ಆ್ಯಪ್ನಗರ

ಕಮಲವನ್ನರಳಿಸದ ಆತ್ಮಸಾಕ್ಷಿಯ ಮತ

'ಆತ್ಮಸಾಕ್ಷಿಯ' ಮತಗಳ ನಿರೀಕ್ಷೆಯಲ್ಲಿ ಸರಕಾರ ರಚನೆಯ 'ವಿಫಲ' ಯತ್ನ ನಡೆಸಿದ ಬಿಜೆಪಿ ಆಟ ಅಂತ್ಯ ಕಾಣುವುದಕ್ಕೆ ಮುನ್ನವೇ ಸೋಲೊಪ್ಪಿಕೊಂಡಿದೆ.

Vijaya Karnataka 20 May 2018, 7:56 am
ಬೆಂಗಳೂರು: 'ಆತ್ಮಸಾಕ್ಷಿಯ' ಮತಗಳ ನಿರೀಕ್ಷೆಯಲ್ಲಿ ಸರಕಾರ ರಚನೆಯ 'ವಿಫಲ' ಯತ್ನ ನಡೆಸಿದ ಬಿಜೆಪಿ ಆಟ ಅಂತ್ಯ ಕಾಣುವುದಕ್ಕೆ ಮುನ್ನವೇ ಸೋಲೊಪ್ಪಿಕೊಂಡಿದೆ.
Vijaya Karnataka Web yeddyurappa


ಈ ಮೂಲಕ 3ನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಮೂರೇ ದಿನಕ್ಕೆ ಅಧಿಕಾರ ಕಳೆದುಕೊಂಡಿದ್ದು, ಉತ್ತರ ಪ್ರದೇಶದ ಜಗದಂಬಿಕಾ ಪಾಲ್‌ ಹೆಸರಿನಲ್ಲಿದ್ದ ಅತಿ ಕಡಿಮೆ ಅವಧಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಜತೆಗೆ ಅತಿ ಕಡಿಮೆ ಅವಧಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ತಾವೇ ಸ್ಥಾಪಿಸಿದ ದಾಖಲೆಯನ್ನೂ ಮುರಿದಿದ್ದಾರೆ.

ಶಾಸಕರ ಕೊರತೆ ನೀಗಿಸುವುದಕ್ಕೆ 'ಅವಿಶ್ರಾಂತ' ಭೇಟೆ ನಡೆಸಿದ ಬಿಜೆಪಿ ನಾಯಕರು ವಿಶ್ವಾಸಮತ ಯಾಚನೆ ದಿನವೂ ಪ್ರಯತ್ನ ಮುಂದುವರಿಸಿದ್ದರು. ಖಾಸಗಿ ಹೊಟೇಲ್‌ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಇದೇ ವಿಶ್ವಾಸ ವ್ಯಕ್ತಪಡಿಸಿದ್ದ ಯಡಿಯೂರಪ್ಪ, ಆನಂದ್‌ ಸಿಂಗ್‌, ಪ್ರತಾಪ್‌ ಗೌಡ ಪಾಟೀಲ್‌ ರೀತಿ ಇನ್ನಷ್ಟು ಶಾಸಕರು ಅಡ್ಡಮತದಾನ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದರು.

ಪ್ರಮಾಣ ವಚನ ಸ್ವೀಕಾರದ ಮಧ್ಯೆ ಕಾಂಗ್ರೆಸ್‌ ವಿಪ್ಹ್‌ ಜಾರಿ ಮಾಡುತ್ತಿದ್ದರೂ ಆಡಳಿತ ಪಕ್ಷದ ಸಾಲಿನಲ್ಲಿದ್ದ ಬಿಜೆಪಿ ಶಾಸಕರು 'ಜಾದು' ನಡೆಯುವ ನಿರೀಕ್ಷೆಯಲ್ಲೇ ಇದ್ದರು. ಶಾಸಕರ ಸೆಳೆಯುವ ಹೊಣೆ ಹೊತ್ತಿದ್ದ ಬಿ.ಶ್ರೀರಾಮುಲು, ಉಮೇಶ್‌ ಕತ್ತಿ, ಬಸವರಾಜ್‌ ಬೊಮ್ಮಾಯಿ, ರಾಮದಾಸ್‌, ವೀರಣ್ಣ ಚರಂತಿಮಠ್‌ ಮೊಗಸಾಲೆಯಲ್ಲಿದ್ದುಕೊಂಡು 'ನಿಸ್ತಂತು' ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಭೋಜನ ವಿರಾಮದ ವೇಳೆಗೆ ಇನ್ನೇನು ನಡೆಯದೆಂದು ಬಿಜೆಪಿ ನಾಯಕರು ನಿರಾಶೆಯ ನಿಟ್ಟುಸಿರು ಬಿಟ್ಟಿತು.

ವಿದಾಯ ಭಾಷಣ

ಶಾಸಕಾಂಗ ಪಕ್ಷದ ಸಭೆಯ ಬಳಿಕ ವಿಧಾನಸೌಧಕ್ಕೆ ಆಗಮಿಸಿದ ಯಡಿಯೂರಪ್ಪ ಹಾಗೂ ಬಿಜೆಪಿ ಪ್ರಮುಖ ಶಾಸಕರ ಜತೆಗೆ ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ, ಪ್ರಕಾಶ್‌ ಜಾವಡೇಕರ್‌, ಅನಂತಕುಮಾರ, ಡಿ.ವಿ.ಸದಾನಂದ ಗೌಡ, ಶೋಭಾ ಕರಂದ್ಲಾಜೆ ಚರ್ಚೆ ನಡೆಸಿದರು.

ಈ ವೇಳೆ ಕಾಂಗ್ರೆಸ್‌ ಪಾಳಯದಲ್ಲಿದ್ದ ಆತ್ಮಸಾಕ್ಷಿಯ ಮತಗಳು ಜಿಗಿಯುವ ಸಾಧ್ಯತೆ ಕ್ಷೀಣಿಸುವುದನ್ನು ಅರಿತ ಯಡಿಯೂರಪ್ಪ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜತೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಸರಕಾರ ರಚನೆ ಸಾಧ್ಯತೆ ಇಲ್ಲವಾದರೆ ವಿಶ್ವಾಸ ಮತ ನಿರ್ಣಯ ಮಂಡಿಸದೆ ರಾಜೀನಾಮೆ ನೀಡಿ ಹೋರಾಟ ಮುಂದುವರಿಸುವಂತೆ ವರಿಷ್ಠರು ಸೂಚನೆ ನೀಡಿದರು.

ಆದರೆ ಇದಕ್ಕೆ ಒಪ್ಪದ ಯಡಿಯೂರಪ್ಪ 'ನಿರ್ಣಯ ಮಂಡಿಸುತ್ತೇನೆ. ವಿದಾಯ ಭಾಷಣದಲ್ಲಿ ಹಿಂದಿನ ಕಾಂಗ್ರೆಸ್‌ ಸರಕಾರದ ವೈಫಲ್ಯ ಹಾಗೂ ತಮ್ಮ ಧ್ಯೇಯೋದ್ದೇಶಗಳ ಬಗ್ಗೆ ಸದನದಲ್ಲಿ ವಿದಾಯ ಭಾಷಣ ಮಾಡಿ ರಾಜಭವನಕ್ಕೆ ತೆರಳುತ್ತೇನೆ. ಇದಾದ ಮರುಕ್ಷಣದಿಂದಲೇ ಹೋರಾಟದ ಅಖಾಡಕ್ಕೆ ಧುಮುಕಿ ಪಕ್ಷ ಸಂಘಟನೆ ಕಾಯಕ ಮುಂದುವರಿಸುತ್ತೇನೆ' ಎಂದು ಹೇಳಿದಾಗ ಹೈಕಮಾಂಡ್‌ ಒಪ್ಪಿಗೆ ನೀಡಿತು. ಆ ಬಳಿಕ ಸದನಕ್ಕೆ ತೆರಳಿದ ಯಡಿಯೂರಪ್ಪ ಮೊದಲು ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿ ಭೋಜನ ವಿರಾಮದ ಬಳಿಕ ನಿರ್ಣಯ ಮಂಡಿಸಿದರಾದರೂ ವಿಶ್ವಾಸ ಮತ ಯಾಚನೆ ಮಾಡದೇ ವಿದಾಯ ಭಾಷಣದೊಂದಿಗೆ ಹೊರ ನಡೆದರು.

ಇದರೊಂದಿಗೆ 1996ರ ಮೇ ತಿಂಗಳಲ್ಲಿ 13 ದಿನಗಳ ಕಾಲ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಬಹುಮತ ಸಾಬೀತಾಗದೇ ವಿದಾಯ ಭಾಷಣ ಮಾಡಿ ಹೊರ ನಡೆದ ಘಟನೆ ನೆನಪಿಸುವಂತೆ ಮಾಡಿದ ಯಡಿಯೂರಪ್ಪ 'ತಾನು ಅಧಿಕಾರ ದಾಹಿಯಲ್ಲ' ಎಂಬ ಸಂದೇಶವನ್ನು ಈ ನಡೆಯ ಮೂಲಕ ರವಾನಿಸಲು ಪ್ರಯತ್ನಿಸಿದ್ದಾರೆ. ಕಾಂಗ್ರೆಸ್‌ ಸರಕಾರದ ವಿರುದ್ಧ ಇದ್ದ ಜನಾಕ್ರೋಶವನ್ನು ಜನಾದೇಶವಾಗಿ ಪರಿವರ್ತಿಸಲು ವಿಫಲವಾದ ಬಿಜೆಪಿ ಮತ್ತೆ ಪ್ರತಿಪಕ್ಷ ಸ್ಥಾನ ಅಲಂಕರಿಸುವುದು ಈಗ ಅನಿವಾರ್ಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ