ಆ್ಯಪ್ನಗರ

ಹಾಸನ ಬಿಟ್ಟಿದ್ದೇ ಸೋಲಿಗೆ ಕಾರಣ: ಮೊಮ್ಮಕ್ಕಳೊಂದಿಗೆ ಲೋಕಸಭೆ ಪ್ರವೇಶದ ದೇವೇಗೌಡರ ಕನಸು ಭಗ್ನ

ಇಬ್ಬರು ಮೊಮ್ಮಕ್ಕಳೊಂದಿಗೆ ಸಂಸತ್‌ ಪ್ರವೇಶಿಸುವ ಕನಸು ಕಂಡಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌ಡಿ...

Vijaya Karnataka 24 May 2019, 5:00 am
ಬೆಂಗಳೂರು: ಇಬ್ಬರು ಮೊಮ್ಮಕ್ಕಳೊಂದಿಗೆ ಸಂಸತ್‌ ಪ್ರವೇಶಿಸುವ ಕನಸು ಕಂಡಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರಿಗೆ ಭಾರೀ ನಿರಾಶೆಯಾಗಿದೆ. ಮೊಮ್ಮಗನಿಗಾಗಿ ಸ್ವಕ್ಷೇತ್ರ ಹಾಸನ ತೊರೆದು ಬಂದಿದ್ದೇ ಇಳಿವಯಸ್ಸಿನಲ್ಲಿ ದೇವೇಗೌಡರಿಗೆ ಮುಳುವಾಯಿತು.
Vijaya Karnataka Web 37


ಆರೂವರೆ ದಶಕಗಳ ಸಾರ್ವಜನಿಕ ಬದುಕಿನಲ್ಲಿ ಕೊನೇ ಬಾರಿಗೆ ಲೋಕಸಭೆ ಪ್ರವೇಶಿಸುವ ಕನಸಿನೊಂದಿಗೆ ಅನಿರೀಕ್ಷಿತವಾಗಿ ತುಮಕೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದ ದೇವೇಗೌಡರ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಕಾಂಗ್ರೆಸ್‌ ಜತೆಗಿನ ಮೈತ್ರಿ ಒಪ್ಪಂದದಂತೆ ಜೆಡಿಎಸ್‌ ಮೈಸೂರು ಬದಲಿಗೆ ತುಮಕೂರು ಪಡೆದುಕೊಂಡಿತು. ಹಾಲಿ ಸಂಸದ ಮುದ್ದಹನುಮೇಗೌಡ ಅವರಿಗೆ ಟಿಕೆಟ್‌ ಕೈತಪ್ಪಿ, ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡ ಕಣಕ್ಕಿಳಿದಿದ್ದರು. ಮುದ್ದಹನುಮೇಗೌಡರಿಗೆ ಟಿಕೆಟ್‌ ತಪ್ಪಿದ್ದು ಕ್ಷೇತ್ರ ವ್ಯಾಪ್ತಿಯ ಜೆಡಿಎಸ್‌ ಕಡುವಿರೋಧಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೈತ್ರಿ ಕೇವಲ ಟಿಕೆಟ್‌ ಹಂಚಿಕೆಗೆ ಸೀಮಿತವಾಗಿ ವಾಸ್ತವದಲ್ಲಿ ಮಿತ್ರಪಕ್ಷಗಳ ನಾಯಕರು ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಲಿಲ್ಲ. ಪರಿಣಾಮವಾಗಿ, ಮೋದಿ ಅಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವ್ಯಕ್ತಿತ್ವ, ಹಿರಿತನ, ಅನುಭವ ಕೊಚ್ಚಿಹೋಗಿದೆ.

ದೇವೇಗೌಡರಿಗೆ ಸೋಲು ಹೊಸತಲ್ಲ. ಪ್ರಧಾನಿಯಾಗಿ 10 ತಿಂಗಳ ಅಧಿಕಾರಾವಧಿ ಮುಗಿಸಿದ ಬಳಿಕ ಎದುರಾದ ಚುನಾವಣೆಯಲ್ಲಿ ಅವರು ದಯನೀಯ ಸೋಲು ಕಂಡಿದ್ದರು. ಆದರೆ, ಈ ಬಾರಿ ರಾಜ್ಯದ ಹಿರಿಯ ಮತ್ಸದ್ಧಿ ರಾಜಕಾರಣಿಯಾಗಿ ದೇವೇಗೌಡರಿಗೆ ಇಳಿವಯಸ್ಸಿನಲ್ಲಿ ಎದುರಾದ ಸೋಲು ಆಘಾತ ನೀಡಿದೆ.

ಪುತ್ರನ ಸಲಹೆಯಂತೆ ತುಮಕೂರು ಆಯ್ಕೆ:

ಸ್ವಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್‌ಗೆ ಬಿಟ್ಟುಕೊಟ್ಟಿದ್ದ ದೇವೇಗೌಡರು ಕೊನೇ ಕ್ಷಣದವರೆಗೆ ಎಲ್ಲಿಂದ ಸ್ಪರ್ಧಿಸಬೇಕು ಎಂಬ ಗೊಂದಲದಲ್ಲಿದ್ದರು. ಬೆಂಗಳೂರು ಉತ್ತರದ ಆಯ್ಕೆಯೂ ಅವರ ಮುಂದಿತ್ತು. ಗುಪ್ತದಳದ ವರದಿ ಆಧರಿಸಿ ಸಿಎಂ ಕುಮಾರಸ್ವಾಮಿ ಸಲಹೆಯಂತೆ 'ಸೇಫ್‌' ಎಂಬ ಲೆಕ್ಕಾಚಾರದಲ್ಲಿ ತುಮಕೂರಿನಲ್ಲಿ ದೇವೇಗೌಡರು ಅಭ್ಯರ್ಥಿಯಾಗಿದ್ದರು. ಆದರೆ, ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಬಿಡಲು ದೇವೇಗೌಡರ ಕುಟುಂಬ ಅಡ್ಡಿಯಾಯಿತು, ಹಾಲಿ ಸಂಸದ ಮುದ್ದಹನುಮೇಗೌಡಗೆ ಟಿಕೆಟ್‌ ತಪ್ಪಿಸಿದರು ಎಂಬ ಅಪವಾದ ಹಾಗೂ ಮಿತ್ರಪಕ್ಷ ಕಾಂಗ್ರೆಸ್‌ ನಾಯಕರು ಕೈಕೊಟ್ಟಿದ್ದು ದೇವೇಗೌಡರ ದಯನೀಯ ಸೋಲಿಗೆ ಕಾರಣವಾಗಿದೆ. ಆದರೆ ಹಾಸನದಲ್ಲಿ ಅವರ ಉತ್ತರಾಧಿಕಾರಿ ಪ್ರಜ್ವಲ್‌ ಆಯ್ಕೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ