ಆ್ಯಪ್ನಗರ

ಕೆಂಪೇಗೌಡರ ಬದಲು ಮದಕರಿ ಭಾವಚಿತ್ರ?

ಕನ್ನಡ ಸಂಸ್ಕೃತಿ ಇಲಾಖೆ ಮಾಡಿರುವ ಎಡವಟ್ಟಿನಿಂದ ರಾಜ್ಯಾದ್ಯಂತ ಮದಕರಿ ನಾಯಕ ಭಾವಚಿತ್ರಕ್ಕೆ ಕೆಂಪೇಗೌಡ ಎಂದು ಪೂಜೆ ಸಲ್ಲಿಸಲಾಗಿದೆ.

Vijaya Karnataka 31 Aug 2017, 7:56 am
ಚಿತ್ರದುರ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೀರಮದಕರಿನಾಯಕನ ಚಿತ್ರವನ್ನೇ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಎಂದು ಅಧಿಕೃತ ಮುದ್ರೆ ಒತ್ತಿದೆಯೇ? ಕೆಂಪೇಗೌಡರ ಭಾವಚಿತ್ರ ಅಂತಿಮಗೊಳಿಸುವ ಮುನ್ನ ಪರಿಶೀಲಿಸುವ ಗೋಜಿಗೆ ಹೋಗಲಿಲ್ಲವೇ? ಹೀಗೊಂದು ಪ್ರಮಾದವಾಗಿರುವುದು ಇಲಾಖೆಯ ಗಮನಕ್ಕೇ ಬಂದಿಲ್ಲವೇ?
Vijaya Karnataka Web madakari nayaka photo put in place of kempegowda
ಕೆಂಪೇಗೌಡರ ಬದಲು ಮದಕರಿ ಭಾವಚಿತ್ರ?


ಜಿಲ್ಲಾಡಳಿತ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಇಂತಹದೊಂದು ಜಿಜ್ಞಾಸೆ ವ್ಯಕ್ತವಾಯಿತು.

ಗುರುಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಟ್ಟಿದ್ದ ಭಾವಚಿತ್ರ ಚಿತ್ರದುರ್ಗದ ಹಳೇ ನಗರಸಭೆ ಮುಂಭಾಗ ಅಶ್ವಾರೂಢಿ ವೀರಮದಕರಿ ನಾಯಕನ ಭಾವಚಿತ್ರವನ್ನೇ ಹೋಲುತ್ತಿತ್ತು. ಜಿಲ್ಲಾಧಿಕಾರಿ, ಶಾಸಕರಾದಿಯಾಗಿ ಎಲ್ಲ ಗಣ್ಯರು ಇದೇ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕೆಂಪೇಗೌಡರ ಚರಿತ್ರೆ, ಅವರ ಸಾಧನೆಗಳು, ಮುನ್ನೋಟ ಕುರಿತು ಭಾಷಣಗಳೂ ಮುಗಿದವು. ಕಾರ್ಯಕ್ರಮದ ಕೊನೆಯಲ್ಲಿ ಭಾವಚಿತ್ರದ ಕುರಿತು ಜಿಜ್ಞಾಸೆ ಹೊಂದಿದ್ದ ಸಭಿಕರು, ಸಂಘಟಕರು ಜಿಲ್ಲಾಧಿಕಾರಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರನ್ನು ಪ್ರಶ್ನಿಸಿದರು. ಆಗ ಸ್ಪಷ್ಟನೆ ನೀಡಿದ ಇಲಾಖೆ ನಿರ್ದೇಶಕ ನಿಜಲಿಂಗಪ್ಪ 'ಇಲಾಖೆಯಿಂದ ಇದೇ ಚಿತ್ರ ಕಳುಹಿಸಲಾಗಿದೆ. ಅದನ್ನೇ ನಾವು ಬಳಸಿಕೊಂಡಿದ್ದೇವೆ. ನಮ್ಮಿಂದ ಯಾವುದೇ ಲೋಪ ಆಗಿಲ್ಲ' ಎಂದರು.

ಸರಕಾರ ಯಾವುದೇ ದಾರ್ಶನಿಕರ ಜಯಂತಿ ಆಚರಣೆ ಮಾಡುವ ತೀರ್ಮಾನ ಕೈಗೊಂಡ ಬಳಿಕ ಸಂಂಬಂಧಪಟ್ಟ ಚಾರಿತ್ರಿಕ ವ್ಯಕ್ತಿ, ದಾರ್ಶನಿಕ, ಧಾರ್ಮಿಕರ ಚಿತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂತಿಮಗೊಳಿಸುತ್ತದೆ. ಅದನ್ನೇ ಎಲ್ಲ ಜಿಲ್ಲೆಗಳಿಗೂ ಮಾದರಿಯಾಗಿ ಕಳುಹಿಸಲಾಗುತ್ತದೆ. ಈಗ ಅಶ್ವಾರೋಹಿ ಮದಕರಿ ನಾಯಕನನ್ನೇ ಹೋಲುವ ಭಾವಚಿತ್ರವನ್ನೇ ಎಲ್ಲ ಜಿಲ್ಲೆಗಳಿಗೂ ಕಳುಹಿಸಲಾಗಿದೆ ಎನ್ನಲಾಗಿದೆ.

ಸ್ಥಳೀಯರ ನಿರಾಕರಣೆ

ಅಧಿಕಾರಿಗಳ ವಿವರಣೆಯ ನಂತರವೂ ಬಹುತೇಕ ಸಭಿಕರು ಅದು ಕೆಂಪೇಗೌಡರ ಭಾವಚಿತ್ರ ಎಂಬುದನ್ನು ಒಪ್ಪಲಿಲ್ಲ. ಪ್ರಮಾದವಾಗಿದೆ ಎನ್ನುವ ಚರ್ಚೆ ಕಾವು ಪಡೆದುಕೊಳ್ಳುತ್ತಿದ್ದಂತೆ ಬಹಳಷ್ಟು ಸಭಿಕರು ಹೋಗಿ ಪೂಜೆಗಿಟ್ಟಿದ್ದ ಭಾವಚಿತ್ರದ ಫೂಟೋ ತೆಗೆದುಕೊಂಡರು. ಕೆಲವರು ಸಾಮಾಜಿಕ ಜಾಲತಾಣಗಳಲ್ಲೂ ಹಾಕಿ ತಮ್ಮ ಜಿಜ್ಞಾಸೆ ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಬಳಸಲಾದ ಫೂಟೋ ಚಿತ್ರದುರ್ಗ ನಗರಸಭೆ ಪ್ರತಿಮೆಯದ್ದೇ ಆಗಿದೆ. ಸರಕಾರ ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ನೀಡಿದ ಜಾಹಿರಾತುಗಳಲ್ಲಿ ಇದೇ ಭಾವಚಿತ್ರ ಬಳಸಿತ್ತು. ಚಿತ್ರದಲ್ಲಿರುವ ಕುದುರೆ, ವ್ಯಕ್ತಿಯ ಮೀಸೆ, ಪೇಟೆ, ಕತ್ತಿ ಎಲ್ಲವೂ ಮದಕರಿ ಪ್ರತಿಮೆಯದ್ದೇ. ಹಿನ್ನೆಲೆಯ ಗಿಡಮರದ ಚಿತ್ರ ಕೂಡಾ ಇಲ್ಲಿನದ್ದೇ. ಯಾರೋ ನೀಡಿದ ತಪ್ಪು ಮಾಹಿತಿಯಿಂದಾಗಿ ಇದು ಬಳಕೆಯಾಗಿರಬಹುದು' ಎಂದು ಹೇಳುತ್ತಾರೆ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ.

Madakari Nayaka Photo put in place of Kempegowda

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ