ಆ್ಯಪ್ನಗರ

ಎಸ್‌ಟಿ ಮೀಸಲಿಗೆ ಸಂಘಟಿತ ಹೋರಾಟ, ಕುರುಬ ಸಮಾಜದ ನಿರ್ಣಯಕ್ಕೆ ಸಿದ್ದರಾಮಯ್ಯ ಬೆಂಬಲ

ಈಗಾಗಲೇ ವಾಲ್ಮೀಕಿ ಸಮುದಾಯಕ್ಕೆ ಮೀಸಲು ಹೆಚ್ಚಳ ಹಾಗೂ ಒಳ ಮೀಸಲು ಸಂಬಂಧ ರಾಜ್ಯದಲ್ಲಿ ಹೋರಾಟ ನಡೆಸುತ್ತಿದೆ. ಇದರ ಮಧ್ಯೆ ಕುರುಬ ಸಮಾಜ ಎಸ್‌ಟಿ ಮೀಸಲಿಗೆ ಹೋರಾಡಲು ಮುಂದಾಗಿರುವುದು ಮಹತ್ವ ಪಡೆದುಕೊಂಡಿದೆ.

Vijaya Karnataka 27 Sep 2020, 11:46 pm
ಬೆಂಗಳೂರು: ಎಸ್‌ಟಿ ಮೀಸಲಿಗೆ ಆಗ್ರಹಿಸಿ ಸಂಘಟಿತ ಹಕ್ಕೊತ್ತಾಯ ಸಲ್ಲಿಸಲು ಕುರುಬ ಸಮಾಜದ ಧಾರ್ಮಿಕ ಮುಖಂಡರು, ರಾಜಕಾರಣಿಗಳು ಹಾಗೂ ಸಂಘಟನೆ ಪ್ರತಿನಿಧಿಗಳು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.
Vijaya Karnataka Web Kuruaba Community Meeting


ಸಚಿವ ಕೆಎಸ್‌ ಈಶ್ವರಪ್ಪ ಅವರ ನಿವಾಸದಲ್ಲಿ ಭಾನುವಾರ ಮಹತ್ವದ ಸಭೆ ನಡೆಯಿತು. ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ ಹಾಗೂ ಅಮರೇಶ್ವರ ಮಹಾರಾಜರು ಭಾಗಿಯಾಗಿದ್ದರು.

ವಾಲ್ಮೀಕಿ ಸಮುದಾಯಕ್ಕೆ ಮೀಸಲು ಹೆಚ್ಚಳ ಹಾಗೂ ಒಳ ಮೀಸಲು ಸಂಬಂಧ ರಾಜ್ಯದಲ್ಲಿ ಹೋರಾಟ ನಡೆಯುತ್ತಿದೆ. ಇದರ ಮಧ್ಯೆ ಕುರುಬ ಸಮಾಜ ಎಸ್‌ಟಿ ಮೀಸಲಿಗೆ ಹೋರಾಡಲು ಮುಂದಾಗಿರುವುದು ಮಹತ್ವ ಪಡೆದುಕೊಂಡಿದೆ. ಇದರೊಂದಿಗೆ ಮೀಸಲು ಹಕ್ಕೊತ್ತಾಯ ಮತ್ತೊಂದು ಸ್ವರೂಪ ಪಡೆದುಕೊಳ್ಳುವ ನಿರೀಕ್ಷೆಯಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಈ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ, ಸಿದ್ದರಾಮಯ್ಯ ಬೆಂಬಲ ಸೂಚಿಸಿರುವುದಾಗಿ ನಿರಂಜನಾನಂದಪುರಿ ಸ್ವಾಮೀಜಿ ಹೇಳಿರುವುದೂ ಮಹತ್ವದ ಬೆಳವಣಿಗೆಯಾಗಿದೆ.

ರಾಜ್ಯಮಟ್ಟದ ಸಮಿತಿ

ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಿಗೆ ಆಗ್ರಹಿಸಿ ಹೋರಾಟ ನಡೆಸಲು ರಾಜ್ಯ ಮಟ್ಟದ ಸಮಿತಿ ರಚಿಸಿ ಇದರ ನೇತೃತ್ವವನ್ನು ಗುರುಪೀಠಕ್ಕೆ ವಹಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಸಭೆ ಬಳಿಕ ಮಾತನಾಡಿದ ನಿರಂಜನಾನಂದಪುರಿ ಸ್ವಾಮೀಜಿ, "ಇಂತಹ ಸಮಿತಿ ರಚಿಸಿದರೆ ಕ್ರಿಯಾಶೀಲವಾಗಿ ಹೋರಾಟ ಮಾಡಬಹುದು. ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ನಮಗೆ ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ಈ ವಿಚಾರವಾಗಿ ಅವರೊಂದಿಗೆ ಚರ್ಚಿಸಲಾಗಿದ್ದು, ಸಹಮತ ವ್ಯಕ್ತಪಡಿಸಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರ ಇರುವುದರಿಂದಲೂ ನಮ್ಮ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ," ಎಂದರು.

ಮಾಜಿ ಸಚಿವರಾದ ಎಚ್‌. ವಿಶ್ವನಾಥ್‌, ಎಚ್‌.ಎಂ. ರೇವಣ್ಣ, ಬಂಡೆಪ್ಪ ಕಾಶಂಪೂರ್‌, ಎಂ.ಟಿ.ಬಿ. ನಾಗರಾಜ್‌, ಆರ್‌. ಶಂಕರ್‌, ಸಮಾಜದ ಮುಖಂಡರಾದ ರಘುನಾಥ್‌ ಮಲ್ಕಾಪುರೆ, ಎಂ. ರಾಮಚಂದ್ರಪ್ಪ, ಡಿ. ವೆಂಕಟೇಶಮೂರ್ತಿ ಹಾಗೂ ಕುರುಬರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಾಲ್ಮೀಕಿ ಸಮಾಜದ ಮಾದರಿ ಹೋರಾಟ

ವಾಲ್ಮೀಕಿ ಸಮುದಾಯದವರು ಮೀಸಲು ಹೆಚ್ಚಳಕ್ಕೆ ಆಗ್ರಹಿಸಿ ಒಗ್ಗಟ್ಟಿನಿಂದ ಹೋರಾಡಿದ್ದಾರೆ. ಇದೇ ಮಾದರಿಯಲ್ಲಿ ಕುರುಬ ಸಮಾಜದವರೂ ಪಾದಯಾತ್ರೆ ನಡೆಸಬೇಕಿದೆ. ಸಮುದಾಯದ ಶಕ್ತಿ ಪ್ರದರ್ಶನ ಮಾಡಬೇಕಿದೆ. ಇಲ್ಲವಾದರೆ ಯಾವುದೇ ಸರಕಾರಗಳ ಗಮನ ಸೆಳೆಯಲು ಸಾಧ್ಯವಾಗುವುದಿಲ್ಲ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಈ ನಿಟ್ಟಿನಲ್ಲಿ ಸ್ವಾಮೀಜಿಗಳ ಸಲಹೆಯಂತೆ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು. ಬಳಿಕ ರಾಜ್ಯ ಮತ್ತು ಕೇಂದ್ರ ಸರಕಾರಗಳ ಮೇಲೆ ಒತ್ತಡ ತರಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ