ಆ್ಯಪ್ನಗರ

Cow Slaughter: ಲವ್ ಜಿಹಾದ್, ಗೋಹತ್ಯೆ ನಿಷೇಧ: ಬಿಜೆಪಿಗೆ ಸಿಕ್ಕಿವೆ ಪ್ರಬಲ ಚುನಾವಣಾ ಅಸ್ತ್ರ!

ಗೋಹತ್ಯೆ ನಿಷೇಧ ಹಾಗೂ ಲವ್ ಜಿಹಾದ್ ತಡೆಗೆ ಕಾಯ್ದೆ ವಿಚಾರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಪ್ರಬಲ ಅಸ್ತ್ರ ಸಿಕ್ಕಂತ್ತಾಗಿವೆ. ಈ ನಿಟ್ಟಿನಲ್ಲಿ ಕಾಯ್ದೆ ಜಾರಿಗೆ ಚಿಂತನೆ ನಡೆಯುತ್ತಿದೆ. ಆದರೆ ಇವು ಎಷ್ಟರ ಮಟ್ಟಿಗೆ ವರ್ಕೌಟ್‌ ಆಗಲಿದೆ?

Vijaya Karnataka Web 23 Nov 2020, 10:02 am
ಬೆಂಗಳೂರು: ಲವ್ ಜಿಹಾದ್, ಗೋಹತ್ಯೆ ನಿಷೇಧ ಕಾಯ್ದೆ. ಹೌದು ಸದ್ಯ ರಾಜ್ಯದಲ್ಲಿ ಇವೆರಡು ಮತ್ತೆ ಸದ್ದು ಮಾಡುಲು ಆರಂಭಿಸಿವೆ. ಮೂರು ಕ್ಷೇತ್ರಗಳ ಉಪಚುನಾವಣೆಯ ಜೊತೆಗೆ ಇನ್ನೇನು ಸಾವರ್ತಿಕ ಚುನಾವಣೆಗೆ ಎರಡುವರೆ ವರ್ಷಗಳಷ್ಟೇ ಬಾಕಿ ಉಳಿದಿವೆ. ಆದರೆ ಬಿಜೆಪಿ ಈಗಾಗಲೇ ತಯಾರಿ ಶುರುಮಾಡಿಕೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಲವ್ ಜಿಹಾದ್ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಪ್ರಬಲ ಚುನಾವಣಾ ಅಸ್ತ್ರವಾಗಿ ಬಳಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
Vijaya Karnataka Web LOVE JIHAD



ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಲವ್ ಜಿಹಾದ್ ತಡೆಗೆ ಕಾಯ್ದೆ ರೂಪಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಈ ಚರ್ಚೆ ಚುರುಕುಪಡೆದುಕೊಂಡಿದೆ. ಆರಂಭಿಕ ಹಂತವಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವುದು ಬಿಜೆಪಿ ಚಿಂತನೆಯಾಗಿದೆ. ಇದಾದ ಬಳಿಕ ಚುನಾವಣೆ ಹತ್ತಿರ ಬರುವ ಸಂದರ್ಭದಲ್ಲಿ ಲವ್ ಜಿಹಾದ್ ತಡೆ ಕಾಯ್ದೆಯನ್ನು ಜಾರಿಗೆ ತರುವುದು ಬಿಜೆಪಿಯ ತಂತ್ರಗಾರಿಕೆಯಾಗಿದೆ ಎನ್ನುತ್ತಿವೆ ಮೂಲಗಳು.

‘ಲವ್‌ ಜಿಹಾದ್‌’ ಮಟ್ಟ ಹಾಕಲು ಹರಿಯಾಣದಲ್ಲೂ ಕಾನೂನು; ಯೋಗಿ ಆದಿತ್ಯನಾಥ್‌ ನಡೆ ಅನುಸರಿಸಿದ ಖಟ್ಟರ್

ಡಿಸೆಂಬರ್‌ 7 ರಿಂದ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳಲಿದೆ. ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಸೂದೆ ಮಂಡನೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ಕುರಿತಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೂಡಾ ಸುಳಿವು ನೀಡಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯ ಬಿಜೆಪಿ ಟ್ವಿಟ್ಟರ್‌ನಲ್ಲೂ ಈ ವಿಚಾರವನ್ನು ಹಂಚಿಕೊಂಡಿದೆ.


ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಂಡರೆ ಬಿಜೆಪಿ ಸರ್ಕಾರದ ಬಗ್ಗೆ ಒಂದು ವಿಭಾಗದ ಜನರಲ್ಲಿ ಒಲವು ಹೆಚ್ಚಾಗಲಿದೆ. ಆಡಳಿತ ವಿರೋಧಿ ಅಲೆಯೂ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಅಲ್ದೆ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯೂ ಈಡೇರಿದ ಹಾಗಾಗುತ್ತದೆ. ಇದಕ್ಕಾಗಿ ಆರಂಭಿಕ ಹಂತವಾಗಿ ಗೋಹತ್ಯೆ ನಿಷೇಧ ಜಾರಿಗೊಳಿಸಿಲು ಸರ್ಕಾರ ಚಿಂತನೆ ನಡೆಸುತ್ತಿದೆ.

ಇನ್ನೊಂದು ಧರ್ಮಕ್ಕೆ ಮತಾಂತರವಾಗುವುದು ಅವರ ವೈಯುಕ್ತಿಕ: ಲವ್‌ ಜಿಹಾದ್‌ ಕಾನೂನಿನ ವಿರುದ್ಧ ಸಿದ್ದರಾಮಯ್ಯ ಕಿಡಿ

ಇನ್ನು ಕಳೆದ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಲವ್ ಜಿಹಾದ್ ಸಾಕಷ್ಟು ಸದ್ದು ಮಾಡಿತ್ತು. ಕರಾವಳಿ ಭಾಗದಲ್ಲಿ ಇದು ಪ್ರಮುಖ ಚುನಾವಣಾ ವಿಚಾರವಾಗಿತ್ತು. ಸಂಘಪರಿವಾರದ ಸಂಘಟನೆಗಳು ಲವ್ ಜಿಹಾದ್ ವಿರುದ್ಧ ಮನೆ ಮನೆ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಬಿಜೆಪಿ ಅಭ್ಯರ್ಥಿಗಳು ಕೂಡಾ ಲವ್ ಜಿಹಾದ್ ಹಾಗೂ ಗೋಹತ್ಯೆ ನಿಷೇಧ ವಿಚಾರವನ್ನು ಬಗ್ಗೆ ಚುನಾವಣಾ ಪ್ರಚಾರದಲ್ಲೂ ಬಳಕೆ ಮಾಡಿದ್ದರು. ಇದು ಒಂದು ಹಂತದಲ್ಲಿ ಕರಾವಳಿಯಲ್ಲಿ ಬಿಜೆಪಿಗೆ ಲಾಬದಾಯಕವಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕರಾವಳಿಯ ತಂತ್ರಗಾರಿಕೆಯನ್ನು ರಾಜ್ಯದಲ್ಲಿ ಪ್ರಯೋಗ ಮಾಡಲು ಬಿಜೆಪಿ ನಿರ್ಧರಿಸಿದೆ.

ಮಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಹಾಗೂ ಕೋರ್ ಕಮಿಟಿ ಸಭೆಯಲ್ಲೂ ಲವ್ ಜಿಹಾದ್‌ ಕುರಿತಾಗಿ ಚರ್ಚೆ ನಡೆದಿದೆ. ಅಲ್ಲದೆ ಸ್ವತಃ ಮುಖ್ಯಮಂತ್ರಿ ಕೂಡಾ ಲವ್ ಜಿಹಾದ್ ತಡೆಗೆ ಕಾಯ್ದೆ ರೂಪಿಸುವ ಕುರಿತಾಗಿ ಹೇಳಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಚುನಾವಣೆ ಸಮೀಪವಾಗುತ್ತಿದ್ದಂತೆ ಲವ್ ಜಿಹಾದ್ ಕುರಿತಾಗಿ ಕಾಯ್ದೆಯನ್ನು ಜಾರಿಗೊಳಿಸುವ ಸಾಧ್ಯತೆಯೂ ಇದೆ ಎನ್ನುತ್ತಿವೆ ಮೂಲಗಳು. ಒಟ್ಟಿನಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇವೆರಡು ವಿಚಾರಗಳು ಭಾರೀ ಸದ್ದು ಮಾಡುವುದರಲ್ಲಿ ಸಂಶಯವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ