ಆ್ಯಪ್ನಗರ

ಕೆಆರ್‌ ಪೇಟೆಯಲ್ಲಿ ಬಿಜೆಪಿ ಗೆಲುವು, ಮಂಡ್ಯದಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಬಿಜೆಪಿ

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ತವರೂರು ಮಂಡ್ಯದಲ್ಲಿ ಬಿಜೆಪಿಗೆ ಇದು ಮೊದಲ ಗೆಲುವಾಗಿದ್ದು ಐತಿಹಾಸಿಕ ಸಾಧನೆ ಮೆರೆದಿದೆ.

Vijaya Karnataka Web 9 Dec 2019, 11:48 am
ಕೆಆರ್‌ ಪೇಟೆ (ಮಂಡ್ಯ): ಕೆಆರ್‌ ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಮಂಡ್ಯದಲ್ಲಿ ಮೊದಲ ಬಾರಿಗೆ ಖಾತೆ ತೆರೆದು ಬಿಜೆಪಿ ಐತಿಹಾಸಿಕ ಸಾಧನೆ ಮೆರೆದಿದೆ. ಮಂಡ್ಯ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ತವರೂರಾಗಿದ್ದು ಇಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಾಡಿದೆ.
Vijaya Karnataka Web KC Narayana Gowda


ಆರಂಭದಲ್ಲಿ ಇಲ್ಲಿ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಅಭ್ಯರ್ಥಿ ಕೆಸಿ ನಾರಾಯಣ ಗೌಡ ನಂತರ ಮುನ್ನಡೆ ಕಾಯ್ದುಕೊಳ್ಳಲು ಆರಂಭಿಸಿದ್ದರು. ಜಿದ್ದಾಜಿದ್ದಿನ ಹೋರಾಟದಲ್ಲಿ ಪ್ರತಿ ಸುತ್ತಿನಲ್ಲೂ ಅಲ್ಪ ಮತಗಳ ಮುನ್ನಡೆ ಪಡೆಯುತ್ತಾ, ತಮ್ಮ ಒಟ್ಟಾರೆ ಮುನ್ನಡೆಯನ್ನು ಹೆಚ್ಚಿಸುತ್ತಾ ಸಾಗಿದ ನಾರಾಯಣ ಗೌಡ ಜೆಡಿಎಸ್‌ನ ಬಿಎಲ್‌ ದೇವರಾಜ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಕೆಸಿ ನಾರಾಯಣಗೌಡ 66,095 ಮತಗಳನ್ನು ಪಡೆದುಕೊಂಡು ಜೆಡಿಎಸ್‌ನ ಬಿಎಲ್‌ ದೇವರಾಜ್‌ ವಿರುದ್ಧ 9,732 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಬಿಎಲ್‌ ದೇವರಾಜ್‌ 56,363 ಮತಗಳನ್ನು ಪಡೆದರೆ, ಕಾಂಗ್ರೆಸ್‌ ಅಭ್ಯರ್ಥಿ ಕೆಬಿ ಚಂದ್ರಶೇಖರ್‌ 41,665 ಮತಗಳನ್ನು ಪಡೆದು ಮೂರನೇ ಸ್ಥಾನ ಗಳಿಸಿದ್ದಾರೆ.

Karnataka Bypolls Result 2019: ಅಂಚೆ ಮತ ಎಣಿಕೆ ಆರಂಭ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ..

ಈ ಮೂಲಕ ಕೆಆರ್‌ ಪೇಟೆ ಕ್ಷೇತ್ರದಲ್ಲಿ ಕೆಸಿ ನಾರಾಯಣ ಗೌಡ ಹ್ಯಾಟ್ರಿಕ್‌ ಗೆಲುವು ಸಾಧಿಸಿದಂತಾಗಿದೆ. 2018ರಲ್ಲಿ ಇಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನಾರಾಯಣ ಗೌಡ 88,016 ಮತಗಳನ್ನು ಪಡೆದು ಕಾಂಗ್ರೆಸ್‌ನ ಕೆಬಿ ಚಂದ್ರಶೇಖರ್‌ರನ್ನು 17,119 ಮತಗಳಿಂದ ಸೋಲಿಸಿದ್ದರು. ಈ ಚುನಾವಣೆಯಲ್ಲಿ ಚಂದ್ರಶೇಖರ್‌ 70,897 ಮತಗಳನ್ನು ಪಡೆದಿದ್ದರು. 2013ರಲ್ಲೂ ಚಂದ್ರಶೇಖರ್‌ರನ್ನು ನಾರಾಯಣಗೌಡ ಸೋಲಿಸಿದ್ದರು.


ಜೆಡಿಎಸ್‌ ಭದ್ರಕೋಟೆಯಾಗಿದ್ದ ಕೆಆರ್‌ ಪೇಟೆಯಲ್ಲಿ ಬಿಎಸ್‌ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಬಿಜೆಪಿ ಗೆಲುವಿನ ಹೊಣೆ ಹೊತ್ತಿದ್ದರು. ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ತಂದೆ ಯಡಿಯೂರಪ್ಪ ಅವರಿಗೆ ಸಿಹಿ ತಿನ್ನಿಸಿ ಅವರು ನಾರಾಯಣ ಗೌಡ ಗೆಲುವನ್ನು ಸಂಭ್ರಮಿಸಿದ್ದಾರೆ.

ಈ ಸಂದರ್ಭ ಪ್ರತಿಕ್ರಿಯಿಸಿದ ಅವರು, "ಫಲಿತಾಂಶದಿಂದ ನಿಜವಾಗಿಯೂ ನನಗೆ ಸಂತಸವಾಗಿದೆ. ಜನತೆ ಅಭಿವೃದ್ಧಿ ಪರ ಸರ್ಕಾರಕ್ಕೆ ಜನಾದೇಶ ಕೊಟ್ಟಿದ್ದಾರೆ. ಕೆ.ಆರ್.ಪೇಟೆ ಉಸ್ತುವಾರಿ ವಹಿಸಿದ್ದನ್ನು ನಾಯಕರ ಮತ್ತು ಮತದಾರರ ನೆರವಿನಿಂದ ಸಮರ್ಥವಾಗಿ ನಿಭಾಯಿಸಿದ್ದೇನೆ," ಎಂದಿದ್ದಾರೆ.

ಉಪಚುನಾವಣೆಯ ಎಲ್ಲಾ ಕ್ಷೇತ್ರಗಳ ಮತಎಣಿಕೆಯ ಅಪ್ಡೇಟ್‌ಗೆ ಇಲ್ಲಿ ಕ್ಲಿಕ್‌ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ