಿದಂತೆ 27 ಮಂದಿಯನ್ನು ರಕ್ಷಿಸಲು ಮುಂದಾಗಿದೆ. ಮಾನವೀಯತೆ ಕಾರಣ ನೀಡಿ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲು ಸೂಪರ್‌ ನ್ಯೂಮರರಿ ಹುದ್ದೆಗಳನ್ನು ಸೃಷ್ಟಿಸಲು ಕಾಯಿದೆ ತರಲು ಕರಡು ಸಿದ್ಧಪಡಿಸಲಾಗಿದೆ. ಆದರೆ, ಚುನಾವಣೆ ಬಂದಿರುವುದರಿಂದ ಸದ್ಯಕ್ಕೆ ಅದಕ್ಕೆ ಬ್ರೇಕ್‌ ಬಿದ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ