ನಗರದ ಎನ್ಇಎಸ್ ಮೈದಾನದಲ್ಲಿಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಬೃಹತ್ ಉದ್ಯೋಗ ಮೇಳದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ ಅವರು ಭಾಗವಹಿಸಿದ್ದರೂ ಕ್ಷೇತ್ರದ ಶಾಸಕರೂ ಆದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಭಾಗವಹಿಸದಿರುವುದು ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೀಡು ಮಾಡಿದೆ.
ಶಿವಮೊಗ್ಗದಲ್ಲಿ ನಡೆದ ಉದ್ಯೋಗ ಮೇಳ ಅಲ್ಲದೆ ಆನವಟ್ಟಿ ಮತ್ತು ಶಿಕಾರಿಪುರದಲ್ಲಿ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲೂ ಈಶ್ವರಪ್ಪ ಅವರು ಭಾಗವಹಿಸಿರಲಿಲ್ಲ. ಶಿಷ್ಟಾಚಾರದ ಪ್ರಕಾರ ಶಿವಮೊಗ್ಗ ಕ್ಷೇತ್ರದ ಶಾಸಕರಾದ ಈಶ್ವರಪ್ಪ ಅವರು ಉದ್ಯೋಗ ಮೇಳದ ಅಧ್ಯಕ್ಷತೆ ವಹಿಸಬೇಕಾಗಿತ್ತು. ಜಿಲ್ಲಾಉಸ್ತುವಾರಿ ಸಚಿವರಾಗಿ ಆನವಟ್ಟಿ ಮತ್ತು ಶಿಕಾರಿಪುರದಲ್ಲಿನಡೆದ ಸಿಎಂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಈ ಮೂರೂ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಎಲ್ಲಶಾಸಕರು ಪಾಲ್ಗೊಂಡಿದ್ದರು. ಅಲ್ಲದೆ ವಿವಿಧ ಇಲಾಖೆಗಳ ಸಚಿವರೂ ಪಾಲ್ಗೊಂಡಿದ್ದರು. ಹೀಗಾಗಿ ಈಶ್ವರಪ್ಪ ಅವರ ಗೈರು ಎದ್ದುಕಾಣುತ್ತಿತ್ತು.
ಇದೇ ಮೊದಲೇನಲ್ಲ
ಈಶ್ವರಪ್ಪ ಅವರು ಸಿಎಂ ಕಾರ್ಯಕ್ರಮಕ್ಕೆ ಗೈರು ಹಾಜರಾಗುತ್ತಿರುವುದು ಇದೇ ಮೊದಲೇನಲ್ಲ. ಸ್ಥಳೀಯ ಶಾಸಕರಾಗಿ, ಜಿಲ್ಲಾಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ನಡೆದ ಮುಖ್ಯಮಂತ್ರಿಗಳ ಯಾವುದೇ ಕಾರ್ಯಕ್ರಮದಲ್ಲಿ ಈಶ್ವರಪ್ಪ ಅವರು ಪಾಲ್ಗೊಂಡಿಲ್ಲ. ಕೇಂದ್ರ ಸ್ಥಾನದಲ್ಲಿ ಇಲ್ಲದಿದ್ದಾಗ ಸಮಾರಂಭಕ್ಕೆ ಬರದಿರುವುದು ಓಕೆ. ಆದರೆ, ಸಿಎಂ ಬಂದಾಗಲೆಲ್ಲ ಊರಲ್ಲೇ ಇದ್ದರೂ ಸಮಾರಂಭಗಳಿಗೆ ಬರುವುದಿಲ್ಲ. ಸಾಮಾನ್ಯವಾಗಿ ಯಾವುದೇ ಕ್ಷೇತ್ರಕ್ಕೆ ಸಿಎಂ ಬರುತ್ತಾರೆ ಎಂದರೆ ಸ್ಥಳೀಯ ಶಾಸಕರು ಅವರ ಸ್ವಾಗತಕ್ಕೆ ನಿಂತಿರುತ್ತಾರೆ. ಸ್ವಾಗತ ಕೋರದಿದ್ದರೂ ಸಮಾರಂಭಗಳಲ್ಲಂತೂ ಇದ್ದೇ ಇರುತ್ತಾರೆ. ಆದರೆ, ಹಲವಾರು ಕಾರ್ಯಕ್ರಮಗಳಲ್ಲಿ ಈಶ್ವರಪ್ಪ ಗೈರಾಗಿದ್ದಾರೆ.
ಸರಕಾರ ರಚನೆ ನಂತರ ಒಮ್ಮೆಯೂ ವೇದಿಕೆ ಹಂಚಿಕೊಂಡಿಲ್ಲ
ಈಶ್ವರಪ್ಪ ಅವರು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಜಿಲ್ಲೆಯಲ್ಲಿ ಯಡಿಯೂರಪ್ಪ ಅವರೊಂದಿಗೆ ಒಮ್ಮೆಯೂ ಕಾಣಿಸಿಕೊಂಡಿಲ್ಲ, ವೇದಿಕೆ ಹಂಚಿಕೊಂಡಿಲ್ಲ.
ಸರಕಾರ ಅಸ್ತಿತ್ವಕ್ಕೆ ಬಂದು ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿರುವಾಗ ಆಗಸ್ಟ್ ಮೊದಲ ವಾರದಲ್ಲಿ ಶಿವಮೊಗ್ಗಕ್ಕೆ ಬಂದ ಯಡಿಯೂರಪ್ಪ ಅವರು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಗೆ ದಿಢೀರನೆ ಆಗಮಿಸಿದ್ದರು. ಸಭೆಯಲ್ಲಿ ಈಶ್ವರಪ್ಪ ಅವರೂ ಪಾಲ್ಗೊಂಡಿದ್ದರು. ಇದೊಂದು ಸಂದರ್ಭ ಹೊರತುಪಡಿಸಿ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬೇರಾವುದೇ ಅಧಿಕೃತ ಸಮಾರಂಭದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿಲ್ಲ.
ಹಳೇ ಮನಸ್ತಾಪ ಇನ್ನೂ ಮಾಸಿಲ್ಲವೇ?
ಸಹಜವಾಗಿ ಇದು ಅವರಿಬ್ಬರ ನಡುವೆ ಹಳೇ ಮನಸ್ತಾಪ ಇನ್ನೂ ಹೋಗಿಲ್ಲ, ಬೇಗುದಿ ತಣ್ಣಗಾಗಿಲ್ಲ ಎನ್ನುವುದನ್ನು ತೋರಿಸುತ್ತದೆ. ಇಬ್ಬರ ನಡುವೆ ಏನೇ ಇದ್ದರೂ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಕೊಡುವುದಕ್ಕಾದರೂ ಈಶ್ವರಪ್ಪ ಅವರು ಸರಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ. ಈ ವಿಷಯದಲ್ಲಿ ಪಕ್ಷದ ವರಿಷ್ಠರು ಮತ್ತು ಆರ್ಎಸ್ಎಸ್ ಮುಖಂಡರೂ ಮೌನ ವಹಿಸಿರುವುದು ಅಚ್ಚರಿ ಮೂಡಿಸಿದೆ.
ಅನಾರೋಗ್ಯ ಕಾರಣವೇ?
ಮದ್ರಾಸ್ ಐ ಆಗಿರುವ ಕಾರಣ ಈಶ್ವರಪ್ಪ ಅವರು ಮೂರ್ನಾಲ್ಕು ದಿನಗಳಿಂದ ಹೊರಗೆಲ್ಲೂಹೋಗುತ್ತಿಲ್ಲ. ಇದೇ ಕಾರಣದಿಂದ ಉದ್ಯೋಗ ಮೇಳಕ್ಕೂ ಹೋಗಲಾಗಿಲ್ಲಎಂದು ಅವರ ಸಮೀಪವರ್ತಿಗಳು ಹೇಳುತ್ತಿದ್ದಾರೆ. ಈಗ ಅನಾರೋಗ್ಯದ ಕಾರಣ ಹೇಳಬಹುದು ಹಿಂದಿನ ಕಾರ್ಯಕ್ರಮಗಳಿಗೆ ಗೈರಾಗಲು ಕಾರಣವೇನು ಎಂದು ಯಡಿಯೂರಪ್ಪ ಅವರ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.