ಆ್ಯಪ್ನಗರ

ಕಡಿಮೆ ದರದ ಮದ್ಯ: ಬೆಳಿಗ್ಗೆ ಹೇಳಿಕೆ ನೀಡಿ ಸಂಜೆ ಯೂ ಟರ್ನ್‌ ಹೊಡೆದ ಅಬಕಾರಿ ಸಚಿವ

ಬಡವರಿಗೆ ಹೊರೆಯಾಗದಂತೆ ಕಡಿಮೆ ದರದಲ್ಲಿ ಗುಣಮಟ್ಟದ ಮದ್ಯ ಪೂರೈಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಮುಂದಿನ ಬಜೆಟ್‌ನಲ್ಲಿ ಬಡವರಿಗೆ ಸಿಹಿ ಸುದ್ದಿ ನೀಡುವುದಾಗಿ ಸಚಿವರು ತಿಳಿಸಿದ್ದರು. ಆದರೆ ಸಂಜೆ ವೇಳೆಗೆ ಅವರು ಉಲ್ಟಾ ಹೊಡೆದು ಹೊಸವರ್ಷಕ್ಕೂ ಮುನ್ನ ಕುಡುಕರಿಗೆ ಕಹಿ ಸುದ್ದಿ ನೀಡಿದ್ದಾರೆ.

Vijaya Karnataka 31 Dec 2019, 8:42 pm
ಬೆಂಗಳೂರು: ಬಡ ಜನರು ಹೆಚ್ಚು ಬಳಕೆ ಮಾಡುವ ಮದ್ಯವನ್ನು ಕಡಿಮೆ ದರದಲ್ಲಿ ಪೂರೈಕೆ ಮಾಡುವ ಸಂಬಂಧ ಚಿಂತನೆ ನಡೆದಿದೆ ಎಂದು ಅಬಕಾರಿ ಸಚಿವ ಎಚ್‌ ನಾಗೇಶ್‌ ಪ್ರಕಟಿಸಿದರು.
Vijaya Karnataka Web H Nagesh


ವಿಕಾಸಸೌಧದ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಈ ಹೇಳಿಕೆ ನೀಡಿದರು. ಆದರೆ, ಸಂಜೆ ವೇಳೆಗೆ ಯೂಟರ್ನ್‌ ತೆಗೆದುಕೊಂಡ ಅವರು ‘ಅಗ್ಗದ ದರದಲ್ಲಿಅಥವಾ ಸಬ್ಸಿಡಿ ಮದ್ಯ ಪೂರೈಕೆ ಪ್ರಸ್ತಾವನೆ ಸರಕಾರದ ಮುಂದಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಸಾರಾಯಿ ನಿಷೇಧದ ಬಳಿಕ ಬಡವರು ಹೆಚ್ಚು ಬಳಸುತ್ತಿರುವ ಮದ್ಯದ ದರ ಹೆಚ್ಚಿದೆ. ಬಡವರಿಗೆ ಹೊರೆಯಾಗದಂತೆ ಕಡಿಮೆ ದರದಲ್ಲಿ ಗುಣಮಟ್ಟದ ಮದ್ಯ ಪೂರೈಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಮುಂದಿನ ಬಜೆಟ್‌ನಲ್ಲಿ ಬಡವರಿಗೆ ಸಿಹಿ ಸುದ್ದಿ ನೀಡುವುದಾಗಿ ಸಚಿವರು ತಿಳಿಸಿದ್ದರು. ಆದರೆ, ಈ ಹೇಳಿಕೆಗೆ ಆಕ್ಷೇಪ, ಪ್ರತಿಕ್ರಿಯೆಗಳು ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವರು ಮಾಧ್ಯಮಗಳಿಗೆ ಸ್ಪಷ್ಟನೆ ಬಿಡುಗಡೆ ಮಾಡಿದರು.

ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿಆರ್ಥಿಕ ಸಂಕಷ್ಟ ಎದುರಾಗಿದೆ. ಅದಕ್ಕಾಗಿ ಬಡವರಿಗೆ ಹೆಚ್ಚು ಮದ್ಯ ಕುಡಿಸಲು ಸರಕಾರ ಹೊರಟಿದೆ. ಹೆಂಡ ಕುಡಿಸುವ ಬದಲು ಜನರಿಗೆ ಮೊದಲು ಶುದ್ಧ ಕುಡಿಯುವ ನೀರು ಕೊಡಿ. ಲಿಕ್ಕರ್‌ ಸಂಸ್ಕೃತಿಗೆ ಕಡಿವಾಣ ಬೀಳಬೇಕು.
ವಿಎಸ್‌ ಉಗ್ರಪ್ಪ, ಮಾಜಿ ಸಂಸದ.


‘‘ಕಡಿಮೆ ದರದಲ್ಲಿಉತ್ತಮ ಗುಣಮಟ್ಟದ ಮದ್ಯ ಸರಬರಾಜು ಬಗ್ಗೆ ಬೇಡಿಕೆ ಇದೆ. 2013 ರಿಂದಲೂ ಈ ಪ್ರಸ್ತಾವನೆ ಇದೆ. ಈ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಈ ಬೇಡಿಕೆ ಬಹುದಿನಗಳಿಂದ ಇರುವುದು ನಿಜ ಎಂದು ಪ್ರತಿಕ್ರಿಯಿಸಿದ್ದೆ. ಆದರೆ, ಅಂತಹ ಪ್ರಸ್ತಾವನೆ ಸದ್ಯಕ್ಕೆ ಸರಕಾರದ ಮುಂದಿಲ್ಲ,’’ ಎಂದು ಸಚಿವರು ಲಿಖಿತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಅಬಕಾರಿ ಸಚಿವರಾದ ಹೊಸತರಲ್ಲಿಇಲಾಖಾಧಿಕಾರಿಗಳ ಸಭೆ ನಡೆಸಿದ್ದ ಸಚಿವ ನಾಗೇಶ್‌ ಅವರು, ಮನೆಮನೆಗೆ ಮದ್ಯ ಸರಬರಾಜು ಮಾಡುವ ಉದ್ದೇಶವನ್ನು ಪ್ರಕಟಿಸಿದ್ದರು. ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಮರುದಿನವೇ ತಮ್ಮ ಹೇಳಿಕೆಯನ್ನು ಅಲ್ಲಗಳೆದಿದ್ದರು.

ಎಂಎಸ್‌ಐಎಲ್‌ ಮಳಿಗೆ

‘‘ಗ್ರಾಮೀಣ ಭಾಗದಲ್ಲಿ ಕಿರಾಣಿ ಅಂಗಡಿಗಳಲ್ಲಿಅಕ್ರಮವಾಗಿ, ದುಬಾರಿ ದರಕ್ಕೆ ಮದ್ಯ ಮಾರಾಟ ಮಾಡುವುದನ್ನು ತಪ್ಪಿಸಲು ಎಂಎಸ್‌ಐಎಲ್‌ ಮೂಲಕ ಮದ್ಯದಂಗಡಿ ತೆರೆಯಲಾಗುವುದು’’ ಎಂದು ಸಚಿವರು ತಿಳಿಸಿದರು.

ಬೇಡಿಕೆಗೆ ತಕ್ಕಷ್ಟು ಬಿಯರ್‌ ಪೂರೈಕೆ ಮಾಡುತ್ತಿಲ್ಲ. ಬಿಯರ್‌ ಮಾರಾಟ ತಗ್ಗಿಸಿ ಹಾಟ್‌ ಲಿಕ್ಕರ್‌ ಹೆಚ್ಚು ಮಾರಾಟ ಮಾಡಲು ಮದ್ಯ ಮಾರಾಟಗಾರರ ಮೇಲೆ ಇಲಾಖೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂಬ ದೂರುಗಳಿವೆ. ಈ ಬಗ್ಗೆ ಆಯುಕ್ತರೊಂದಿಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡುತ್ತೇನೆ.
ಎಚ್‌ ನಾಗೇಶ್‌, ಅಬಕಾರಿ ಸಚಿವ

‘‘ರಾಜ್ಯದಲ್ಲಿಈಗಾಗಲೇ 765 ಎಂಎಸ್‌ಐಎಲ್‌ ಮಳಿಗೆಗಳಿದ್ದು, ಬೇಡಿಕೆ ಆಧರಿಸಿ ಹೊಸದಾಗಿ 408 ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ’’ ಎಂದರು.

ಗುರಿ ಸಾಧನೆ

‘‘ಪ್ರಸಕ್ತ ಸಾಲಿನಲ್ಲಿ20,950 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹ ಗುರಿ ನಿಗದಿಯಾಗಿದ್ದು, ಈವರೆಗೆ 16,100 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ. ಡಿಸೆಂಬರ್‌ ಒಂದೇ ತಿಂಗಳಲ್ಲಿ 1,700 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹವಾಗಿದ್ದು, ನಿಗದಿತ ಗುರಿ ತಲುಪುವ ವಿಶ್ವಾಸವಿದೆ’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ