ಆ್ಯಪ್ನಗರ

ಎಡಪಕ್ಷಗಳು ಒಗ್ಗೂಡದಿದ್ದರೆ ಮುಂದಿನ ದಿನಗಳು ಭೀಕರ

ಎಡ ಪಂಥೀಯರು ಹಾಗೂ ಎಡಪಕ್ಷಗಳು ತಮ್ಮ ನೆಲೆಯನ್ನು ...

Vijaya Karnataka 3 Aug 2019, 5:00 am
ಬೆಂಗಳೂರು: ಎಡ ಪಂಥೀಯರು ಹಾಗೂ ಎಡಪಕ್ಷಗಳು ತಮ್ಮ ನೆಲೆಯನ್ನು ಉಳಿಸಿಕೊಳ್ಳಲು ಒಗ್ಗೂಡದಿದ್ದರೆ ಭೀಕರ ದಿನಗಳು ಎದುರಾಗುವ ಕಾಲ ದೂರವಿಲ್ಲ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಎಚ್ಚರಿಸಿದ್ದಾರೆ.
Vijaya Karnataka Web 0208-2-2-KSG_24


ಕ್ರಿಯಾ ಪುಸ್ತಕ ಮತ್ತು ನವಕರ್ನಾಟಕ ಪ್ರಕಾಶನಗಳು ಶುಕ್ರವಾರ ಆಯೋಜಿಸಿದ್ದ 'ಕಾರ್ಲ್‌ಮಾರ್ಕ್ಸ್‌ ಬಂಡವಾಳ ಸಂಪುಟ 1' ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ''ಎಡಪಕ್ಷಗಳು ಮತ್ತು ಎಡಪಂಥಿಯರಲ್ಲಿ ಒಂದು ಕಂದಕವಿದೆ. ಈ ಬಗ್ಗೆ ಯೋಚಿಸದಿದ್ದರೆ ಚಾರಿತ್ರಿಕ ಪ್ರಮಾದ ಉಂಟಾಗುತ್ತದೆ'' ಎಂದರು.

''1964ರಲ್ಲಿ ಎಡಪಕ್ಷಗಳು ಇಬ್ಬಾಗವಾಗಿ ಸಿಪಿಎಂ ಮತ್ತು ಸಿಪಿಐ ಎಂದು ವಿಂಗಡಣೆಯಾಗಿವೆ. ರಾಜಕೀಯವಾಗಿ ಅವುಗಳ ಸಿದ್ಧಾಂತ ಬೇರೆಯಾದರೂ, ಉದ್ದೇಶ ಒಂದೇ ಆಗಿದೆ. ಹೀಗಾಗಿ ಕಮ್ಯೂನಿಸಂ ಒಗ್ಗೂಡಿಕೆಗಾಗಿ ನಾನು ಕಾಯುತ್ತಿದ್ದೇನೆ'' ಎಂದು ಹೇಳಿದರು.

''ಇಂದಿನ ದಿನಗಳಲ್ಲಿ ಜಾಗತಿಕರಣದ ಜತೆ ದೇಗುಲಕರಣ ಹೆಚ್ಚಾಗುತ್ತಿದೆ. ಪ್ರಜಾಪ್ರಭುತ್ವವನ್ನು ಸೈದ್ಧಾಂತಿಕ ರಾಜಕಾರಣಕ್ಕಿಂತ ಹೆಚ್ಚು ಅವಕಾಶವಾದಿ ರಾಜಕಾರಣ ಆವರಿಸುತ್ತಿದೆ. ಇದರಿಂದ ತಾಂತ್ರಿಕ ಪ್ರಜಾಪ್ರಭುತ್ವವು ತಾತ್ವಿಕ ಪ್ರಜಾಪ್ರಭುತ್ವವದ ಮೇಲೆ ದಾಳಿ ನಡೆಸುತ್ತಿದೆ. ಇದು ಹೀಗೆ ಮುಂದುವರಿದರೆ ಜನರಲ್ಲಿ ರಾಜಕೀಯದ ಬಗ್ಗೆ ಸಿನಿಕತನ ಬೆಳೆಯುತ್ತದೆ'' ಎಂದು ಹೇಳಿದರು.

''ಸೈದ್ಧಾಂತಿಕ ಬದ್ಧತೆ ಇರುವವರು ನೈತಿಕತೆಯನ್ನು ಹೊಂದಿರುತ್ತಾರೆ. ಸೈದ್ಧಾಂತಿಕ ಬದ್ಧತೆ ಹೊಂದಬೇಕಾದರೆ ಕಾರ್ಲ್‌ಮಾರ್ಕ್ಸ್‌ ಜತೆ ಅಂಬೇಡ್ಕರ್‌ ವಾದವನ್ನು ಒಪ್ಪಬೇಕು. ಆದರೆ ಯಾವುದೇ ವಾದಕ್ಕೆ ಸೈದ್ಧಾಂತಿಕ ಸೊಕ್ಕಿದ್ದರೆ ಅದು ಸೋಲುಂಟಾಗುತ್ತದೆ. ಆದ್ದರಿಂದ ಎಲ್ಲರೂ ಇದರ ಹೊರಗೆ ಬಂದು ವಿವೇಚನೆಯಿಂದ ಚಿಂತಿಸಬೇಕು'' ಎಂದರು.

ಇದಕ್ಕೂ ಮುನ್ನ ನಡೆದ 'ಬಂಡವಾಳದ 150 ವರ್ಷಗಳು ಮತ್ತು ಎಡಪಂಥದ ಮರು-ಶೋಧನೆ' ವಿಚಾರಗೋಷ್ಠಿಯಲ್ಲಿ ಪ್ರೊ.ಪ್ರಭಾತ್‌ ಪಟ್ನಾಯಕ್‌ ಮಾತನಾಡಿದರು.

ಡಾ.ಸಿದ್ಧನಗೌಡ ಪಾಟೀಲ, ಸಿಐಟಿಯು ಕರ್ನಾಟಕ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಮೀನಾಕ್ಷಿ ಸುಂದರಂ, ಎಐಟಿಯುಸಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್‌ ಹಾಗೂ ಸಾಹಿತಿ ಕೆ.ನೀಲಾ ಮತ್ತಿತರರಿದ್ದರು.

.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ