ಆ್ಯಪ್ನಗರ

'ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸ್ತೇನೆ': ಮಾಧುಸ್ವಾಮಿ ಎಡವಟ್ಟು

ಮೈತ್ರಿ ಸರಕಾರದ ವಿಶ್ವಾಸಮತ ಸಾಬೀತು ಪಡಿಸುವ ಸಂದರ್ಭ ಉತ್ತಮ ಸಂಸದೀಯ ಪಟುವಾಗಿ ಗುರುತಿಸಿಕೊಂಡ ಶಾಸಕ ಜೆಸಿ ಮಾಧುಸ್ವಾಮಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಅವರನ್ನು ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿಸಲಾಗಿತ್ತು. ಸಚಿವರಾಗಿ ಪ್ರಮಾಣ ವಚನ ಮಾಡುವ ವೇಳೆ ಅವರೂ ಸಹ ಅದೇ ರೀತಿ ಎಡವಟ್ಟು ಮಾಡಿಕೊಂಡಿದ್ದಾರೆ.

Vijaya Karnataka Web 20 Aug 2019, 12:06 pm
ಬೆಂಗಳೂರು: ಹಲವು ದಿನಗಳ ಬಳಿಕ ಕೊನೆಗೂ ಯಡಿಯೂರಪ್ಪ ಸರಕಾರದ ಕ್ಯಾಬಿನೆಟ್ ವಿಸ್ತರಣೆಯಾಗಿದೆ. ಈ ಪೈಕಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರದ ವಿಶ್ವಾಸಮತ ಸಾಬೀತು ಪಡಿಸುವ ಚರ್ಚೆಯಲ್ಲಿ ಪ್ರಖರವಾಗಿ ವಾದ ಮಂಡಿಸಿದ್ದ ತುಮಕೂರಿನ ಚಿಕ್ಕನಾಯಕನಹಳ್ಳಿಯ ಶಾಸಕ ಮಾಧುಸ್ವಾಮಿಗೆ ಇದೇ ಮೊದಲ ಬಾರಿಗೆ ಸಚಿವ ಸ್ಥಾನ ಸಿಕ್ಕಿದೆ.
Vijaya Karnataka Web J C Maadhuswamy - Chikkanayakanahalli AC.


ಹಿರಿಯ ರಾಜಕಾರಣಿ ತುಮಕೂರಿನ ಚಿಕ್ಕನಾಯಕನಹಳ್ಳಿಯ ಶಾಸಕ ಮಾಧುಸ್ವಾಮಿ ಮಂಗಳವಾರ ಬೆಳಗ್ಗೆ ರಾಜ್ಯದ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಪ್ರಮಾಣ ವಚನ ಸ್ವೀಕರಿಸುವ ವೇಳೆ ಬಾಯ್ತಪ್ಪಿ ಅವರು ಮಂತ್ರಿಯಾಗಿ ಎನ್ನುವ ಬದಲು ಮುಖ್ಯಮಂತ್ರಿಯಾಗಿ ಎಂದು ಹೇಳಿದರು. ಬಳಿಕ ತಕ್ಷಣವೇ ಅವರು ಮಂತ್ರಿಯಾಗಿ ಎಂದೂ ಸರಿಪಡಿಸಿಕೊಂಡು ಪ್ರಮಾಣ ವಚನ ಸ್ವೀಕಾರ ಮಾಡಿದರು.

ಇದನ್ನು ಓದಿ: ಬಿಎಸ್‌ವೈ ಸಂಪುಟದಲ್ಲಿ ಯಾರ‍್ಯಾರಿಗೆ ತಪ್ಪಿದೆ ಸಚಿವ ಸ್ಥಾನ? ಇಲ್ಲಿದೆ ನೋಡಿ

ಕಾಂಗ್ರೆಸ್ - ಜೆಡಿಎಸ್‌ ಸಮ್ಮಿಶ್ರ ಸರಕಾರ ಪತನಗೊಂಡ ಬಳಿಕ ಯಡಿಯೂರಪ್ಪ ಸಿಎಂ ಆಗುವುದು ಪಕ್ಕಾ ಎಂದೇ ಹೇಳಲಾಗುತ್ತಿತ್ತು. ಆದರೆ, ಒಂದು ವಲಯದಲ್ಲಿ ಆರ್‌ಎಸ್‌ಎಸ್‌ ಮಾಧುಸ್ವಾಮಿಗೆ ಬೆಂಬಲ ನೀಡಿದೆ. ಅವರೇ ಸಿಎಂ ಆಗಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿತ್ತು. ಈ ಹಿನ್ನೆಲೆ ಅವರು ಬಾಯಿತಪ್ಪಿ ಮುಖ್ಯಮಂತ್ರಿ ಎಂದಿದ್ದಾರಾ ಎಂಬ ಮಾತುಗಳೂ ಕೇಳಿಬರುತ್ತಿದೆ.

ಸದನದ ಹೊರಗೆ ಮತ್ತು ಒಳಗೆ ಸಿಎಂ ಯಡಿಯೂರಪ್ಪ ಅವರ ಪಾಲಿಗೆ ಆಪತ್ಬಾಂಧವ ಎಂದೇ ಗುರುತಿಸಿಕೊಂಡವರು ಮಾಧುಸ್ವಾಮಿ. ಅಂದಿನ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಪರೇಷನ್‌ ಆಡಿಯೋ ಬಾಂಬ್‌ ಸಿಡಿಸಿದ್ದಾಗ ಬಿಎಸ್‌ ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದ್ದರು. ಹೀಗಾಗಿ ನಿರೀಕ್ಷೆಯಂತೆ ಮಾಧುಸ್ವಾಮಿ ಅವರಿಗೆ ಮಂತ್ರಿಸ್ಥಾನ ಲಭಿಸಿದೆ. ಈ ಮೂಲಕ ಯಡಿಯೂರಪ್ಪ ಅವರ ಆಪ್ತವಲಯವನ್ನು ಹೈಕಮಾಂಡ್‌ ಕಡೆಗಣಿಸಿಲ್ಲ ಎಂಬುದು ರುಜುವಾತಾದಂತಾಗಿದೆ.

ಈ ಸುದ್ದಿ ಓದಿ: ಚಿಕ್ಕನಾಯಕನಹಳ್ಳಿಯ ಮಾಧುಸ್ವಾಮಿಗೆ ಮಂತ್ರಿ ಸ್ಥಾನ ಸಿಗಲು ಕಾರಣವೇನು?

ಕಾನೂನು, ಆಡಳಿತ, ಕೃಷಿ, ಸೇರಿದಂತೆ ಹಲವು ವಿಚಾರಗಳಲ್ಲಿ ಪರಿಣಿತರಾಗಿರುವ ಮಾಧುಸ್ವಾಮಿ ಯಾವುದೇ ವಿಚಾರಗಳನ್ನು ನೇರವಾಗಿ ಮಾತನಾಡುತ್ತಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕೆಲವು ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟು ಮುಂಬಯಿನಲ್ಲಿ ಕುಳಿತಿದ್ದ ಸಂದರ್ಭ ಮೈತ್ರಿ ನಾಯಕರ ಆಪರೇಷನ್‌ ಕಮಲ ನಡೆಸಲಾಗುತ್ತಿದೆ, ಶಾಸಕರನ್ನು ಅಪಹರಿಸಲಾಗಿದೆ ಎಂದು ಸದನದಲ್ಲಿ ಆಪಾದಿಸುತ್ತಿದ್ದಾಗ ಸಮರ್ಥವಾಗಿ ಮಾಧುಸ್ವಾಮಿ ಒಬ್ಬರೇ ಎದುರಿಸಿದ್ದರು. ಉತ್ತಮ ಸಂಸದೀಯ ಪಟುವಾಗಿ ಬೆಳಕಿಗೆ ಬಂದ ಮಾಧುಸ್ವಾಮಿ ತಮ್ಮ ಜತೆಗಿದ್ದರೆ ಸರಕಾರವನ್ನು ಸಮರ್ಥವಾಗಿ ಮುನ್ನಡೆಸಬಹುದು ಎಂಬುದನ್ನು ಯಡಿಯೂರಪ್ಪ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ