ಕೊರೊನಾ ಸೋಂಕು ಪ್ರಕರಣಗಳನ್ನು ಆಧರಿಸಿ ದೇಶಾದ್ಯಂತ ರೆಡ್ ಝೋನ್, ('ಹಾಟ್ಸ್ಪಾಟ್'), ಆರೆಂಜ್ ಝೋನ್ ಮತ್ತು 'ಗ್ರೀನ್ ಝೋನ್' ಎಂಬ ಮೂರು ವಲಯಗಳನ್ನು ರಚಿಸಲಾಗಿದೆ. ಈ ಪೈಕಿ ಒಟ್ಟು 170 ಜಿಲ್ಲೆಗಳನ್ನು 'ಹಾಟ್ಸ್ಪಾಟ್'ಗಳೆಂದು ಗುರುತಿಸಲಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ದ.ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ - ಈ ಎಂಟು ಜಿಲ್ಲೆಗಳು ರಾಜ್ಯದ 'ಹಾಟ್ಸ್ಪಾಟ್' ಪಟ್ಟಿಯಲ್ಲಿವೆ. ಕೋವಿಡ್-19 ಸೋಂಕು ತೀವ್ರವಾಗಿರುವ ಯವುದೇ 'ಹಾಟ್ಸ್ಪಾಟ್'ಗಳಿಗೆ ಮಾರ್ಗಸೂಚಿಯಲ್ಲಿ ನೀಡಲಾದ ವಿನಾಯಿತಿಗಳು ಅನ್ವಯವಾಗುವುದಿಲ್ಲ. ಈ ಪ್ರದೇಶಗಳಲ್ಲಿ ಜನರು, ವಾಹನಗಳ ಓಡಾಟ ಸೇರಿದಂತೆ ಸಂಪೂರ್ಣ ಕಠಿಣ ಕರ್ಫ್ಯೂ ಮಾದರಿಯ ನಿರ್ಬಂಧ ಮುಂದುವರಿಯಲಿದೆ.
ಯಾವುದಕ್ಕೆಲ್ಲಾ ನಿರ್ಬಂಧ ಮುಂದುವರಿಯಲಿದೆ?
ಪ್ರಸ್ತುತ ಜಾರಿಯಲ್ಲಿರುವ ಬಹುತೇಕ ನಿರ್ಬಂಧಗಳು ಮುಂದುವರಿಯಲಿವೆ. ದೇಶಿಯ, ಅಂತಾರಾಷ್ಟ್ರೀಯ ವಿಮಾನ ಹಾರಾಟ, ರೈಲು, ಮೆಟ್ರೊ ರೈಲು, ಟ್ಯಾಕ್ಸಿ ಸೇರಿದಂತೆ ಎಲ್ಲಾ ರೀತಿಯ ಸರಕಾರಿ ಮತ್ತು ಖಾಸಗಿ ಸಾರ್ವಜನಿಕ ಸಾರಿಗೆ; ಅಂತರ-ಜಿಲ್ಲೆ, ಅಂತರ-ರಾಜ್ಯ ಸಂಚಾರ; ಸಿನಿಮಾ, ಹೋಟೆಲ್, ಬಾರ್, ಮಾಲ್, ಜಿಮ್, ಸ್ವಿಮ್ಮಿಂಗ್ ಪೂಲ್, ಶಾಲಾ ಕಾಲೇಜು; ಅಗತ್ಯವಸ್ತು ಮತ್ತು ತುರ್ತು ಸೇವೆ ಹೊರತಾದ ಎಲ್ಲಾ ಕಚೇರಿಗಳು ಹಾಗೂ ವಾಣಿಜ್ಯ-ಕೈಗಾರಿಕಾ ಚಟುವಟಿಕೆಗಳು; ಸಾರ್ವಜನಿಕ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ, ಸಾಂಸ್ಕೃತಿ, ಶೈಕ್ಷಣಿಕ ಕಾರ್ಯಕ್ರಮಗಳು ನಿರ್ಬಂಧಿತ ಪಟ್ಟಿಯಲ್ಲಿ ಪ್ರಮುಖವಾಗಿ ಸೇರಿವೆ.
ಉಲ್ಲಂಘಿಘಿಸಿದರೆ ಜೈಲು ಶಿಕ್ಷೆ: ಕೇಂದ್ರದ ಮಾರ್ಗಸೂಚಿಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ. ಲಾಕ್ಡೌನ್ 2.0 ಮತ್ತಷ್ಟು ಕಠಿಣವಾಗಿ ಅನುಷ್ಠಾನ ಮಾಡಲಾಗುತ್ತಿದ್ದು, ಉಲ್ಲಂಘಿಸಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇತ್ತ ಕೇಂದ್ರ ಸರಕಾರವೂ ಮಾರ್ಗಸೂಚಿಗಳನ್ನು ಕಠಿಣವಾಗಿ ಪಾಲಿಸುವಂತೆ ಎಲ್ಲಾರಾಜ್ಯಗಳಿಗೆ ಸೂಚಿಸಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಎಚ್ಚರಿಕೆಯನ್ನೂ ಸರಕಾರ ರವಾನಿಸಿದೆ.
ಯಾವುದಕ್ಕೆಲ್ಲನಿರ್ಬಂಧ ತಡೆಯಾಗಲಿದೆ?
- ವೈದ್ಯಕೀಯ ತುರ್ತು ಮತ್ತು ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಖಾಸಗಿ ವಾಹನಗಳನ್ನು ಬಳಸಬೇಕು
- ಕಾರಿನಲ್ಲಿ ಡ್ರೈವರ್ ಜತೆ ಹಿಂದಿನ ಸೀಟಿನಲ್ಲಿ ಒಬ್ಬ ವ್ಯಕ್ತಿ ಕೂರಲು ಅವಕಾಶ
- ದ್ವಿಚಕ್ರ ವಾಹದನದಲ್ಲಿ ಹಿಂಬದಿಯ ಸವಾರರಿಗೆ ಅವಕಾಶ ಇಲ್ಲ
- ಅಗತ್ಯ ಸೇವೆಯಲ್ಲಿರುವವರಿಗೆ ಪ್ರಯಾಣ ನಿರ್ಬಂಧಗಳು ಅನ್ವಿಯಿಸುವುದಿಲ್ಲ
- ಪಡಿತರ, ಎಲ್ಲಾಆಹಾರ ಪದಾರ್ಥಗಳು, ದಿನಸಿ ಅಂಗಡಿಗಳು ತೆರೆಯಬಹುದು
- ಅಂಗಡಿಗಳನ್ನು ತೆರೆಯಲು ಯಾವುದೇ ಸಮಯ ನಿರ್ಬಂಧವಿಲ್ಲ
- ಇ-ಕಾಮರ್ಸ್, ಕೊರಿಯರ್ ಸೇವೆಗಳಿಗೆ ಅವಕಾಶ
- ವೈದ್ಯಕೀಯ ಮತ್ತು ತುರ್ತು ಸೇವೆ ಸಿಬ್ಬಂದಿ, ಅತಂತ್ರ ಪ್ರಯಾಣಿಕರು ತಂಗಿರುವ ಹೋಟೆಲ್ಗಳು, ಲಾಡ್ಜ್ಗಳಿಗೆ ಅನುಮತಿ
ಸರಕು ಮತ್ತು ಸಾರಿಗೆ, ಆರೋಗ್ಯ ವಲಯ
- ಅಗತ್ಯ ವಸ್ತುವೆಂಬ ಷರತ್ತಿಲ್ಲದೆ ಎಲ್ಲಾ ಬಗೆಯ ಸರಕುಗಳ ಸಾಗಾಟ
- ರಸ್ತೆ, ರೈಲು ಮಾರ್ಗ, ಜಲಸಾರಿಗೆ ಮತ್ತು ವಿಮಾನಗಳ ಮೂಲಕ ಸರಕು ಸಾಗಣೆ
- ಇಬ್ಬರು ಡ್ರೈವರ್ಗಳು, ಒಬ್ಬ ಕ್ಲೀನರ್ ಟ್ರಕ್ನಲ್ಲಿ ಪ್ರಯಾಣಿಸಲು ಅವಕಾಶ
- ವೈದ್ಯಕೀಯ ಸೇವೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೆ ಅವಕಾಶ
- ಎಲ್ಲಾಆಸ್ಪತ್ರೆ, ಔಷಧ ಅಂಗಡಿಗಳು, ಪ್ರಾಣಿ ಚಿಕಿತ್ಸಾಲಯಗಳು ಓಪನ್
- ಔಷಧ ಮತ್ತು ವೈದ್ಯಕೀಯ ಉತ್ಪನ್ನಗಳ ತಯಾರಿಕೆ, ವಿತರಣೆ ಸರಾಗ
ಕೃಷಿ ಮತ್ತು ಆಹಾರ ವಲಯ
- ಎಲ್ಲಾ ಕೃಷಿ ಚಟುವಟಿಕೆಗಳು; ಕೃಷಿ ಉತ್ಪನ್ನಗಳ ಸಾಗಾಟ, ಮಾರಾಟಕ್ಕೆ ಅವಕಾಶ
- ರಸಗೊಬ್ಬರ ಮತ್ತು ಕೀಟನಾಶಕ, ಬೀಜಗಳ ತಯಾರಿಕೆ, ಮಾರಾಟಕ್ಕೆ ಅವಕಾಶ
- ಆಳ ಸಮುದ್ರ ಸೇರಿದಂತೆ ಎಲ್ಲಾ ಬಗೆಯ ಮೀನುಗಾರಿಕೆ ನಡೆಸಬಹುದು
- ಎಲ್ಲಾ ಬಗೆಯ ಪಶುಸಂಗೋಪನೆ, ಕೃಷಿ ಉಪಕಸುಬುಗಳು ಮಾಡಬಹುದು
- ಗ್ರಾಮೀಣ ಭಾಗದಲ್ಲಿರುವ ಆಹಾರ ಸಂಸ್ಕರಣೆ ಘಟಕಗಳು ಓಪನ್
- ಟೀ, ಕಾಫಿ, ರಬ್ಬರ್ ತೋಟಗಳಲ್ಲಿ ಶೇ. 50ರಷ್ಟು ಕೂಲಿಕಾರ್ಮಿಕರಿಗೆ ಅವಕಾಶ
ಆರ್ಥಿಕ, ಸಾಮಾಜಿಕ ವಲಯ
- ಎಲ್ಲಾ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು, ಎಟಿಎಂ, ವಿಮಾ ಕಂಪನಿಗಳು, ಷೇರು ಬ್ರೋಕರೇಜ್ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ
- ಅನಾಥಾಶ್ರಮ, ವೃದ್ಧಾಶ್ರಮ, ವಿಕಲ ಚೇತನರ ಆರೈಕೆ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ
- ಕಠಿಣ ಸಾಮಾಜಿಕ ಅಂತರ ಪಾಲನೆಯೊಂದಿಗೆ ನರೇಗಾ ಕಾಮಗಾರಿಗಳು ಆರಂಭಗೊಳ್ಳಲಿವೆ
- ರಸ್ತೆ ನಿರ್ಮಾಣ, ನೀರಾವರಿ ಯೋಜನೆಗಳ ಕಾಮಗಾರಿ ಪುನಾರಂಭ
- ನರೇಗಾ ಯೋಜನೆಯಡಿ ಆದ್ಯತೆಯ ಮೇರೆಗೆ ನಿರ್ಮಾಣ ಕಾಮಗಾರಿ ಶುರು
- ಗ್ರಾಮೀಣ ಪ್ರದೇಶಗಳಲ್ಲಿ ಕಲ್ಲಿದ್ದಲು, ಪ್ಯಾಕೇಜಿಂಗ್ ಉತ್ಪನ್ನ, ಗಣಿಗಾರಿಕೆ, ಸೆಣಬು, ಇಟ್ಟಿಗೆ ಕೈಗಾರಿಕೆಗಳು ಓಪನ್
ಸಾರ್ವಜನಿಕ ಮತ್ತು ಮಾಧ್ಯಮ ಸೇವೆ
- ಪೆಟ್ರೋಲ್ ಪಂಪ್, ಎಲ್ಪಿಜಿ, ನೈಸರ್ಗಿಕ ಅನಿಲ ಪೂರೈಕೆ
- ಅಂಚೆ ಕಚೇರಿಯ ಸೇವೆಗಳು ಲಭ್ಯ
- ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳು ಓಪನ್
- ದೂರವಾಣಿ ಮತ್ತು ಇಂಟರ್ನೆಟ್ ಸೇವೆ ಲಭ್ಯ
ಮಾಧ್ಯಮ ಅಗತ್ಯ ಸೇವೆ: ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಕಾರ್ಯನಿರ್ವಹಣೆಯನ್ನು ಅಗತ್ಯ ಸೇವೆ ಅಡಿಯಲ್ಲಿ ಸೇರಿಸಿ ಮುಂದುವರಿಸಲು ಸರಕಾರ ಅವಕಾಶ ನೀಡಿದೆ. ಈ ಮಧ್ಯೆ, ಯುನೆಸ್ಕೊ ಸಹ ಮಾಧ್ಯಮವನ್ನು ಜಾಗತಿಕ ಮಟ್ಟದಲ್ಲಿಅಗತ್ಯ ಸೇವೆಯೆಂದು ಪರಿಗಣಿಸಬೇಕೆಂದು ಶಿಫಾರಸು ಮಾಡಿದೆ.