ಆ್ಯಪ್ನಗರ

ಪರಿಷತ್‌ ಚುನಾವಣೆ: ನಜೀರ್‌ ಅಹ್ಮದ್‌, ಬಿ.ಕೆ. ಹರಿಪ್ರಸಾದ್‌ಗೆ ಕಾಂಗ್ರೆಸ್‌ ಟಿಕೆಟ್‌

ರಾಜ್ಯ ನಾಯಕರು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ವಿಧಾನ ಪರಿಷತ್‌ ಟಿಕೆಟ್‌ ನೀಡಲು ಉದ್ದೇಶಿಸಿದ್ದರು. ಈ ಸಮೀಕರಣವನ್ನು ಹೈಕಮಾಂಡ್‌ ಪುರಸ್ಕರಿಸಿದೆ. ಆದರೆ ಅಭ್ಯರ್ಥಿಗಳನ್ನು ಬದಲಾಯಿಸಿದೆ.

Vijaya Karnataka Web 17 Jun 2020, 4:29 pm

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಕಳುಹಿಸಿದ್ದ ಸಂಭವನೀಯರ ಪಟ್ಟಿಯನ್ನು ತಿರಸ್ಕರಿಸಿದ್ದ ಹೈಕಮಾಂಡ್‌ ಬುಧವಾರ ಅಚ್ಚರಿಯ ರೀತಿಯಲ್ಲಿ ತಾನೇ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಿದೆ.
Vijaya Karnataka Web BK Hariprasas Nazeer Ahmed


ಸುದೀರ್ಘ ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದ ಬಿಕೆ ಹರಿಪ್ರಸಾದ್‌ಗೆ ಹೈಕಮಾಂಡ್‌ ಮಣೆ ಹಾಕಿದ್ದು, ಅವರಿಗೆ ಪರಿಷತ್‌ ಟಿಕೆಟ್‌ ನೀಡಿ ರಾಜ್ಯ ರಾಜಕಾರಣಕ್ಕೆ ಅಟ್ಟಿದೆ. ಇನ್ನೊಂದು ಸ್ಥಾನಕ್ಕೆ ರಾಜ್ಯ ನಾಯಕರು ಕಳುಹಿಸಿದ್ದ ಹೆಸರುಗಳಲ್ಲೇ ನಜೀರ್‌ ಅಹ್ಮದ್‌ಗೆ ಮಣೆ ಹಾಕಿದೆ.

ರಾಜ್ಯ ನಾಯಕರು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ವಿಧಾನ ಪರಿಷತ್‌ ಟಿಕೆಟ್‌ ನೀಡಲು ಉದ್ದೇಶಿಸಿದ್ದರು. ಅಲ್ಪಸಂಖ್ಯಾತ ಕೋಟಾದಿಂದ ಮಾಜಿ ರಾಜ್ಯಪಾಲೆ ಮಾರ್ಗರೇಟ್‌ ಆಳ್ವ ಪುತ್ರ ನಿವೇದಿತ್‌ ಆಳ್ವ ಹಾಗೂ ಹಾಲಿ ಎಂಎಲ್ಸಿ ನಜೀರ್‌ ಅಹ್ಮದ್ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಇದರಲ್ಲಿ ನಜೀರ್‌ ಅಹ್ಮದ್‌ ಹೆಸರನ್ನು ಹೈಕಮಾಂಡ್‌ ಒಪ್ಪಿಕೊಂಡಿದೆ.

ಮೇಲ್ಮನೆ ಚುನಾವಣೆ: ಕಾಂಗ್ರೆಸ್‌ ನಾಯಕರ ಶಿಫಾರಸು ತಿರಸ್ಕಾರ, ಹೊಸಬರ ಪಟ್ಟಿಗೆ ಹೈಕಮಾಂಡ್‌ ಫರ್ಮಾನು

ಇನ್ನು ಹಿಂದುಳಿದ ವರ್ಗದಿಂದ ಮಾಜಿ ಸಚಿವ ಎಂ.ಆರ್‌. ಸೀತಾರಾಂ, ಡಿ.ಕೆ. ಮೋಹನ್‌ಬಾಬು ಹಾಗೂ ಹಾಲಿ ಎಂಎಲ್ಸಿ ಎಂ.ಸಿ. ವೇಣುಗೋಪಾಲ್‌ ಈ ಮೂವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆದರೆ ಮೂವರನ್ನೂ ಬದಿಗೆ ತಳ್ಳಿ ಬಿಲ್ಲವ ಸಮುದಾಯ (ಹಿಂದುಳಿದ ವರ್ಗ)ಕ್ಕೆ ಸೇರಿದ ಬಿ.ಕೆ. ಹರಿಪ್ರಸಾದ್‌ ಅವರಿಗೆ ಕೇಂದ್ರ ನಾಯಕರು ಟಿಕೆಟ್‌ ನೀಡಿದ್ದಾರೆ.

ಈ ಮೂಲಕ ರಾಜ್ಯ ನಾಯಕರ ಜಾತಿ ಸಮೀಕರಣವನ್ನು ಹೈಕಮಾಂಡ್‌ ಉಳಿಸಿಕೊಂಡಿದೆ. ಆದರೆ ಅಭ್ಯರ್ಥಿಗಳನ್ನು ಮಾತ್ರ ಬದಲಾಯಿಸಲಾಗಿದೆ.

ಮೇಲ್ಮನೆ ಅಭ್ಯರ್ಥಿ ಆಯ್ಕೆ ಗೊಂದಲ, ಗುರುವಾರ ಸಿಎಲ್‌ಪಿ ಸಭೆ ಕರೆದ ಸಿದ್ದರಾಮಯ್ಯ

ಸಿಎಲ್‌ಪಿ ಸಭೆ ಕರೆದಿದ್ದ ಸಿದ್ದರಾಮಯ್ಯ

ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಿದ್ದರು. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆಯನ್ನೂ ಕರೆದಿದ್ದರು. ಈ ನಡುವೆ ಏಕಾಏಕಿ ಹೈಕಮಾಂಡ್ ಬುಧವಾರ‌ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.

ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಮಾತ್ರ ಪ್ರಕಟವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳ ಹೆಸರು ಇನ್ನೂ ಬಹಿರಂಗವಾಗಿಲ್ಲ. ಒಟ್ಟು 7 ಸ್ಥಾನಗಳಿಗೆ ಜೂನ್‌ 29ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ 4, ಕಾಂಗ್ರೆಸ್ ‌2 ಹಾಗೂ ಜೆಡಿಎಸ್‌ 1 ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ