ಆ್ಯಪ್ನಗರ

ಬಿಜೆಪಿಗೆ ನೀವು ಸುಲಭ ತುತ್ತು: ರಾಹುಲ್‌ ವಿರುದ್ಧ ಹರಿ ಹಾಯ್ದ ಎಚ್‌ಡಿಕೆ

ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟ ಬಿಜೆಪಿಗೆ ನಿಮ್ಮಂಥವರು ಸುಲಭ ತುತ್ತಾಗುವುದರಲ್ಲಿ ಅನುಮಾನವಿಲ್ಲ ಎಂದು ಎಚ್‌ಡಿಕೆ ಅವರು ರಾಹುಲ್‌ ಗಾಂಧಿ ವಿರುದ್ಧ ಹರಿ ಹಾಯ್ದಿದ್ದಾರೆ.

Vijaya Karnataka Web 25 Mar 2018, 3:36 pm
ಬೆಂಗಳೂರು: ಮುಳುಗುತ್ತಿರುವ ನಿಮ್ಮ ಪಕ್ಷಕ್ಕೆ ಸಮರ್ಥ ನಾಯಕ, ನಿಜ ಜಾತ್ಯತೀತ ನಾಯಕನ ಅಗತ್ಯವಿತ್ತು, ಆದರೆ ಭಾರತದ ಸಾಮಾಜಿಕ, ರಾಜಕೀಯ ವಾಸ್ತವವನ್ನರಿಯದ ನಿಮ್ಮಂಥ ಅಪ್ರಬುದ್ಧರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟ ಬಿಜೆಪಿಗೆ ನಿಮ್ಮಂಥವರು ಸುಲಭ ತುತ್ತಾಗುವುದರಲ್ಲಿ ಅನುಮಾನವಿಲ್ಲ ಎಂದು ಎಚ್‌ಡಿಕೆ ಅವರು ರಾಹುಲ್‌ ಗಾಂಧಿ ವಿರುದ್ಧ ಹರಿ ಹಾಯ್ದಿದ್ದಾರೆ.
Vijaya Karnataka Web kumaraswamy hits out rahul gandhi
ಬಿಜೆಪಿಗೆ ನೀವು ಸುಲಭ ತುತ್ತು: ರಾಹುಲ್‌ ವಿರುದ್ಧ ಹರಿ ಹಾಯ್ದ ಎಚ್‌ಡಿಕೆ


ಜೆಡಿಎಸ್ ಎಂದರೆ ಜನತಾದಳ 'ಸಂಘ' ಪಕ್ಷ ಎಂದಿರುವ ರಾಹುಲ್ ಗಾಂಧಿ ಹೇಳಿಕೆಗೆ ಕುಮಾರಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿ ಅವರು ಮೊದಲು ಕಾಂಗ್ರೆಸ್ ಜಾತ್ಯತೀತ ಪಕ್ಷವೇ ಎಂಬುದನ್ನು ಪ್ರಶ್ನಿಸಿಕೊಳ್ಳಲಿ ಎಂದು ಹೇಳಿದ್ದಾರೆ.

ತನ್ನ ಧರ್ಮ, ದೈವದ ಮೇಲೆ ನಂಬಿಕೆ, ಗೌರವದ ಜತೆಗೆ ಇತರರ ಧರ್ಮ, ದೈವದ ಬಗ್ಗೆ ಗೌರವ ಹೊಂದಿರುವುದು, ಎಲ್ಲ ಜಾತಿಗಳನ್ನು ಸಮಾನವಾಗಿ ಕಾಣುವುದು ನಾನು ನಂಬಿದ ಜಾತ್ಯತೀತತೆ. ಮತಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸುತ್ತಾ, ಬಹುಸಂಖ್ಯಾತರು ತಮ್ಮ ಕಿಸೆಯಲ್ಲಿದ್ದಾರೆಂದು ಭಾವಿಸಿಕೊಂಡು ಶತಮಾನಗಳಿಂದ ಅವರನ್ನು ಕಡೆಗಣಿಸಿಕೊಂಡು ಬಂದಿದ್ದೀರಿ.
ನೀವು ನಂಬಿದ್ದ ಡೋಂಗಿ ಜಾತ್ಯತೀತವಾದ ನಿಮಗೆ ಪಾಠ ಕಲಿಸುತ್ತಲೇ ಇಂದು ದೇಗುಲ, ಮಠ ಮಂದಿರಗಳಿಗೆ ಹೋಗುತ್ತಿದ್ದೀರಿ. ಮುಂದೊಂದು ದಿನ ಈ ಕಪಟ ನಡವಳಿಕೆಗಳಿಗೂ ಜನ ಉತ್ತರ ಕೊಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜೆಡಿಎಸ್ ಜಾತ್ಯತೀತ ಪಕ್ಷ ಅಲ್ಲವಾದರೆ ನಮ್ಮ ಪಕ್ಷದ ಬೆಂಬಲದೊಂದಿಗೆ ಅಧಿಕಾರ ಹಿಡಿದಿರುವವರಿಂದ ನೈತಿಕತೆ ಹೆಸರಲ್ಲಿ ರಾಜೀನಾಮೆ ಕೊಡಿಸಿ. ಬಿಬಿಎಂಪಿಯಲ್ಲಿ ಜೆಡಿಎಸ್ ಜತೆ ನೀವು ಮಾಡಿಕೊಂಡಿರುವ ಮೈತ್ರಿ ಬಗ್ಗೆ ನಿಲುವು ತಿಳಿಸಿ. ನಮ್ಮ ಬೆಂಬಲದಿಂದ ಗೆದ್ದ ನಂಜನಗೂಡು, ಗುಂಡ್ಲುಪೇಟೆಯ ಪ್ರತಿನಿಧಿಗಳಿಂದ ರಾಜೀನಾಮೆ ಕೊಡಿಸಿ ನೋಡೋಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ವೀರಶೈವ ಲಿಂಗಾಯತರನ್ನು ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಸವಣ್ಣರ ಹೆಸರನ್ನು ದುರ್ಬಳಕೆ ಮಾಡಿಕೊಂಡ ನಿಮ್ಮಂಥವರಿಂದ ಬುದ್ಧಿ ಹೇಳಿಸಿಕೊಳ್ಳವಷ್ಟು ದಾರಿದ್ರ್ಯ ನಮ್ಮ ಪಕ್ಷಕ್ಕೆ ಬಂದಿಲ್ಲ.

ದೇಶದಲ್ಲಿ ನಿಮ್ಮನ್ನು ಜನ ಮುಳುಗಿಸುತ್ತಿದ್ದಾರೆ. ರಾಜ್ಯದಲ್ಲಿ ತೇಲಿಕೊಂಡಿದ್ದೀರಿ, ಮುಂದೆ ಇಲ್ಲಿಯೂ ಮುಳುಗುತ್ತೀರಿ ಎಚ್ಚರಿಕೆ ಎಂದು ಎಚ್‌ಡಿಕೆ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ