ಆ್ಯಪ್ನಗರ

ಅಕ್ರಮ ಭೂ ಮಂಜೂರು : ಅಶೋಕ್‌ ಪ್ರಕರಣಕ್ಕೆ ಮಧ್ಯಾಂತರ ತಡೆ

ಅಕ್ರಮ ಭೂ ಹಂಚಿಕೆ ಆರೋಪದಲ್ಲಿ ಬಿಜೆಪಿ ಮುಖಂಡ ಆರ್‌...

Vijaya Karnataka 26 Jan 2018, 5:00 am

ಬೆಂಗಳೂರು: ಅಕ್ರಮ ಭೂ ಹಂಚಿಕೆ ಆರೋಪದಲ್ಲಿ ಬಿಜೆಪಿ ಮುಖಂಡ ಆರ್‌.ಅಶೋಕ ವಿರುದ್ಧ ಎಸಿಬಿ ಹೂಡಿರುವ ಎಫ್‌ಐಆರ್‌ ಹಾಗೂ ಆನಂತರದ ಮುಂದಿನ ಪ್ರಕ್ರಿಯೆಗೆ ಹೈಕೋರ್ಟ್‌ ಗುರುವಾರ ಮಧ್ಯಾಂತರ ತಡೆ ನೀಡಿದೆ.

ಅಶೋಕ್‌ ಸಲ್ಲಿಸಿರುವ ಅರ್ಜಿವಿಚಾರಣೆ ನಡೆಸುತ್ತಿರುವ ನ್ಯಾ.ಆರ್‌.ಬಿ.ಬೂದಿಹಾಳ್‌ ಅವರಿದ್ದ ನ್ಯಾಯಪೀಠ ಗುರುವಾರ ಈ ಆದೇಶ ನೀಡಿತು.

ಈ ತಡೆಯಾಜ್ಞೆ 2018ರ ಮಾ.31ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಮಾ.5ರಿಂದ ಪ್ರಕರಣದ ಅಂತಿಮ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಳ್ಳಲಿದ್ದು, ವಿಚಾರಣೆಗೆ ಅರ್ಜಿದಾರರು ಹಾಗೂ ಪ್ರತಿವಾದಿಗಳು ಇಬ್ಬರೂ ಸಹಕರಿಸಬೇಕು ಎಂದು ಆದೇಶಿಸಿತು. ಅಲ್ಲದೆ,ಈ ತಡೆಯಾಜ್ಞೆ ಆದೇಶ ಪ್ರಕರಣದಲ್ಲಿ ಒಂದನೇ ಆರೋಪಿ ಅಶೋಕ್‌ ಮತ್ತು 10ನೇ ಆರೋಪಿಯಾಗಿರುವ ಯಲಚೇನಹಳ್ಳಿಯ ವಾಸಿ ಬಿ.ಕಾರ್ತಿಕ್‌ಗೆ ಮಾತ್ರ ಅನ್ವಯವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅರ್ಜಿದಾರರು, ಎಸಿಬಿ ಪರ ಇಬ್ಬರು ವಕೀಲರು ಹಾಗೂ ಮೂಲ ದೂರುದಾರರ ಪರ ವಕೀಲರ ವಾದವನ್ನು ಸಮಗ್ರವಾಗಿ ಆಲಿಸಿದ ಬಳಿಕ ಈ ಆದೇಶ ನೀಡಿತು. ''ಸುಪ್ರೀಂಕೋರ್ಟ್‌ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣ ವಿಚಾರಣೆಗೆ ತಡೆ ನೀಡಬಾರದು ಎಂದು ಹೇಳಿದೆ, ಆದರೆ ಮೇಲ್ನೋಟಕ್ಕೆ ಪ್ರಕರಣದ ವಿವರಗಳನ್ನು ಗಮನಿಸಿದರೆ ಮಧ್ಯಾಂತರ ಆದೇಶ ನೀಡಬೇಕಾದ ಅಗತ್ಯವಿದೆ,'' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿಗಳಾದ ಬಿ.ವಿ.ಆಚಾರ್ಯ ಹಾಗೂ ಸಿ.ವಿ. ನಾಗೇಶ್‌, ಕರ್ನಾಟಕ ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿ ''ದೂರಿನಲ್ಲಿ ಯಾವುದೇ ಹೊಸ ಆರೋಪಗಳಿಲ್ಲದಿದ್ದರೂ ಅದನ್ನು ಪುರಸ್ಕರಿಸಿ ಎಫ್‌ಐಆರ್‌ ಹಾಕಿರುವುದು ಸರಿಯಲ್ಲ. ಅದು ಕಾನೂನು ಬಾಹಿರ,'' ಎಂದು ವಾದಿಸಿದರು

-------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ